ಕರಾವಳಿ

ಡಾ. ಕಮಲಾ ಹಂಪನಾ, ಪ್ರಕಾಶ್ ರೈ,ಅನಿಲ್ ಪತ್ರಾವೊ ಸಹಿತ ಆರು ಮಂದಿಗೆ ಸಂದೇಶ ಪ್ರಶಸ್ತಿ

Pinterest LinkedIn Tumblr

sandesha_awards_1

ಮಂಗಳೂರು, ಡಿ.21: ಕಲೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಬಿಷಪರ ಮಂಡಳಿಯಿಂದ ಆರಂಬಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು 26ನೇ ವರ್ಷದ ಪ್ರಶಸ್ತಿಯನ್ನು ಘೋಷಿಸಿದ್ದು, ಪ್ರಶಸ್ತಿಗೆ ಪಾತ್ರರಾದವರ ವಿವರಗಳನ್ನು ಸಾಹಿತಿ ಹಾಗೂ ಸಂದೇಶ ಪ್ರಶಸ್ತಿ ಸಮಿತಿ ಅಧ್ಯಕ್ಷ ನಾ ಡಿಸೋಜ ಅವರು ಪ್ರಕಟಿಸಿದರು.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖ್ಯಾತ ಸಾಹಿತಿ ಡಾ.ಕಮಲಾ ಹಂಪನಾ(ಸಂದೇಶ ಸಾಹಿತ್ಯ ಪ್ರಶಸ್ತಿ), ಬಹುಭಾಷಾ ನಟ ಪ್ರಕಾಶ್ ರೈ(ಸಂದೇಶ ಮಾಧ್ಯಮ ಪ್ರಶಸ್ತಿ), ಜನಪದ ಕಲಾವಿದ ಯುವರಾಜ್ ಕೆ.(ಸಂದೇಶ ಕಲಾ ಪ್ರಶಸ್ತಿ), ಹಾರ್ಮೋನಿಯಂ ವಾದಕ ಅನಿಲ್ ಪತ್ರಾವೊ(ಕೊಂಕಣಿ ಮ್ಯೂಸಿಕ್ ಪ್ರಶಸ್ತಿ), ಕಲಾವಿದ ಜಾನ್ ದೇವರಾಜ್(ಸಂದೇಶ ವಿಶೇಷ ಪ್ರಶಸ್ತಿ) ಹಾಗೂ ಮದರ್ ಥೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ಶಿಕ್ಷಣ ಪ್ರಶಸ್ತಿ) ಈ ಬಾರಿಯ ಪ್ರಶಸ್ತಿಗೆ ಅಯ್ಕೆಯಾಗಿರುವುದಾಗಿ ತಿಳಿಸಿದರು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರು ಹಾಗೂ ಸಂದೇಶ ಪ್ರತಿಷ್ಠಾನದ ವಿಶ್ವಸ್ತರು ಆದ ರೋಯ್ ಕ್ಯಾಸ್ತಲಿನೊ ಅವರು ಮಾತನಾಡಿ, ನಾ ಡಿಸೋಜ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಡಾ.ನಾ. ದಾಮೋದರ ಶೆಟ್ಟಿ, ಸಾರಾ ಅಬೂಬಕರ್, ಚಂದ್ರಕಲಾ ನಂದಾವರ, ಎರಿಕ್ ಒಝಾರಿಯೊ ಹಾಗೂ ರಿಚರ್ಡ್ ಲೂವಿಸ್ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಸಹಕರಿಸಿದ್ದಾರೆ. ಸಂದೇಶ ಪ್ರತಿಷ್ಠಾನದ ನಿರ್ದೇಶಕರಾದ ವಂ| ಫಾ. ವಿಕ್ಟರ್ ವಿಜಯ್ ಲೋಬೊ ಅವರ ಮೇಲುಸ್ತುವಾರಿಯಲ್ಲಿ ಸಿದ್ಧಗೊಳಿಸಿದ ಪ್ರಶಸ್ತಿ ಫಲಿತಗಳನ್ನು ಇಂದು ಬಿಡುಗಡೆಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಕಲೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕಥೋಲಿಕ ಬಿಷಪರ ಮಂಡಳಿಯಿಂದ ಆರಂಬಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು ವಿವಿದ ಚಟುವಟಿಕೆಗಳ ಮೂಲಕ ಈ ಕೆಲಸವನ್ನು ಮಾಡುತ್ತ ಬಂದಿದೆ. ಕಳೆದ 26ವರ್ಷಗಳಿಂದ ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ ಸಂಸ್ಕೃತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡುತ್ತ ಬಂದ ನಾಡಿನ ಹಿರಿಯ ಸಾಹಿತಿಗಳನ್ನು, ಕಲಾವಿದರನ್ನು, ಶಿಕ್ಷಕರನ್ನು ಹಾಗೂ ಸಮಾಜ ಸೇವಕರನ್ನು ರಾಜ್ಯ ಮಟ್ಟದ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸುತ್ತ ಬಂದಿದೆ.

ಈ ಪ್ರಶಸ್ತಿಗಳಿಗೆ ಯಾವುದೇ ಆರ್ಜಿಗಳನ್ನು ಅಥವಾ recomendation ಪಡಕೊಳ್ಳದೆ ಈ ವರ್ಷ ಶ್ರೀಯುತ ನಾ ಡಿಸೋಜಾ ರವರ ಅಧ್ಯಸ್ತಿಕೆಯಲ್ಲಿರುವ ಆಯ್ಕೆ ಸಮಿತಿಯು ಪುರಸ್ಕೃತರನ್ನು ಆಯ್ಕೆ ಮಾಡಿದೆ. ಸಂದೇಶ ಪ್ರಶಸ್ತಿ ವಿತರಣಾ ಸಮಾರಂಭವು ಜ.13ರಂದು ಸಂಜೆ 5:30ಕ್ಕೆ ನಗರದ ಸಂದೇಶ ಕಚೇರಿಯಲ್ಲಿ ನಡೆಯಲಿದೆ ಎಂದವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ| ಫಾ. ವಿಕ್ಟರ್ ವಿಜಯ್ ಲೋಬೊ ಉಪಸ್ಥಿತರಿದ್ದರು.

ಪ್ರಶಸ್ತಿ ವಿಜೇತರ ವಿವರ

ಡಾ.ಕಮಲಾ ಹಂಪನಾ

dr-kamala-hampana
ಬೆಂಗಳೂರಿನ ದೇವನಹಳ್ಳಿಯಲ್ಲಿ ಅಕ್ಟೋಬರ್ 28, 1935ರಲ್ಲಿ ರಂಗ ಲಕ್ಷ್ಮಮ್ಮ-ರಂಗಧಾಮ ನಾಯಕರ ಪುತ್ರಿಯಾಗಿ ಜನಿಸಿರುವ ಇವರು ಪ್ರೊ.ಹಂಪ ನಾಗರಾಜಯ್ಯ ಅವರ ಧರ್ಮಪತ್ನಿಯಾಗಿ, ಸಾಹಿತ್ಯ ಕ್ಷೇತ್ರದ ಧ್ರುವತಾರೆಯಾಗಿ ಇಂದಿಗೂ ಮಿನುಗುತ್ತಿದ್ದಾರೆ. ಸಂಶೋಧನೆ, ವಿಮರ್ಶೆ, ವ್ಯಕ್ತಿಚಿತ್ರ, ಜೀವನ ಚರಿತ್ರೆ, ಬಾನುಲಿ ನಾಟಕ, ಕಥಾಸಂಕಲನ, ಶಿಶು ಸಾಹಿತ್ಯ, ಆಧುನಿಕ ವಚನ, ಮಹಿಳಾ ಸಾಹಿತ್ಯ ಇತ್ಯಾದಿ ಹಲವು ಪ್ರಕಾರಗಳಲ್ಲಿ ಡಾ.ಕಮಲಾ ಹಂಪನಾ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಪ್ರಕಾಶ್ ರೈ

prakash-rai
ಭಾರತದ ಶ್ರೇಷ್ಠ ನಟರಲ್ಲಿ ಒಬ್ಬರು ಎನಿಸಿಕೊಂಡಿರುವ ಪ್ರಕಾಶ್ ರೈ, ತುಳುನಾಡಿನಿಂದ ಹೊರಟು, ರಾಜಧಾನಿಗೆ ತಲುಪಿ, ರಾಷ್ಟ್ರಮಟ್ಟಕ್ಕೇರಿದ ಬಹುಭಾಷಾ ನಟ. ತುಳುವರಾಗಿ ಜನಿಸಿದ ಅವರು ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳ ಹಾಗೂ ಇಂಗ್ಲಿಷ್ ಚಲನಚಿತ್ರಗಳಲ್ಲಿ ತಮ್ಮ ವಿಶಿಷ್ಟ ಶೈಲಿಯ ಅಭಿನಯದಿಂದ ಸಹನಟ, ನಾಯಕ ನಟ ಹಾಗೂ ಖಳನಾಯಕರಾಗಿ ಮಿಂಚಿದರು. ಸದಭಿರುಚಿಯ ಚಿತ್ರಗಳನ್ನು ಮಾಡುವ ಶಪಥ ತೊಟ್ಟವರಂತೆ ನಾನೂ ನನ್ನ ಕನಸು, ಒಗ್ಗರಣೆ, ಇದೊಳ್ಳೆ ರಾಮಾಯಣ ಮುಂತಾದ ಯಶಸ್ವೀ ಚಿತ್ರಗಳನ್ನು ಪ್ರಕಾಶ್ ರೈ ಕನ್ನಡಿಗರಿಗೆ ಕೊಡಮಾಡಿದರು. ಕಾಂಜೀವರಂ ಅವರ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಚಿತ್ರ.

ಯುವರಾಜ್ ಕೆ.

yuvaraj-k
1956ರಲ್ಲಿ ಜನಿಸಿದ ಯುವರಾಜ್ ವೃತ್ತಿಯಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಮೂರು ದಶಕಗಳ ಕಾಲ ದುಡಿದರು. ಪ್ರವೃತ್ತಿಯಲ್ಲಿ ಜನಪದ ಗಾಯಕರು ಹಾಗೂ ಜನಪದ ಹಾಡುಗಳ ಸಂಗ್ರಾಹಕರಾದರು. ನೂರಾರು ಜನಪದ ಗೀತೆಗಳನ್ನು ಕರ್ನಾಟಕದ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿ ಅವುಗಳನ್ನು ಕ್ಯಾಸೆಟ್ ಹಾಗೂ ಸಿ.ಡಿ. ರೂಪದಲ್ಲಿ ಹಾಡಿ, ದಾಖಲಿಸಿ ಜನಪದ ಲೋಕಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟರು. ಕರ್ನಾಟಕದ ಒಳ-ಹೊರಗುಗಳಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಅನಿಲ್ ಪತ್ರಾವೊ

anil-patrao
ತಮ್ಮ ನಾಲ್ಕನೆಯ ವಯಸ್ಸಿನಿಂದ ಹಾರ್ಮೋನಿಯಮ್ ಅಭ್ಯಾಸ ಮಾಡಲು ತೊಡಗಿದ ಅನಿಲ್, ಹನ್ನೆರಡರ ಹರೆಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಮ್ ನುಡಿಸತೊಡಗಿದರು. 1985ರಿಂದ ಇವರು ದೇರೆಬೈಲ್ ಚರ್ಚಿನ ಕೊಯರ್ ಮಾಸ್ಟರ್ ಆದರು. ಅನೇಕ ಶಿಷ್ಯರನ್ನು ತರಬೇತಿಗೊಳಿಸಿದರು. ಇನ್ನೂರಕ್ಕೂ ಹೆಚ್ಚು ಗೀತೆಗಳಿಗೆ ಸಂಗೀತ ಒದಗಿಸಿರುವ ಅನಿಲ್, ತನ್ನ ಸಹೋದರ ಜಾನ್ ಪತ್ರಾವೋ ಅವರೊಡಗೂಡಿ ಪತ್ರಾವೋ ನೈಟ್ ಎಂಬ ಹೆಸರಿನಲ್ಲಿ ಹಲವಾರು ಕೊಂಕಣಿ ಸಂಗೀತ ಸಂಜೆಗಳನ್ನು ಏರ್ಪಡಿಸಿದ್ದಾರೆ.

ಜಾನ್ ದೇವರಾಜ್

john-devaraj
ಜಾನ್ ದೇವರಾಜ್ ಮೂಲತಃ ಸಿವಿಲ್ ಇಂಜಿನಿಯರ್. 1956ರಲ್ಲಿ ಜನಿಸಿದ ದೇವರಾಜ್ ಶಿಲ್ಪಿಯಾಗಿ, ಚಿತ್ರ ಕಲಾವಿದರಾಗಿ, ಆರ್ಕಿಟೆಕ್ಟ್ ಆಗಿ, ಕಲಾ ನಿರ್ದೇಶಕರಾಗಿ, ಸಿನಿಮಾ ತಯಾರಕರಾಗಿ, ಛಾಯಾಚಿತ್ರಗಾರನಾಗಿ, ನಾಟಕಕಾರನಾಗಿ, ನಟನಾಗಿ, ಗೊಂಬೆಯಾಟಗಾರನಾಗಿ, ಸಂಘ ಸಂಸ್ಥೆಗಳ ಸಲಹೆಗಾರರಾಗಿ- ಹೀಗೆ ಹತ್ತು ಹಲವು ವಲಯಗಳಲ್ಲಿ ದುಡಿಯುತ್ತಿರುವ ಏಕವ್ಯಕ್ತಿ. ಜಗತ್ತಿನ ಅರುವತ್ತು ರಾಷ್ಟ್ರಗಳಿಂದ ಮಣ್ಣು ಮತ್ತು ನೀರನ್ನು ತರಿಸಿ ಅದರಲ್ಲೊಂದು ಅಪೂರ್ವ ಮ್ಯೂರಲ್ ಸಿದ್ಧಪಡಿಸಿ ನ್ಯೂಯಾರ್ಕಿನಲ್ಲಿ ಸ್ಥಾಪನೆ, ಆಸ್ಟ್ರಿಯಾದಲ್ಲಿ 25 ಅಡಿ ಎತ್ತರದ ಫ್ಯಾಸಿಸಮ್ಮಿಗೆ ವಿರುದ್ಧವಾದ ಸ್ಮಾರಕ ನಿರ್ಮಾಣ, ಪಾಕಿಸ್ತಾನದ ಮಕ್ಕಳಿಗಾಗಿ 370 ಅಡಿ ಉದ್ದ ಹಾಗೂ 280 ಅಡಿ ಅಗಲದ ಚಿತ್ರ ರಚನೆ, ಬೆಂಗಳೂರಿನ ಲಾಲ್ಬಾಗ್ನಲ್ಲಿ ಇಪ್ಪತ್ತೆರಡು ಅಡಿ ಎತ್ತರದ ಟೆರ್ರಕೋಟಾ ಶಿಲ್ಪರಚನೆ ಇವರ ದಾಖಲೆಗಳಾಗಿವೆ.

ಮದರ್ ಥೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್

mother-teresa-memorial
ಕುಂದಾಪುರದಿಂದ ಸುಮಾರು ಮೂವತ್ತು ಕಿ. ಮೀ. ಒಳಗಡೆಯ ಗ್ರಾಮೀಣ ಪ್ರದೇಶವಾದ ಶಂಕರನಾರಾಯಣದಲ್ಲಿದೆ ಮದರ್ ಥೆರೆಸಾ ಹೆಸರಿನ ಈ ಶಾಲೆ. ಇದು ಸ್ಥಾಪನೆಗೊಂಡದ್ದು 1998ರಲ್ಲಿ. ಮಂಗಳೂರಿನ ರೆನಿಟಾ ಲೋಬೊ ಮತ್ತು ಶಮಿತಾ ರಾವ್ ಎಂಬ ಇಬ್ಬರು ನಾರಿಮಣಿಯರು ತಮ್ಮ ಇಪ್ಪತ್ತೆರಡರ ಹರೆಯದಲ್ಲಿ ಕೈಗೊಂಡ ಸಾಹಸವಿದು. ಅನಕ್ಷರಸ್ತ ಹಳ್ಳಿಗರ ಮಕ್ಕಳಿಗೆ ಅಕ್ಷರ ಕೊಡುವುದೇ ಇದರ ಉದ್ದೇಶ. ಅಂದು ಅಲ್ಲಿನ ಪಂಚಾಯತ್ ಕಚೇರಿಯ ಬಯಲು ವೇದಿಕೆಯಲ್ಲಿ ಪ್ರಾರಂಭಗೊಂಡ ಎಲ್ಕೆಜಿ ಹಾಗೂ ಯುಕೆಜಿ ತರಗತಿಗಳು ಇದೀಗ ಅದು ಪಿಯುಸಿ ವರೆಗೆ ಬೆಳೆದು ನಿಂತಿದೆ. ನಡುವೆ ಈ ಇಬ್ಬರು ಯುವತಿಯರು ಪಟ್ಟ ಹರಸಾಹಸಗಳು ಇದೀಗ ಯಶೋಗಾಥೆಯಾಗಿ ಪರಿಣಮಿಸಿದೆ.

Comments are closed.