ಕುಂದಾಪುರ: ಚಿರತೆಯೊಂದು ಆಹಾರ ಅರಸಿ ಮನೆಯ ಪರಿಸರಕ್ಕೆ ಬಂದಾಗ ಅದರ ಎದುರಿಗೆ ಸಿಕ್ಕಿದ ನಾಯಿಯನ್ನು ಬೆನ್ನಟ್ಟಿ ಮನೆಯ ಅಂಗಳದ ಬಾವಿಗೆ ಬಿದ್ದ ಘಟನೆಯು ಉಳ್ಳೂರು-೭೪ನೇ ಗ್ರಾಮದ ಗುಡಿಕೇರಿಯಲ್ಲಿ ನಡೆದಿದೆ.
ಗುಡಿಕೇರಿ ರಘುರಾಮ ಶೆಟ್ಟಿ ಅವರು ಮಧ್ಯ ರಾತ್ರಿಯ ಸುಮಾರು 3 ಗಂಟೆಯ ಸಮಯದಲ್ಲಿ ನಾಯಿ ಬೊಬ್ಬೆ ಇಟ್ಟು ಓಡಿಬರುತ್ತಿರುವ ಶಬ್ಧಕ್ಕೆ ಎಚ್ಚರಗೊಂಡು ಮನೆಯಿಂದ ಹೊರಬಂದು ನೋಡಿದ್ದಾಗ, ಚಿರತೆಯೊಂದು ಬಾವಿಯಲ್ಲಿ ಬಿದ್ದಿರುದನ್ನು ಕಂಡರು. ರಘುರಾಮ ಶೆಟ್ಟಿ ಅವರು ಮೊದಲು ಯಾರೋ ಕಳ್ಳರು ಕಳ್ಳತನಕ ಬಂದು ಬಾವಿಗೆ ಬಿದ್ದಿರಬಹುದೆಂದು ಬಾವಿಯ ಬಳಿ ಬಂದು ಬ್ಯಾಟರಿಯ ಸಹಾಯದಿಂದ ನೋಡಿದ್ದಾಗ ಅದು ಚಿರತೆಯಾಗಿತ್ತು. ಮೊದಲ ಬಾರಿ ಮನೆಯ ಅಂಗಳ ಬಾವಿಯಲ್ಲಿ ಚಿರತೆ ಕಂಡು ಮನೆಯವರು ಹೌಹಾರಿದರು. ರಘುರಾಮ ಶೆಟ್ಟಿ ಅವರು ಬೆಳಗ್ಗೆ ಅರಣ್ಯ ಇಲಾಖೆ ಹಾಗೂ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದು ಅಂಗಳದಲ್ಲಿರುವ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಸ್ಥಳೀಯ ಯುವಕರ ಸಹಾಯದಿಂದ ಬಲೆಯ ಮೂಲಕ ಸುರಕ್ಷಿತವಾಗಿ ಮೇಲಕ್ಕೆತ್ತಿ ಕಮಲಶಿಲೆಯ ಬಳಿಯ ಪಾರೆಯ ಸುರಕ್ಷಿತ ಅರಣ್ಯಕ್ಕೆ ಬಿಟ್ಟರು.
ಶಂಕರನಾರಾಯಣ ವಲಯ ಅರಣ್ಯ ಅಧಿಕಾರಿ ಬ್ರಿಜೇಶ್ ವಿನಯಕುಮಾರ್ ನೇತ್ರತ್ವ ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ್, ಮಂಜುನಾಥ ಕಾಂಮ್ಳೆ, ವೀರಣ್ಣ, ಅರಣ್ಯ ರಕ್ಷಕರಾದ ಗುರುರಾಜ್, ಮಂಜುನಾಥ, ಶ್ರೀಕಾಂತ, ಪ್ರವೀಣ್, ರವಿ, ರವೀಂದ್ರ ಅವರು ನಡೆಸಿದ ಕಾರ್ಯಚರಣೆಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮೇಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ, ಗ್ರಾ. ಪಂ. ಸದಸ್ಯರಾದ ಪ್ರಸಾದ ಶೆಟ್ಟಿ, ಸಂತೋಷ ಪೂಜಾರಿ, ಮಾಜಿ ಸದಸ್ಯ ಸುಧೀರಕುಮಾರ ಶೆಟ್ಟಿ, ಸ್ಥಳೀಯ ಯುವಕರಾದ ಉದಯಕುಮಾರ ಶೆಟ್ಟಿ, ರಾಜು ಪೂಜಾರಿ, ರವಿಕಾಂತ ಆಚಾರ್ಯ, ಶೇಖರ ಶೆಟ್ಟಿ, ಸೇರಿದಂತೆ ಸ್ಥಳೀಯ ಯುವಕರು ಶ್ರಮವಹಿಸಿದ್ದರು.
Comments are closed.