ಕುಂದಾಪುರ: ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ನಾಳಿಕೇರ ಮಹಾಗಣಪತಿಯಾಗ ಇಂದು (ಡಿ.3 ಶನಿವಾರ) ಸಂಭ್ರಮ ಹಾಗೂ ಸಡಗರದಿಂದ ಜರುಗಿತು. ಈ ಸಂಭ್ರಮದ ಒಂದು ಸಣ್ಣ ಝಲಕ್ ಇಲ್ಲಿದೆ.
ಇದು ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಆನೆಗುಡ್ಡೆ ದೇವಸ್ಥಾನ. ಇಲ್ಲಿ ಪೂಜಿಸ್ಪಡುವ ಶ್ರೀ ವಿನಾಯಕ ದೇವರಿಗೆ ಇಂದು ರಥೋತ್ಸವ ಸಂಭ್ರಮ. ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿರುವ ಪುರಾಣ ಪ್ರಸಿದ್ಧ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ಕ್ಷೇತ್ರದಲ್ಲಿ ಹಿಂದೆ ಗೌತಮರು ತಪಸ್ಸು ಮಾಡುತ್ತಿದ್ದರು. ಕುಂಭಾಸುರ ಎನ್ನುವ ಧೈತ್ಯನ ಉಪಟಳವನ್ನು ನಿವಾರಿಸಬೇಕೆಂದು ಅವರು ಇಲ್ಲಿಗೆ ವನವಾಸ ಕಾಲದಲ್ಲಿ ಬಂದ ಭೀಮ ಸೇನನ ಹತ್ತಿರ ಹೇಳಿದ್ದು ಭೀಮ ಸೇನನು ಅಶರೀರವಾಣಿಯಂತೆ ಶಕ್ತಿಯಿಂದ ಅಸುರನ್ನು ಸಂಹಾರ ಮಾಡಿದ್ದರಿಂದ ಕುಂಭ+ಅಸಿ= ಕುಂಭಾಸಿ ಎಂಬ ಹೆಸರು ಬಂದಿತೆಂದು ಪುರಾಣ ಕತೆಯಿಂದ ತಿಳಿದು ಬರುತ್ತದೆ. ದೇವಸ್ಥಾನದಲ್ಲಿನ ಹಬ್ಬದ ಪೂರ್ವಭಾವಿಯಾಗಿ ಮೂರ್ನಾಲ್ಕು ದಿನಗಳಿಂದಲೇ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ದೇವಾಲಯದಲ್ಲಿ ನಡೆದವು. ಕಟ್ಟೆ ಪೂಜೆಯ ಅಂಗವಾಗಿ ಗುರುವಾರ ಹಾಗೂ ಶುಕ್ರವಾರ ದೇವಸ್ಥಾನದ ಸಮೀಪದ ವಕ್ವಾಡಿ ಗ್ರಾಮ ಹಾಗೂ ತೆಕ್ಕಟ್ಟೆ ಹಾಗೂ ಕುಂಭಾಶಿಗೆ ದೇವರ ಉತ್ಸವ ಮೂರ್ತಿಯನ್ನು ಕೊಂಡೊಯ್ಯುವ ಕಟ್ಟೆ ಓಲಗ ಕಾರ್ಯಕ್ರಮವೂ ವಿಧಿವತ್ತಾಗಿ ಜರುಗಿತು.
ರಥೋತ್ಸವ ದಿನವಾದ ಶನಿವಾರ ಬೆಳಿಗ್ಗಿನಿಂದಲೇ ಸಹಸ್ರ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮದ್ಯಾಹ್ನದ ಸುಮಾರಿಗೆ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಘೊಂಡು ರಥೋತ್ಸವ ವೀಕ್ಷಿಸಿ, ಹಣ್ಣುಕಾಯಿ ಮೊದಲಾದ ಸೇವೆಯಲ್ಲಿ ಭಾಗವಹಿಸಿದ್ರು. ಮಧ್ಯಾಹ್ನದ ಸಂದರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತರಿಗೂ ಪಾನಕ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು. ರಥೋತ್ಸವದ ಸಂದರ್ಭ ಕೀಲುಕುದುರೆ, ತಟ್ಟಿರಾಯ, ನಾದಸ್ವರ, ವಾದ್ಯಗೋಷಗಳು, ಚಂಡೆ ವಾದನಗಳು ಜನರನ್ನು ಇನ್ನಷ್ಟು ಆಕರ್ಷಿಸಿದವು. ಆನೆಗುಡ್ಡೆ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಪರ್ಯಾಯ ಅರ್ಚಕರಾದ ಕ್ರಷ್ಣರಾಜ ಉಪಾಧ್ಯಾಯ ಹಾಗೂ ಸಹೋದರರು ಮತ್ತು ಅನುವಂಶಿಕ ಧರ್ಮದರ್ಶಿಗಳಾದ ಕೆ. ರಮಣ ಉಪಾಧ್ಯಾಯ, ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ ಉಪಸ್ಥಿತರಿದ್ರು.
ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ ಸಂಭ್ರಮದಿಂದ ಸಾಂಗವಾಗಿ ನೆರೆದಿದ್ದು ಸಾವಿರಾರು ಭಕ್ತರು ಈ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದ್ರು.
———————————–
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.