ಮಂಗಳೂರು, ನ.28: ಕೇಂದ್ರ ಸರಕಾರ ನವೆಂಬರ್ 8ರಂದು ದಿಢೀರನೆ ಹಳೆಯ 500 ರೂ. ಹಾಗೂ 1000 ರೂ.ಗಳ ನೋಟನ್ನು ನಿರ್ಬಂಧಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳ ಆಕ್ರೋಶ ದಿನಾಚರಣೆ ಅಂಗವಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಪುರಭವನದ ಎದುರಿನ ಗಾಂಧಿ ಪಾರ್ಕ್ ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯದ ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ, ನೋಟು ರದ್ಧತಿಯ ಬಗ್ಗೆ ಕೇಂದ್ರ ಸರಕಾರದ ನಡೆಯನ್ನು ಪ್ರಶ್ನಿಸಿ, ನೋಟು ರದ್ಧತಿ ಬಳಿಕ ದೇಶದಲ್ಲಿ ಅದೆಷ್ಟು ಕಪ್ಪು ಹಣ ಜಮಾ ಮಾಡಿದೆ ಎಂಬುದರ ಲೆಕ್ಕವನ್ನು ಕೇಂದ್ರ ಸರಕಾರ ನೀಡಬೇಕು ಎಂದು ಆಗ್ರಹಿಸಿದರು.
ನೋಟು ರದ್ಧತಿ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ಅದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡದೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಪ್ರಧಾನಿ ಅವರ ಕ್ರಮದ ಬಗ್ಗೆ ಆಕ್ರೋಶವಿದೆ ಹೇಳಿದ ಐವನ್ ಅವರ್, ನೋಟು ರದ್ಧತಿಯಿಂದ ಸಮಸ್ಯೆಗೆ ಒಳಗಾಗಿದ್ದು ಕಪ್ಪು ಹಣ ಹೊಂದಿದವರು ಅಲ್ಲ. ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಕಾರು ಚಾಲಕರು, ಹಾಗೂ ತಮ್ಮ ಮಕ್ಕಳ ಮದುವೆ, ಮನೆ ಕಟ್ಟಲೆಂದು ಬಡಪಾಯಿಗಳು ತಾವು ದುಡಿದ ಹಣದಲ್ಲಿ ಸಂಗ್ರಹಿಸಿಟ್ಟ ಹಣದಿಂದ ವ್ಯವಹರಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ಹೊಟ್ಟೆಪಾಡಿನ ನಿತ್ಯದ ಕೆಲಸಗಳನ್ನು ಬಿಟ್ಟು ಅವರೆಲ್ಲಾ ಬ್ಯಾಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ತರಲಾಗಿದೆ. ಕೈಯ್ಯಲ್ಲಿ ದುಡ್ಡಿದ್ದರೂ ಅದರಲ್ಲಿ ವ್ಯವಹರಿಸಲಾಗದ ಪರಿಸ್ಥಿತಿ ಇದೆ ಎಂದು ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ,ಮನಪಾ ಮೇಯರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಸಾಮಾಜಿಕ ಕಾರ್ಯರ್ತೆ ಮರಿಯಾ ದೀಪ್ತಿ, ಪಕ್ಷದ ಮುಖಂಡರಾದ ಕವಿತಾ ಸನಿಲ್, ಎಚ್.ಎಂ.ಅಶ್ರಫ್, ಬಿಲಾಲ್ ಮೊಯ್ದೀನ್, ಫಾರೂಕ್, ನಾಗೇಂದ್ರ ಕುಮಾರ್, ಅಶಿತ್ ಪಿರೇರಾ, ಸ್ಟೀವನ್, ಸದಾಶಿವ ಉಳ್ಳಾಲ್, ಮನುರಾಜ್, ವಿನಯ್ ರಾಜ್, ಪ್ರವೀಣ್ ಚಂದ್ರ ಆಳ್ವ, ನಝೀರ್ ಬಜಾಲ್, ಟಿ.ಕೆ. ಸುರ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೋಟು ರದ್ಧತಿಯಿಂದ ಜಿಲ್ಲೆಯ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳ ಕುರಿತಂತೆ ಜಿಲ್ಲಾಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
Comments are closed.