ಮೂಡುಬಿದಿರೆ, ನ.18: ಜೈನಕಾಶಿ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಸಾರಥ್ಯದೊಂದಿಗೆ ‘ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ 13ನೇ ವರ್ಷದ ‘ಆಳ್ವಾಸ್ ನುಡಿಸಿರಿ-2016’ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಸುಮಾರು 60 ಕಲಾ ತಂಡಗಳು ಭಾಗವಹಿಸಿ ಪ್ರದರ್ಶನವನ್ನು ನೀಡುವ ಮೂಲಕ 13ನೆ ವರ್ಷದ ನುಡಿಸಿರಿಯ ಮೆರುಗನ್ನು ಹೆಚ್ಚಿಸಿದವು.
ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನವಾಗಿರುವ ಆಳ್ವಾಸ್ ನುಡಿಸಿರಿಯ 13ನೇ ಆವೃತ್ತಿ ಆರಂಭಕ್ಕೂ ಮುನ್ನ ನಡೆದ ಮೆರವಣಿಗೆಯ ಮೊದಲ ಸಾಲಿನಲ್ಲಿ ರಂಜಿತ್ ಕಾರ್ಕಳ ಅವರ ಪೂತನಿ, ಮಂಡ್ಯ ಜಾನಪದ ಕಲಾ ತಂಡದ ನಂದಿ ಧ್ವಜ, ಪಕ್ಕಿ ನಿಶಾನೆ, ಶ್ರೀನಿವಾಸ ಪೂಂಜಾಲಕಟ್ಟೆಯ 13 ಕಲಾವಿದರಿಂದ ಶಂಖ, ಹರೀಶ್ ಮೂಡುಬಿದಿರೆಯ ತಂಡದಿಂದ 20-ಕೊಂಬು, ಮತ್ತು 15-ಚೆಂಡೆ, ಆಳ್ವಾಸ್ ತಂಡದಿಂದ 32 ತಟ್ಟಿರಾಯ, ಕರುಣಾಕರ ಗುತ್ತಿಗಾರ್ ಅವರಿಂದ ಆಟಿ ಕಳೆಂಜ, ಆಳ್ವಾಸ್ನ ಯಕ್ಷಗಾನ (ತೆಂಕು-ಬಡಗು) ತಂಡ, ಕೊಡೆಗಳು, ಕೊರಗರ ಗಜಾಮೇಳ ಮಂಗಳೂರು ಇವರಿಂದ ಡೋಲು, ಚಾಮನಗರ ತಂಡದಿಂದ ಗೊರವರ ಕುಣಿತ, ಮೈಸೂರು ತಂಡದಿಂದ ಸೋಮನ ಕುಣಿತ, ಮಂಡ್ಯ ದೇವರಾಜ್ ತಂಡದಿಂದ ಪೂಜಾ ಕುಣಿತ ಮತ್ತು ವೀರಭದ್ರ ಕುಣಿತ, ಚಿತ್ರದುರ್ಗ ಜಾನಪದ ತಂಡದಿಂದ ಮರಗಾಲು ಮತ್ತು ಬ್ಯಾಂಡ್ ಸೆಟ್, ಹೊನ್ನಾವರ ಜಾನಪದ ತಂಡದಿಂದ ಹಾಲಕ್ಕಿ, ಹಾವೇರಿ ತಂಡದಿಂದ ಬೇಡರ ಕುಣಿತ, ಆಳ್ವಾಸ್ನ ತ್ರಿವರ್ಣ ಧ್ವಜ,ರಮೇಶ್ ಕಲ್ಲಡ್ಕ ಅವರ ಡ್ರಾಗನ್, ಸುಜಿತ್ ಕೇರಳ ಅವರಿಂದ ದೇವರ ವೇಷ, ಕುಂದಾಪುರ ಜಾನಪದ ಕಲಾ ತಂಡದ ಕುಂದಾಪುರ ಡೋಲು, ಆಳ್ವಾಸ್ನ ಶ್ರೀಲಂಕಾದ ಕಲಾವಿದರು, ಶ್ರೀಲಂಕಾದ ದೊಡ್ಡ ಮುಖವಾಡ ಹಾಗೂ ಡೊಳ್ಳು ಕುಣಿತ, ಬಿಜಾಪುರದ ಲಂಬಾಣಿ ತಂಡದಿಂದ ಲಂಬಾಣಿ, ಬೆದ್ರ ಫ್ರೆಂಡ್ಸ್ನ ಹುಲಿವೇಷ, ಉಡುಪಿಯ ವಿಜಯ್ಮತ್ತು ತಂಡದಿಂದ ಕರಗ ಕೋಲಾಟ, ಬಳ್ಳಾರಿ ತಂಡದಿಂದ ಸುಡುಗಾಡು ಸಿದ್ಧರು, ಉಡುಪಿ ಮಂದಾರ್ತಿಯ ಗುಮ್ಟೆ ಕುಣಿತ, ಬಳ್ಳಾರಿ ಅಶ್ವತ್ಥಾಮ ತಂಡದ ಹಗಲುವೇಷ, ಮೈಸೂರಿನ ಪುರುಷ ಮತ್ತು ಮಹಿಳಾ ತಂಡದ ನಗಾರಿ, ಹಾವೇರಿ ಜಾನಪದ ಕಲಾ ತಂಡದ ಪುರವಂತಿಕೆ, ಕೇರಳದ ತೆಯ್ಯಮ್, ಧಾರವಾಡ ಜಾನಪದ ಕಲಾತಂಡದ ಜಗ್ಗಳಿಕೆ ಮೇಳ, ಹುಸೈನ್ ಕಾಟಿಪಳ್ಳ ಅವರ ದಪ್ಪು ತಂಡ, ಮಂಗಳೂರು ಮೂಕಾಂಬಿಕಾ ಚೆಂಡೆ ಬಳಗದಿಂದ ಕೊಂಚಾಡಿ ಚೆಂಡೆ, ರಾಜಸ್ಥಾನದ ಕಲಾ ತಂಡ, ಮೂಡುಬಿದಿರೆಯ ಮಹಿಳಾ ಚೆಂಡೆ. ಕಾರ್ಕಳ ತಂಡದಿಂದ ಕೋಳಿಗಳು, ಜೇಮ್ಸ್ ಹೊನ್ನಾವರ ತಂಡದಿಂದ ಬ್ಯಾಂಡ್ ಸೆಟ್, ಬೆಳ್ತಂಗಡಿಯ ರಾಜೀವ್ ಬಳಗದಿಂದ ಸೃಷ್ಟಿ ಗೊಂಬೆಯಾಟ, ಕೇರಳದ ಧಫ್ ಮುಟ್ಟ್ ಮತ್ತು ಹುಲಿವೇಷ, ಆಳ್ವಾಸ್ನ ಚೆಂಡೆ, ಶಿವಮೊಗ್ಗದ ಬುದಿಯಪ್ಪತಂಡದ ಡೊಳ್ಳು ಕುಣಿತ, ಪ್ರಸಾದ್ ಮಿಜಾರು ತಂಡದ ತುಳುನಾಡ ವಾದ್ಯ, ಕೇರಳದ ಪಂಚವಾದ್ಯ, ರೈತರು, ಆಳ್ವಾಸ್ನ ಲಂಗ ದಾವಣಿಯ ಬಾಲಕಿಯರು, ಪಲ್ಲಕ್ಕಿ, ತೇರು ಹಾಗೂ ಕುಸ್ತಿಪಟುಗಳು, ಬೆಳಗಾವಿಯ ಪೇಟ ಧರಿಸಿದವರು, ಪೂರ್ಣಕುಂಭ ಹಿಡಿದ ಯುವತಿಯರು, ಮಂಗಳೂರು ಜಗದೀಶ ತಂಡದಿಂದ ಸ್ಯಾಕ್ಸೋಫೋನ್ ಹೀಗೆ ಪಾಲ್ಗೊಂಡ ಎಲ್ಲಾ ತಂಡಗಳು ನುಡಿಸಿರಿ ಸಂಭ್ರಮಕ್ಕೆ ಮೆರುಗು ನೀಡಿದವು.
“ಪುಟಾಣಿಗಳಿಂದ ಯುವಕರು, ಹಿರಿಯರು, ಇಳಿ ವಯಸ್ಸಿನವರ ಸಹಿತ ಎಲ್ಲ ವಯೋಮಾನದವರನ್ನು ಸೆಳೆಯುವಂತ ಸ್ವರೂಪದ ಕಾರ್ಯಕ್ರಮಗಳನ್ನು ನುಡಿಸಿರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಸಾಹಿತ್ಯದೊಂದಿಗೆ ನಾಡಿನ ಬಹುಬಗೆಯ ಸಾಂಸ್ಕೃತಿಕ ವೈಭವ ಇಲ್ಲಿ ಕಾಣಿಸಿಕೊಂಡಿದೆ.
ನುಡಿಸಿರಿಯಲ್ಲಿ ನೆಚ್ಚಿನ- ಸಾಧಕ ಸಾಹಿತಿಗಳನ್ನು, ವಿಮರ್ಶಕರನ್ನು, ಕಲಾವಿದರನ್ನು ನೋಡುವ, ಕೇಳುವ, ಮಾತನಾಡುವ ಅವಕಾಶದೊಂದಿಗೆ ಸಹಸ್ರಾರು ಮಂದಿಗೆ ಪುಷ್ಕಳವಾದ ಉಪಾಹಾರ- ಭೋಜನ ಕೂಡ ಅಚ್ಚುಕಟ್ಟಾಗಿ ಹಮ್ಮಿಕೊಳ್ಳಲಾಗಿದೆ.
Comments are closed.