ಮೂಡುಬಿದಿರೆ, (ರತ್ನಾಕರವರ್ಣಿ ವೇದಿಕೆ, ಪುಂಡಲೀಕ ಹಾಲಂಬಿ ಸಭಾಂಗಣ) ನ.18: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕರ್ನಾಟಕ: ನಾಳೆಗಳ ನಿರ್ಮಾಣ ಪರಿಕಲ್ಪನೆಯಡಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಮೂರುದಿನಗಳ ಕಾಲ ನಡೆಯುವ ಆಳ್ವಾಸ್ ನುಡಿಸಿರಿ'(ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ) ಯನ್ನು ಖ್ಯಾತ ಸಾಹಿತಿ ಡಾ. ಜಯಂತ್ ಕಾಯ್ಕಿಣಿ ಅವರು ಶುಕ್ರವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, `ನಮ್ಮ ಜೀವನದಲ್ಲಿ ತುಂಬಾ ಒಳ್ಳೆಯ ಸಂಗತಿ ಎಂದರೆ ಅದು ನಮಗೆ ಗೊತ್ತಿಲ್ಲದಿರುವ ನಾಳೆಗಳು. ನಾಳೆಗಳಿಗಾಗಿ ನಾವು ಎಷ್ಟೋ ಆಸೆ ಕನಸುಗಳನ್ನು ಕಟ್ಟಿಕೊಂಡಿರುತ್ತೆವೆ. ಆದರೆ ಅದು ಯಾವಾಗಲೂ ಒಂದು ಅಲೌಕಿಕ ಸಂಗತಿ. ಸುಂದರ ನಾಳೆಗಳನ್ನು ಕಟ್ಟುವಲ್ಲಿ ನಮ್ಮ ಕಲೆ ಮತ್ತು ಸಂಸ್ಕೃತಿ ಮುಖ್ಯ ಪಾತ್ರ ವಹಿಸುತ್ತವೆ. ಇಂದಿನ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಪ್ರದರ್ಶನಗೊಂಡ ಎಲ್ಲಾ ಕಲೆಗಳು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತೋರಿಸುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಯಾವಾಗಲೂ ಒಂದು ಎಚ್ಚರ, ಜಾಗೃತಿಯಾಗಿ ನಮ್ಮ ಸುಪ್ತಪ್ರಜ್ಞೆಯಲ್ಲಿರಬೇಕು’ ಎಂದು ಅಭಿಪ್ರಾಯಪಟ್ಟರು.
ಪೂರ್ವಜರು ಅಳವಡಿಸಿಕೊಂಡು ಬಂದ ಕೆಲವು ಆಚಾರ ವಿಚಾರಗಳನ್ನು ಕೈ ಬಿಟ್ಟು ಸ್ವತಂತ್ರ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಮಾನಸಿಕ ಗುಲಾಮಗಿರಿಯಿಂದ ಹೊರಬಂದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜದಲ್ಲಿ ಜಾತಿ, ಮತ ಭೇದ ಎಂಬ ದರಿದ್ರಗೆರೆಗಳು ಆವರಿಸಿದೆ. ಸಾವಿರ ಕಂಬಗಳ ಚಪ್ಪರದಿಂದ ಕೂಡಿದ ರೂಪಕ ಎಂಬಂತಹ ಭಾರತದಲ್ಲಿ ಇವು ಸಾಮಾನ್ಯ ಎಂದು ಭಾವಿಸಿ ಸುಮ್ಮನಿರದೆ ಜೀವನದ ‘ನಾಳೆ’ ಎಂಬ ಸುಂದರ ಜಗತ್ತನ್ನು ಕಟ್ಟಿಕೊಳ್ಳಲು ಮುಂದಾಗೇಕು.
‘ನಾಳೆ’ ಎಂಬುದು ಅಲೌಖಿಕವಾದುದು, ಅನಿರೀಕ್ಷಿತವಾದುದು. ಅವುಗಳ ಮೂಲಧಾತು ಅಭಿವ್ಯಕ್ತಿ ಸ್ವಾತಂತ್ರದಲ್ಲಿ ಅಡಗಿದೆ. ಹಾಗಾಗಿ ಪ್ರಜಾಪ್ರಭುತ್ವದ ಜೀವಾಳವಾಗಿರುವ ಅಭಿವ್ಯಕ್ತಿ ಸ್ವಾತಂತ್ರವನ್ನು ಬಳಸಿಕೊಳ್ಳಬೇಕೇ ವಿನ: ಮಾನಸಿಕ ಗುಲಾಮರಾಗಬಾರದು ಎಂದು ಜಯಂತ್ ಕಾಯ್ಕಿಣಿ ಹೇಳಿದರು.
ಇಂದಿನ ವಾಟ್ಸ್ಆಯಪ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಗಳು ಆಧುನಿಕ ಚಿಂತನೆಗಳನ್ನು ಬಿತ್ತದೆ ಸುಳ್ಳುಭ್ರಮೆಯಲ್ಲಿ ತೇಲಾಡುವಂತೆ ಮಾಡುತ್ತದೆ. ಸತ್ಯವೋ, ಸುಳ್ಳೋ ಯಾರೋ ಒಬ್ಬರು ಕಳುಹಿಸಿದ ಸಂದೇಶಗಳನ್ನು ರವಾನಿಸುತ್ತಾ ಕಾಲ ಕಳೆಯುತ್ತಾರೆಯೇ ವಿನ: ಈ ನಿಟ್ಟಿನಲ್ಲಿ ತಾವು ಮಾಡಬೇಕಾದ ಪ್ರಯತ್ನಗಳ ಬಗ್ಗೆ ಚಿಂತಿಸುತ್ತಿಲ್ಲ.
ರೋಗಿಗಳ ಆರೈಕೆಯ ತಾಣವಾಗಿರುವ ಆಸ್ಪತ್ರೆಗಳಲ್ಲಿ ಇಂದು ಜಾತಿಮತ ಮೀರಿದ ಬದುಕನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಸಾವಿನಂಚಿನಲ್ಲೂ ಅಲ್ಲಿ ಧನಾತ್ಮಕ ಚಿಂತನೆಗಳು, ಪರೋಪಕಾರ ಮನೋಭಾವ, ಪ್ರೀತಿಯನ್ನು ಸಾರುವ ಕೇಂದ್ರವಾಗುತ್ತದೆ ಎಂದು ಜಯಂತ್ ಕಾಯ್ಕಿಣಿ ತಿಳಿಸಿದರು.
ಬಾಲ್ಯದ ಹೃದಯಶ್ರೀಮಂತಿಕೆ ಇಂದು ಕಣ್ಮರೆಯಾಗುತ್ತಿದೆ. ನಮ್ಮನ್ನೇ ಸುಡುವ ದ್ವೇಷ ಮೇಳೈಸುತ್ತಿದೆ. ವರ್ತಮಾನದ ಭಾವಪ್ರಪಂಚವನ್ನು ಸೃಷ್ಟಿಸುವ ಸಂಸ್ಕೃತಿಯ ಪ್ರತೀಕವಾಗಿರುವ ಈ ನುಡಿಸಿರಿಯು ಜಾತಿ, ಮತ, ಧರ್ಮದ ಭೇದವನ್ನು ಮೀರಿ ಸಾಂಸ್ಕೃತಿಕ ಹಬ್ಬವಾಗಿ ಆಚರಿಸಲ್ಪಡುತ್ತಿವೆ. ಕನ್ನಡ ಭಾಷೆಗೆ ಆಭರಣದಂತಿರುವ ಈ ಉತ್ಸವವು ಅಸಮಾನತೆ, ಮೂಢನಂಬಿಕೆಗಳನ್ನು ದೂರಮಾಡಲು ವೇದಿಕೆಯಾಗುತ್ತಿವೆ. ಸಾಕ್ಷಿಪ್ರಜ್ಞೆಯನ್ನು ಬೆಳೆಸುವ, ನೈಜ ಅಧ್ಯಾತ್ಮವನ್ನು ಹೊಂದಿರುವ ಕಲೆ-ವೈಚಾರಿಕತೆಯನ್ನು ಬಿತ್ತುವ ಕೇಂದ್ರಗಳಾಗುತ್ತಿವೆ. ಸಂಸ್ಕ್ಕೃತಿ ಎಂಬುದು ಯಾವತ್ತೂ ವಸ್ತುಪ್ರದರ್ಶನವಾಗಿರದೆ, ಉದ್ಯಾನವನವಾಗಿರಲಿ ಎಂದು ಡಾ. ಜಯಂತ್ ಕಾಯ್ಕಿಣಿ ಆಶಿಸಿದರು.
ಅಭೂತಪೂರ್ವ ಕ್ಷಣ :40.000ಕ್ಕೂ ಮಿಕ್ಕಿದ ಜನಸ್ತೋಮ
ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ಅದೊಂದು ಅವಿಸ್ಮರಣೀಯ ಕ್ಷಣ. ಸಾವಿರಾರು ಗೂಡುದೀಪಗಳಿಂದ ಬೆಳಗುತ್ತಿದ್ದ ದೊಡ್ಡ ಸಭಾಂಗಣ…. ಅದ್ಭುತ ಕೆತ್ತನೆಗಳಿಂದ ಅಲಂಕೃತಗೊಂಡ ಭವ್ಯ ವೇದಿಕೆ……. ಕನ್ನಡ ನಾಡಗೀತೆಗೆ ಸಾಗರದ ಅಲೆಯಂತೆ ನಲಿದಾಡಿದ ಕನ್ನಡ ಬಾವುಟಗಳು….. ಕರ್ನಾಟಕದ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನದಿಂದ ತನ್ನ ವೈಭವವನ್ನು ಹೆಚ್ಚಿಸಿಕೊಂಡ ಸಾಂಸ್ಕೃತಿಕ ಮೆರವಣಿಗೆ….ಈ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾದ 40.000ಕ್ಕೂ ಮಿಕ್ಕಿದ ಜನಸ್ತೋಮ…..ಇದು ಆಳ್ವಾಸ್ ನುಡಿಸಿರಿ-2016 ರ ಒಂದು ಝಲಕ್.
`ಕರ್ನಾಟಕ- ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಈ ರಾಷ್ಟ್ರೀಯ ನಾಡು ನುಡಿ ಸಂಸ್ಕೃತಿ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಖ್ಯಾತಸಾಹಿತಿ, ವಿದ್ವಾಂಸೆ ಡಾ. ಬಿ. ಎನ್. ಸುಮಿತ್ರಾ ಬಾಯಿ ವಹಿಸಿಕೊಂಡಿದ್ದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ `ಕರ್ನಾಟಕ-ನಾಳೆಗಳ ನಿರ್ಮಾಣ’ ಪರಿಕಲ್ಪನೆಯನ್ನು ತೆರೆದಿಟ್ಟ ಡಾ. ಸುಮಿತ್ರಾಬಾಯಿ, `ನಾಳೆ ಎಂಬುದು ನಮ್ಮ ಅವಾಸ್ತವಿಕ ಕಲ್ಪನೆ. ನಮ್ಮ ಜನತೆ ಇವತ್ತಿನ ಪರಿಸ್ಥಿತಿಗಳನ್ನು ತುಂಬಾ ಕಠಿಣವೆಂದು ಪರಿಭಾವಿಸಿ ಸುಂದರ ಕನಸುಗಳನ್ನಿಟ್ಟುಕೊಂಡು ನಾಳೆಗಳ ಕಲ್ಪನೆ ಕೊಟ್ಟಿದ್ದಾರಷ್ಟೇ. ವಾಸ್ತವದಲ್ಲಿ ಹೇಳುವುದಾದರೆ ನಾಳೆ ಎಂಬುದು ಇಂದು ಮತ್ತು ನಿನ್ನೆಗಳು ಒಟ್ಟುಗೂಡಿದ ಸಮರ್ಪಕ ಮಿಶ್ರಣವಷ್ಟೇ. ನಮ್ಮ ಕಳೆದು ಹೋದ ಕ್ಷಣಗಳು ಹಾಗೂ ಮುಂದೆ ಬರಲಿರುವ ಕ್ಷಣಗಳು ಯಾವಾಗಲೂ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ’ ಎಂದು ಹೇಳಿದರು.
ನಾಳೆಗಳ ನಿರ್ಮಾಣ ಎಂಬುದು ಹಿಂದಿನ ತಪ್ಪುಗಳ ಮರುಕಳಿಕೆಯೋ, ಮುಂದುವರಿಕೆಯೋ ಆಗದಂತೆ ಎಚ್ಚರ ವಹಿಸುವುದೇ ಈಗ ನಮ್ಮ ಮುಂದಿರುವ ಮುಖ್ಯ ಕೆಲಸ. ಹಿಂದಿನಿಂದ ಉಳಿದು ಬರುತ್ತಿರುವ ಸಾಂಸ್ಕೃತಿಕ ನೆನಪುಗಳು, ಇಂದಿಗೂ, ಮುಂದಿಗೂ ನಮ್ಮನ್ನು ಎಷ್ಟು ಒಳಿತಿನತ್ತ ಕರೆದೊಯ್ಯಬಲ್ಲವು ಎನ್ನುವ ಎಚ್ಚರದ ವಿವೇಚನೆಯಿದ್ದಾಗ ಮಾತ್ರ ಸಾಂಸ್ಕೃತಿಕ ಸ್ಮೃತಿಯು ಒಂದು ಬೆಳಕಾಗಿ, ಒಂದು ಚೈತನ್ಯವಾಗಿ ಇಂದುಗಳನ್ನು ಎದುರಿಸಲು ನಮ್ಮ ಬಲವಾಗಿ ನಿಲ್ಲುತ್ತದೆ.
ಹಾಗೆಯೇ ನಮ್ಮ ಭಾವೀ ಜನಾಂಗದ ಆತ್ಮಶಕ್ತಿಯನ್ನು ಕುಗ್ಗದಂತೆ ಕಾಪಾಡುವ ಶಕ್ತಿಯೂ ಆಗುತ್ತದೆ. ನಾಳೆ ಎಂಬುದು ತನ್ನಷ್ಟಕ್ಕೇ ಸಂಭವಿಸುವ ಸ್ವತಂತ್ರವಾದ ಅಸ್ತಿತ್ವವಿರುವ ಕಾಲ ಘಟಕವಲ್ಲ. ನಮ್ಮ ಮುಂದಿರುವ ಜಗತ್ತಿನ ಸ್ಥಿತಿ ಅಹಿತಕರವಾಗಿದೆ, ಅದನ್ನು ತಿದ್ದಿ, ಅನುಕೂಲಕರವಾಗಿ ಬದಲಿಸಿಕೊಳ್ಳಬೇಕೆಂಬ ಮಾನವನ ಹಂಬಲವೇ ನಾಳೆಯೆನ್ನುವ ಕಾಲವನ್ನು ಕಲ್ಪಿಸುತ್ತದೆ’ ಎಂದರು.
ರಾಜಕೀಯ ವ್ಯವಸ್ಥೆಯಿರಲಿ ಅಥವಾ ಸಾಹಿತ್ಯ- ಸಂಸ್ಕೃತಿ- ಕಲೆಯಿರಲಿ ಎಲ್ಲವನ್ನೂ ಸಮಗ್ರವಾಗಿ ವಿಚಾರ ಮಾಡಬಲ್ಲ ವಿಮರ್ಶಿಸಬಲ್ಲ ಸ್ವತಂತ್ರ ವಿಚಾರಶಕ್ತಿಯ ಅಭಾವ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕಂಡುಬರುತ್ತಿದೆ. ಇಂದಿನ ಬಹುಮಾಧ್ಯಮಗಳ ಕಾಲದಲ್ಲಿ ಕಂಡಿದ್ದೆಲ್ಲವೂ ನಿಜವೇ ಎಂಬುದನ್ನು ಬಿಂಬಿಸುವ ಪ್ರವೃತ್ತಿ ಬೆಳೆಯುತ್ತಿದೆ.
ವಿಚಾರ ಪ್ರಚೋದನೆಗಿಂತ ಜನರ ಮನರಂಜಿಸಿ ಲಾಭ ಗಳಿಸುವುದನ್ನೇ ಗುರಿಯಾಗಿರಿಸಿಕೊಂಡಿರುವ ಮಾಧ್ಯಮಗಳು ವೈಚಾರಿಕ ಪ್ರವೃತ್ತಿಯ ವೈರಿಗಳು. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ದೊಡ್ಡ ದೊಡ್ಡ ಜಾಹೀರಾತುಗಳು, ನಟ-ನಟಿಯರು, ಮಾಡೆಲ್ಗಳು ಹಾಗೂ ಕ್ರೀಡಾಪಟುಗಳ ಫೋಟೋಗಳ ಜೊತೆ ರಂಜಕವಾದ ಭಾವುಕವಾದ ಭಾಷಾ ಬರಹಗಳನ್ನು ತಂತ್ರವಾಗಿ ಮಾಡಿಕೊಳ್ಳುತ್ತಿದೆ. ಮಾಧ್ಯಮ ಲೋಕದ ಸಮಗ್ರ ಬದಲಾವಣೆ ಹಾಗೂ ಯುವಜನತೆಯಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸುವ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಅಭಿಪ್ರಾಯ ಪಟ್ಟರು.
ಡಾ. ಬಿ.ಎನ್. ಸುಮಿತ್ರಾಬಾಯಿ ಹಾಗೂ ಜಯಂತ್ ಕಾಯ್ಕಿಣಿಯವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಭಾರತೀಯ ಅಂಚೆ ಇಲಾಖೆಯಿಂದ ಮೂಡಬಿದಿರೆಯ ಸಾವಿರ ಕಂಬದ ಬಸದಿಯ ಹಾಗೂ ವೇಣೂರಿನ ಗೋಮ್ಮಟೇಶ್ವರನ ಮೊಹರಿನ ಚಿನ್ಹೆಯುಳ್ಳ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಆಳ್ವಾಸ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ `ಆಳ್ವಾಸ್ ಮಾಧ್ಯಮ’, ಪತ್ರಿಕೋದ್ಯಮ ವಿದ್ಯಾರ್ಥಿ ನಿರಂಜನ್ ಕಡ್ಲಾರು ಅವರ `ಹೊಂಗನಸು’ ಮಾಸಪತ್ರಿಕೆ ಸೇರಿದಂತೆ ಅನೇಕ ಸಾಹಿತ್ಯ ಕೃತಿಗಳನ್ನು ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರು ಬಿಡುಗಡೆ ಮಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಅನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಮಾಜಿ ಸಚಿವ ಅಮರ್ನಾಥ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಮತ್ತು ಆಹಾರ (ವಿಶೇಷೋಪನ್ಯಾಸ)
`ನಮ್ಮ ದೇಹಕ್ಕೆ ಆಹಾರ ತುಂಬಾ ಮುಖ್ಯವಾದುದು. ನಾವು ಆಹಾರ ಸೇವನೆಯ ಪದ್ಧತಿ ನಮ್ಮ ಮೇಲೆ ಗಣನೀಯ ಪ್ರಭಾವ ಹೊಂದಿದೆ. ಆರೋಗ್ಯಕರ ಆಹಾರ ಸೇವನೆಯಿಂದ ಮಾತ್ರ ಸ್ವಸ್ಥ ಸಮಾಜವನ್ನು ಕಟ್ಟಲು ಸಾಧ್ಯ’ ಎಂದು ಡಾ. ಬಿ.ಎಂ. ಹೆಗ್ಡೆ ಹೇಳಿದರು. ಆಳ್ವಾಸ್ ನುಡಿಸಿರಿಯಲ್ಲಿ `ಆರೋಗ್ಯ ಮತ್ತು ಆಹಾರ’ ಎಂಬ ವಿಷಯದ ಕುರಿತು ವಿಶೇಷೋಪನ್ಯಾಸ ನೀಡಿದರು.
`ನಮ್ಮ ದೇಶದಲ್ಲಿ ಇಂದು ಸರಿಯಾದ ಆಹಾರಕ್ರಮವಿಲ್ಲದೆಯೇ ಸಾಕಷ್ಟು ಜನರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆಯಿಂದಾಗಿ ಚಿಕ್ಕಮಕ್ಕಳ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಆಹಾರದ ಕೊರತೆಯಿಂದಾಗಿ ಗರ್ಭಿಣಿಯರಿಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಗರ್ಭಿಣಿಯರಿಗೆ ಪೌಷ್ಠಿಕ ಆಹಾರವನ್ನು ನೀಡಿದರೆ ಹುಟ್ಟಲಿರುವ ಈ ದೇಶಕ್ಕೆ ಒಬ್ಬ ಆರೋಗ್ಯವಂತ ಪ್ರಜೆ ಹುಟ್ಟುತ್ತಾನೆ. ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟ ಕೊಡುವುದಕ್ಕಿಂತ ಗರ್ಭಿಣಿಯರಿಗೆ ಸರಿಯಾದ ಆಹಾರವನ್ನು ಒದಗಿಸುವತ್ತ ನಾವು ಗಮನ ಹರಿಸಬೇಕಿದೆ. ಇದರಿಂದ ಒಂದು ಸ್ವಸ್ಥ ಆರೋಗ್ಯಕರ ಸಮಾಜವನ್ನು ಬೆಳೆಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಂತೋಷದ ಕ್ಷಣಗಳ ಮಹತ್ವವನ್ನು ವಿವರಿಸಿದ ಅವರು, ಮನಸ್ಸು ಸಂತೋಷದಿಂದ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಸಂತಸ ಎಂಬುದು ಕನ್ನಡಿ ಇದ್ದಂತೆ. ನಾವು ಇತರರು ಸಂತೋಷವಾಗಿರುವಂತೆ ಮಾಡಿದರೆ ನಮ್ಮನ್ನು ಅದೇ ಸಂತಸದ ಕ್ಷಣಗಳು ಹುಡುಕಿಕೊಂಡು ಬರುತ್ತವೆ. ಆದ್ದರಿಂದ ಉತ್ತಮ ಆರೋಗ್ಯದ ಜೊತೆಗೆ ಸಂತೋಷ್ದ ಕ್ಷಣಗಳನ್ನು ಕಾಪಾಡಿಕೊಳ್ಳುವುದೂ ಮುಖ್ಯವಾಗುತ್ತದೆ ಎಂದರು.
ಮಾಸ್ತಿ ಕನ್ನಡ ಸಾಹಿತ್ಯದ ಅಮೂಲ್ಯ ರತ್ನ: ಡಾ. ಜಿ.ಎಂ.ಹೆಗಡೆ (ವಿಚಾರಗೋಷ್ಠಿ)
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಕ್ಷೇತ್ರದ ಬಹುಮುಖ ಪ್ರತಿಭೆ. ಅವರ ಅಪಾರ ತಿಳಿವಳಿಕೆಯ ಬಳಕೆಯನ್ನು ಅವರು ತನ್ನೆಲ್ಲಾ ಕೃತಿಗಳಲ್ಲಿ ಮಾಡಿರುವುದನ್ನು ಕಾಣಬಹುದು. ಅದಲ್ಲದೆ ಸಾಮಾನ್ಯ ಮನುಷ್ಯರಲ್ಲಿರುವ ತಿಳಿವಳಿಕೆಗೆ ಒಪ್ಪುವಂತೆ ಅವರು ತಮ್ಮ ಜ್ಞಾನವನ್ನು ತಮ್ಮ ಕೃತಿಗಳಲ್ಲಿ ಬಳಸಿದ್ದಾರೆ. ಅವರೆಲ್ಲಾ ಕೃತಿಗಳನ್ನು ವಿಮರ್ಷಿಸುವಾಗ ಅವರ ಜೀವನ ಶ್ರದ್ಧೆ ಹಾಗೂ ಪಾಂಡಿತ್ಯವನ್ನು ಕಾಣಬಹುದು ಎಂದು ಡಾ. ಜಿ.ಎಂ.ಹೆಗಡೆ ನುಡಿದರು. ಆಳ್ವಾಸ್ ನುಡಿಸಿರಿ ೨೦೧೬ರಲ್ಲಿ ‘ಹಿರಿಯರ ಸ್ಮರಣೆ’ ಎಂಬ ಗೋಷ್ಠಿಯಲ್ಲಿ ಅವರು ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕುರಿತು ಮಾತನಾಡುತ್ತಿದ್ದರು.
ಸ್ತ್ರೀವಾದಿ ಸಂವಾದವನ್ನು ಅವರ ಕೃತಿಗಳಿಂದಲೇ ವಿಮರ್ಶಿಸಲು ಪ್ರಾರಂಭ ಮಾಡಬಹುದು. ಅದಲ್ಲದೆ ಮಾಸ್ತಿ ಭಾಷಾಂತರದಲ್ಲೂ ತಮ್ಮ ಕೈಚಳಕ ತೋರಿದ್ದಾರೆ. ಅವರ ೧೩೨ ಕೃತಿಗಳೂ ಸಮಕಾಲೀಸನವಾಗಿವೆ. ಅವೆಲ್ಲರದಲ್ಲೂ ನಿರೂಪಕನ ಪಾತ್ರ ಅತಿಮುಖ್ಯವಾಗಿರುವುದನ್ನು ನಾವು ಕಾಣಬಹುದು. ಇಂತ ಹಲವಾರು ಕಾರಣಗಳಿಂದಾಗಿ ಮಾಸ್ತಿ ಕನ್ನಡ ಸಾಹಿತ್ಯ ಕ್ಷೇತ್ರದ ಅಮೂಲ್ಯ ರತ್ನ ಎಂದು ಅವರು ವಿಮರ್ಶಿಸಿದರು.
ರಂಗಭೂಮಿಯಿಂದ ಬೆಳೆದು ಬರುವ ಕುಟುಂಬಗಳು ತುಂಬ: ಡಾ.ಬಿ.ಜಯಶ್ರೀ ( ನಮ್ಮ ಕಥೆ ನಿಮ್ಮ ಜೊತೆ)
ರಂಗಭೂಮಿಯಿಂದ ಬೆಳೆದು ಬರುವ ಕುಟುಂಬಗಳ ಸಂಖ್ಯೆ ಬಹಳ. ಏಕೆಂದರೆ ಹಿಂದಿನ ಕಾಲಗಳಲ್ಲಿ ರಂಗಭೂಮಿಗಳೆಂದರೆ ಈಗಿನ ಹಾಗೆ ಸುಸಜ್ಜಿತ ವೇದಿಕೆಗಳಾಗಿರಲಿಲ್ಲ. ಯಾವುದೇ ಸೌಕರ್ಯಗಳಿಲ್ಲದೆ ಕಲಾವಿದರು ನಾಟಕ ಪ್ರದರ್ಶಿಸುತ್ತಿದ್ದರು. ಆದರೆ ಪ್ರತಿ ಕಲಾವಿದನನ್ನೂ ಗೌರವದಿಂದ ಕಾಣಲ್ಪಡಲಾಗಿತ್ತಿತ್ತು, ಹೆಣ್ಣು ಗಂಡು ಅಥವಾ ಮಾಡುವ ಪಾತ್ರದ ಮೇಲೆ ಯಾವುದೇ ಬೇಧ ಭಾವ ಕಾಣಸಿಗುತ್ತಿರಲಿಲ್ಲ ಎಂದು ಬಿ. ಜಯಶ್ರೀ ಆಳ್ವಾಸ್ ನುಡಿಸಿರಿ 2016ರಲ್ಲಿ ತಮ್ಮ ಜೀವನಾನುಭವ ಹಂಚಿಕೊಂಡರು. ಅವರು ‘ನಮ್ಮ ಕತೆ ನಿಮ್ಮ ಜೊತೆ’ ಎಂಬ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ತಾನು ದಶಾವತಾರದ ನಾಟಕಗಳನ್ನು ನೋಡಿ ಬೆಳೆದವಳು. ನಾಟಕದಲ್ಲಿ, ಅಥವಾ ಯಾವುದೇ ವಿಷಯದಲ್ಲಿ ಬಾಲಕಿಯಾಗಿ ಆಸಕ್ತಿ ತೋರಿಸುತ್ತಿದ್ದಾಗ ನನ್ನ ಮನೆಯಲ್ಲಿ ನನ್ನನ್ನು ಹುರಿದುಂಬಿಸಿ ಕಲಿಸುತ್ತಿದ್ದರು. ಎಲ್ಲಾ ಆಸಕ್ತಿಯುತ ಮಕ್ಕಳಿಗೆ ಇದೇ ರೀತಿಯ ಬೆಳೆಯುವ ವಾತಾವರಣ ದೊರೆಯಬೇಕು ಎಂಬುದು ನನ್ನ ಅನಿಸಿಕೆ. ರಂಗಭೂಮಿ ಕಲಾವಿದೆಯಾಗಿ ಬೆಳೆದು ಸಿನಿಮಾ ಧಾರಾವಾಹಿಗಳಿಗೆ ಬಂದಾಗ ಬೇರೊಂದು ಲೋಕಕ್ಕೇ ಬಂದಂತಾಯಿತು. ಆದರೆ ರಂಗದಲ್ಲಿ ಕಲಿತ ಅಂಶಗಳೇ ನನಗೆ ಅಲ್ಲೂ ಉಪಯುಕ್ತ ಎಂದು ಅವರು ತಮ್ಮ ರಂಗಭೂಮಿ ಜೊತೆಗಿನ ನಂಟನ್ನು ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಮನುಬಳಿಗಾರ್, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ದ.ಕ.ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಹಿರಿಯ ಸಾಹಿತಿ
ಏರ್ಯಲಕ್ಷ್ಮಿನಾರಾಯಣ ಆಳ್ವ, ಜಯಶ್ರೀ ಅಮರನಾಥ ಶೆಟ್ಟಿ ಹಾಗು ನುಡಿಸಿರಿಯ 48 ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕಮ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು.
2018 ವಿಶ್ವನುಡಿಸಿರಿ ವಿರಾಸತ್
ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದ ಆಳ್ವಾಸ್ ನುಡಿಸಿರಿಯ ರುವಾರಿ ಡಾ. ಎಂ. ಮೋಹನ್ ಆಳ್ವ, ನೋಟು ಅಮಾನ್ಯದ ತಳಮಳ, ಆತಂಕದ ಮಧ್ಯೆಯೂ ಈಬಾರಿಯ ನುಡಿಸಿರಿ ಯಶಸ್ವಿಯಾಗಿ ನಡೆಯುವ ಭರವಸೆ ಇದೆ. ಈಗಾಗಲೆ 32, 347 ಮಂದಿ ಹೆಸರು ನೋಂದಾಯಿಸಿ ಪ್ರತಿನಿಧಿಗಳಾಗಿದ್ದಾರೆ. ಅದರಲ್ಲೂ ಒಂದೇ ಗ್ರಾಮದ 758 ಮಂದಿ ಇಲ್ಲಿ ಪ್ರತಿನಿಧಿಗಳಾಗಿ ಹೆಸರು ನೋಂದಾಯಿಸಿರುವುದು ವಿಶೇಷ ಎಂದರಲ್ಲದೆ, ‘2018ರಲ್ಲಿ ನಡೆಯುವ 15ನೆ ವರ್ಷದ ನುಡಿಸಿರಿಯು ‘ವಿಶ್ವನುಡಿಸಿರಿ ವಿರಾಸತ್’ ಆಗಿ ಇಲ್ಲಿ ಸಂಭ್ರಮಿಸಲಿದೆ ಎಂದು ಘೋಷಿಸಿದರು.
- ನಾಡಗೀತೆ, ದೇಶಭಕ್ತಿಗೀತೆ, ರೈತಗೀತೆ ಹಾಡಿದಾಗ ಮೂರು ಬಣ್ಣದ ಮೂರು ಪ್ರತ್ಯೇಕ ಧ್ವಜಗಳನ್ನು ಪ್ರದರ್ಶಿಸಲಾಯಿತು.
- ಕಲಸಿಗೆಯ ಮೇಲಿಟ್ಟ ಭತ್ತದೆ ತೆನೆಗೆ ಹಾಲು ಸುರಿದು ಮತ್ತು ವ್ಯಾಸಪೀಠದಲ್ಲಿದ್ದ ಸಿರಿಗನ್ನಡ ಕೃತಿಯ ಪುಟಗಳನ್ನು ತೆರೆಯುವ
- ಮೂಲಕ ವಿಶಿಷ್ಟ ರೀತಿಯಲ್ಲಿ ಸಮ್ಮೇಳನ ಉದ್ಘಾಟಿಸಲಾಯಿತು.
- ಸಮ್ಮೇಳನದ ನೆನಪಿಗಾಗಿ ಸಾವಿರ ಕಂಬದ ಬಸದಿ ಮತ್ತು ವೇಣೂರಿನ ಬಾಹುಬಲಿಯ ಚಿತ್ರವನ್ನೊಳಗೊಂಡ ವಿಶೇಷ ಅಂಚೆ ಲಕೋಟೆ ಹಾಗೂ ಡಾ. ಮೋಹನ್ ಆಳ್ವರ ಚಿತ್ರವನ್ನೊಳಗೊಂಡ ಅಂಚೆ ಚೀಟಿಯನ್ನೂ ಅನಾವರಣ ಮಾಡಲಾಯಿತು.
- ಆಳ್ವಾಸ್ ನುಡಿಸಿರಿ 2915ರ ನೆನಪಿನ ಸಂಚಿಕೆ ‘ಕರ್ನಾಟಕ: ಹೊಸತನದ ಹುಡುಕಾಟ’ವನ್ನು ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಬಿಡುಗಡೆಗೊಳಿಸಿದರು.
- ಶಿಸ್ತು ಮತ್ತು ಸಮಯಪ್ರಜ್ಞೆಗೆ ಖ್ಯಾತಿ ಪಡೆದಿರುವ ಆಳ್ವಾಸ್ ನುಡಿಸಿರಿಯಲ್ಲಿ ಈ ಬಾರಿಯೂ ಅದು ಮೇಳೈಸಿತು. ಎಲ್ಲವೂ ನಿಗದಿತ ಸಮಯಕ್ಕೆ ನಡೆದು ಪ್ರಶಂಸೆಗೆ ಪಾತ್ರವಾಯಿತು.
- ನುಡಿಸಿರಿಯು ರತ್ನಾಕರವರ್ಣಿ ವೇದಿಕೆ, ಕೆ.ಪಿ. ಸುಬ್ಬಣ್ಣ ಬಯಲು ರಂಗಮಂದಿರ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆ, ಸಿನಿಸಿರಿ ಕುವೆಂಪು ವೇದಿಕೆ, ಡಾ. ಶಿವರಾಮ ಕಾರಂತ ವೇದಿಕೆ, ಮಿಜಾರು ಅಣ್ಣಪ್ಪವೇದಿಕೆ, ಬೋಲ ಚಿತ್ತರಂಜನ್ದಾಸ್ ಶೆಟ್ಟಿ ವೇದಿಕೆ, ಸುಭಾಶ್ಚಂದ್ರ ಪಡಿವಾಳ್ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಸಿದ್ಧಕಟ್ಟೆ ಚೆನ್ನಪ್ಪಶೆಟ್ಟಿ ವೇದಿಕೆಯನ್ನು ಒಳಗೊಂಡಿತ್ತು.
- ನುಡಿಸಿರಿಯಲ್ಲಿ ಸಿನಿಸಿರಿ, ಕೃಷಿಸಿರಿ, ವಿದ್ಯಾರ್ಥಿ ಸಿರಿಯೊಂದಿಗೆ ಕುಸ್ತಿ ಪಂದ್ಯಾಟಕ್ಕೂ ಒತ್ತು ನೀಡಿರುವುದು ಈ ಬಾರಿಯ ವಿಶೇಷ.
`ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ಎಂಬ ವಿಶೇಷ ವಿಚಾರ ಗೋಷ್ಠಿ
ಮೂಡುಬಿದಿರೆ, ನವೆಂಬರ್18: ಜಾಗತಿಕ ಭಾಷೆಗಳು ನಮ್ಮನ್ನು ಆಳುತ್ತಿರುವ, ಆಕ್ರಮಿಸುತ್ತಿರುವ ಹೊತ್ತಿನಲ್ಲಿ ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿಯಲ್ಲಿ `ಸೋದರ ಭಾಷೆಗಳು-ನಾಳೆಗಳ ನಿರ್ಮಾಣ’ ಎಂಬ ವಿಶೇಷ ವಿಚಾರ ಗೋಷ್ಠಿಯನ್ನು ನಡೆಸಲಾಯಿತು. ಈ ವಿಚಾರಗೋಷ್ಠಿಯಲ್ಲಿ ಕನ್ನಡ, ತಮಿಳು, ಮಲೆಯಾಳಂ ಭಾಷೆಗಳಲ್ಲಿ ನಡೆಯುತ್ತಿರುವ ಪ್ರಗತಿಪರ ಬದಲಾವಣೆಗಳ ಕುರಿತು ವಿದ್ವಾಂಸರು ತಮ್ಮ ವಿಚಾರವನ್ನು ಮಂಡಿಸಿದರು.
ತಮಿಳು ಭಾಷೆ-ನಾಳೆಗಳ ನಿರ್ಮಾಣ : ತಮಿಳು ಭಾಷೆಯಲ್ಲಾಗಿರುವ, ಆಗುತ್ತಿರುವ ತ್ವರಿತ ಬದಲಾವಣೆಗಳ ಕುರಿತು ಮಾತನಾಡಿದ ಡಾ.ತಮಿಳ್ ಸೆಲ್ವಿ, ಕರ್ನಾಟಕದಲ್ಲಿ ನಾಳೆಗಳನ್ನು ನಿರ್ಮಾಣ ಮಾಡುವ ಮೊದಲು ನಮ್ಮ ಸೋದರ ಭಾಷೆಗಳಲ್ಲಿ ಏನಾಗುತ್ತಿದೆ ಯೆಂಬುದನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ವಾಸ್ತವದಲ್ಲಿ ನಮ್ಮಿಂದ ಮಾಡಲಾಗದ ಕಾರ್ಯವನ್ನು ತಮ್ಮ ಕಾವ್ಯಗಳ ಮೂಲಕ ಕವಿಗಳು ಮಾಡುತ್ತಾರೆ. ಭಾಷೆಗೆ ಆ ಅಂತಸ್ಸತ್ವ ಇದೆ. ಹೀಗಾಗಿ ನಾವು ಭಾಷೆಯನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಇಂದು ನಾವು ಒಳ್ಳೆಯ ಬೀಜಗಳನ್ನು ಬಿತ್ತಿದರೆ ನಾಳೆ ಅದು ಸದೃಢ ಹೆಮ್ಮರವಾಗಲು ಸಾಧ್ಯ. ಆದ್ದರಿಂದ ತುಂಬಾ ಜಾಗೃತಪ್ರಜ್ಞೆಯಿಂದ ನಾವು ಭಾಷೆ-ಸಂಸ್ಕೃತಿಯ ಕೆಲಸವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.
`ತಮಿಳರು ತಮ್ಮ ಭಾಷೆಯನ್ನು ಬೆಳೆಸಲು, ಉಳಿಸಲು ಮಾಡಿದ ಪ್ರಯತ್ನ ನಿಜಕ್ಕೂ ಪ್ರಶಂಸನೀಯ. ಶಾಸ್ತ್ರೀಯ ಸ್ಥಾನಮಾನಕ್ಕಾಗಿ ದಶಕಗಳ ಕಾಲ ಹೋರಾಟ ನಡೆಸಿದ ಅವರು, ಆ ಸ್ಥಾನ ಲಭ್ಯವಾದ ನಂತರ ಸುಮ್ಮನೇ ಕೂರಲಿಲ್ಲ. ತಮಿಳಿನ ಶ್ರೇಷ್ಠ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸಿದರು. ಸಂಗಂ ಸಾಹಿತ್ಯ ಸೇರಿದಂತೆ ಹೆಚ್ಚಿನ ತಮಿಳು ಕೃತಿಗಳು ಬೇರೆ ಭಾಷೆಗಳಲ್ಲಿ ಲಭ್ಯವಿವೆ. ತಮಿಳಿನ ಪಂಚಮವೇದವೆಂದೇ ಖ್ಯಾತವಾಗಿರುವ ತಿರುವಳ್ಳುವರ್ ಬರೆದ ಕೃತಿ `ತಿರುಕ್ಕುರಲ್’ ಇಂದು ಜಗತ್ತಿನ ೮೦ ಭಾಷೆಗಳಿಗೆ ಅನುವಾದಗೊಂಡಿದೆ. ಅವರ ಭಾಷಾಭಿಮಾನ ಎಷ್ಟಿದೆಯೆಂದರೆ ಇಂದು ತಮಿಳನ್ನು ನಮ್ಮ ರಾಷ್ಟ್ರದ ಎರಡನೇ ಆಡಳಿತ ಭಾಷೆಯಾಗಿ ಮಾಡುವತ್ತ ಅವರ ಹೋರಾಟ ನಡೆದಿದೆ’ ಎಂದರು.
ತಮಿಳು ಭಾಷೆಯ ಜೊತೆ ಕನ್ನಡದ ಪರಿಸ್ಥಿತಿಯನ್ನು ಹೋಲಿಕೆ ಮಾಡಿದ ಡಾ. ತಮಿಳ್ ಸೆಲ್ವಿ, `ಕನ್ನಡದಲ್ಲಿ ಇಂತಹ ಪ್ರಯತ್ನಗಳು ಆಗಿದ್ದು ತುಂಬಾ ಕಡಿಮೆ. ಸಾಹಿತ್ಯ ಲೋಕದ ಅತ್ಯಂತ ಶ್ರೇಷ್ಠ ಕೃತಿಗಳಿರುವುದೇ ಕನ್ನಡದಲ್ಲಿ. ಆದರೆ ಇಂದು ಪಂಪ-ರನ್ನರ ಕೃತಿಗಳು ಬೇರೆ ಭಾಷೆಗಳಿಗೆ ಅನುವಾದಗೊಂಡಿದ್ದು ತುಂಬಾ ಕಡಿಮೆ. ತಮಿಳರಿಗೆ ಶಾಸ್ತ್ರೀಯ ಸ್ಥಾನ ಸಿಕ್ಕಿತೆಂಬ ಕಾರಣದಿಂದ ಕನ್ನಡಿಗರೂ ಅದಕ್ಕಾಗಿ ಹೋರಾಟ ನಡೆಸಿದರು.
ಶಾಸ್ತ್ರೀಯ ಸ್ಥಾನದ ನಂತರ ಮುಂದೇನು ಮಾಡಬಹುದೆಂಬ ಯೋಜನೆ ಹೋರಾಟಗಾರರಿಗೆ ಇಲ್ಲವಾಗಿದೆ. ತಮಿಳು ನಾಡಿನಲ್ಲಿ ಉನ್ನತ ಪದವಿಗಳನ್ನು, ತಾಂತ್ರಿಕ ವಿಷಯಗಳನ್ನು ತಮಿಳಿನಲ್ಲಿಯೇ ಕಲಿಯುವ ಅವಕಾಶವಿದೆ, ಅಲ್ಲಿನ ಶಾಲೆಗಳಲ್ಲಿ ತಮಿಳು ಕಡ್ಡಾಯಭಾಷೆ. ಆದರೆ ಕರ್ನಾಟಕದಲ್ಲಿ ಇನ್ನೂ ಈ ಬದಲಾವಣೆ ಕಂಡು ಬರಬೇಕಿದೆ. ನಾವು ಶ್ರೇಷ್ಠವಾದ ಕನ್ನಡ ಭಾಷೆಯನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಇದನ್ನು ಸರಿಪಡಿಸಿ ನಮ್ಮತನವನ್ನು ಮೊದಲು ಅರ್ಥ ಮಾಡಿಕೊಂಡಾಗ ಮಾತ್ರ ಸುಂದರ ನಾಳೆಗಳನ್ನು ಕಟ್ಟಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.
ಮಲಯಾಳಂ ಭಾಷೆ- ನಾಳೆಗಳ ನಿರ್ಮಾಣ :
ನಮ್ಮ ಮತ್ತೊಂದು ದ್ರಾವಿಡ ಭಾಷೆ ಮಲೆಯಾಳಂ ಬಗ್ಗೆ ಮಾತನಾಡಿದ ಡಾ. ಮೋಹನ್ ಕುಂಟಾರ್, `ಮಲೆಯಾಳಂನಲ್ಲೂ ಕೂಡ ಸುಂದರ ಭಾಷೆಗಳನ್ನು ನಿರ್ಮಾಣ ಮಾಡಬೇಕಾದ ಅವಶ್ಯಕತೆ ಖಂಡಿತ ಇದೆ. ಭಾಷೆ ಕೇವಲ ಪುಸ್ತಕದಲ್ಲಿರಬಾರದು, ಬದಲಿಗೆ ಅದು ಕ್ರಿಯಾತ್ಮಕ ಆಡಳಿತ ಭಾಷೆಯಾಗಿರಬೇಕು ಎಂದು ಕೇರಳ ಸರಕಾರ ಪ್ರಯತ್ನಿಸುತ್ತಿದೆ. ಆಡಳಿತದಲ್ಲಿ, ಶಿಕ್ಷಣದಲ್ಲಿ ಮಲೆಯಾಳಂನ್ನು ಕಡ್ಡಾಯವಾಗಿ ಕಲಿಯಬೇಕೆಂಬ ಅಧಿಸೂಚನೆ ಹೊರಡಿಸಿದೆ. ಸರಕಾರವೇ ಮಲೆಯಾಳಂ ಭಾಷೆಯನ್ನು ಎತ್ತಿಹಿಡಿಯಲು ಪ್ರಯತ್ನಿಸುತ್ತಿರುವುದರಿಂದ ಸಕಾರಾತ್ಮಕ ಬದಲಾವಾಣೆಗಳು ಕೇರಳದಲ್ಲಿ ಕಂಡು ಬರುತ್ತಿವೆ’ ಎಂದು ಅವರು ಹೇಳಿದರು.
ಮಯಾಳಂ ಭಾಷೆಯ ಬೆಳವಣಿಗೆಗಾಗಿ ದಶಕಗಳಿಂದ ಪೂರಕ ಪ್ರಯತ್ನ ನಡೆಯುತ್ತಿದೆ. ಕೇವಲ ಸರಕಾರಿ ಶಾಲೆಯಲ್ಲಿ ಮಾತ್ರ ಶಿಕ್ಷಣ ಪಡೆಯಬೇಕೆಂಬ ನಿಯಮವನ್ನು ಸರಕಾರ ತಂದದ್ದರಿಂದ ಇಂದಿಗೂ ಕೇರಳದಲ್ಲಿ ಸರಕಾರಿ ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವುದಕ್ಕೆ ತುಂಬಾ ಮಹತ್ವವಿದೆ. ವಾಚನ ಪದ್ಧತಿ ಕೇರಳದಲ್ಲಿ ಬೆಳೆದು ಬಂದಿದೆ. ಎಲ್ಲರಿಗೂ ಜ್ಞಾನವನ್ನು ತಲುಪಿಸಬೇಕೆಂಬುದು ಅಲ್ಲಿನ ಜನರ ವಿಚಾರ. ಅದಕ್ಕಾಗಿ ಗ್ರಂಥಾಲಯ ಸೇವೆಯನ್ನು ಅಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಉತ್ತಮ ರೀತಿಯಲ್ಲಿ ಗ್ರಂಥಾಲಯ ಸೇವೆಯನ್ನು ನೀಡಿದವರಿಗೆ ವಿಶೇಷ ರೀತಿಯ ಸಂಭಾವನೆಯನ್ನೂ ಸರಕಾರದಿಂದ ನೀಡಲಾಗುತ್ತದೆ. ಹೀಗಾಗಿ ಓದುವವರ ಹಾಗೂ ಓದಿಸುವವರ ಪ್ರಮಾಣ ಕೇರಳದಲ್ಲಿ ಹೆಚ್ಚಿದೆ ಎಂದು ಮೋಹನ್ ಕುಂಟಾರ್ ಹೇಳಿದರು.
ಮಲಯಾಳಂ ಭಾಷಾ ಬೆಳವಣಿಗೆಗೆ ಇತರ ಕಾರ್ಯಗಳು ಹೇಗೆ ಸಹಕಾರಿಯಾಗಿವೆ ಎಂಬುದನ್ನು ವಿಮರ್ಶಿಸಿದ ಅವರು, `ಶಾಲಾ ಕಲೋತ್ಸವಗಳು, ಕೇರಳ ಮಾಧ್ಯಮ ಹಾಗೂ ಶ್ರೇಷ್ಠ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದಿಸುವ ಕಾರ್ಯಗಳು ಮಲೆಯಾಳಂ ಭಾಷೆಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿನ ಜನರ ಪಾಲ್ಗೊಳ್ಳುವಿಕೆ. ಸರಕಾರ ಏನು ಮಾಡುತ್ತದೆ ಎನ್ನುವುದಕ್ಕಿಂತ ಸರಕಾರದಿಂದ ತಮಗೇನು ಬೇಕು ಎನ್ನುವುದನ್ನು ಜನ ನಿರ್ಧರಿಸುತ್ತಾರೆ.ಹೀಗಾಗಿ ಮಲೆಯಾಳಂ ಪ್ರಗತಿ ಹೊಂದುತ್ತಿದೆ ಎಂದರು.
ಕನ್ನಡ ಭಾಷೆ- ನಾಳೆಗಳ ನಿರ್ಮಾಣ
ಕನ್ನಡ ಭಾಷೆ ನಾಳೆಗಳ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರೊ. ಕಿಕ್ಕೇರಿ ನಾರಾಯಣ್, `ನಮ್ಮಲ್ಲಿ ಭಾಷೆ ಅಂದ್ರೆ ಸಾಹಿತ್ಯ ಮಾತ್ರ ಎಂಬ ಭಾವನೆಯಿದೆ. ಆದರೆ ಸಾಹಿತ್ಯಕ್ಕೂ ಮಿಗಿಲಾದ ಅನೇಕ ಸಂಗತಿಗಳು ನಮ್ಮಲಲಿವೆ. ಇದನ್ನು ಅರ್ಥೈಸಿಕೊಳ್ಳುವಲ್ಲಿ ಕನ್ನಡಿಗರು ಸೋಲುತ್ತಿದ್ದಾರೆ. ನಾಳೆಗಳ ನಿರ್ಮಾಣ ಮಾಡುವ ಮೊದಲು ನಿನ್ನೆಯನ್ನು ಅರ್ಥೈಸಿಕೊಳ್ಳಬೇಕು. ನಿನ್ನೆಯನ್ನು ಅರಿತಾಗ ಮಾತ್ರ ನಳೆಗಳನ್ನು ನಿರ್ಮಿಸಲು ಸಾಧ್ಯ’ ಎಂದರು.
ಭಾಷಾಲೋಕದಲ್ಲಿ ಯಾವಾಗಲೂ ಹೊಸ ಬದಲಾವಣೆಗಳಾಗುತ್ತಿರುತ್ತವೆ. ಈ ಹೊಸ ಬದಲಾವಣೆಗಳಿಗೆ ನಮ್ಮನ್ನು ತೆರೆದುಕೊಂಡಾಗ ಮಾತ್ರ ಭಾಷೆಯನ್ನು ಕಟ್ಟಲು ಸಾಧ್ಯ. ಇಂದಿನ ಕರ್ನಾಟಕಕೆ ಇದರ ಅವಶ್ಯಕತೆ ಖಂಡಿತವಾಗಿಯೂ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.
Comments are closed.