ಮಂಗಳೂರು, ನ.4: ಮಂಗಳೂರು – ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ರಸ್ತೆ ಪಕ್ಕದಲ್ಲಿ ಕಾಮಗಾರಿ ನಿರತವಾಗಿದ್ದ ಟ್ರ್ಯಾಕ್ಟರೊಂದಕ್ಕೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಇಂದು ಬೆಳಿಗ್ಗೆ ರಾ.ಹೆ.66ರ ಕಲ್ಲಾಪಿನ ಹೆದ್ದಾರಿಯ ರಸ್ತೆ ವಿಭಜಕದಲ್ಲಿ ಗಿಡ ನೆಡುವ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ಕಾಮಗಾರಿಗೆ ಸಂಬಂಧಪಟ್ಟ ಟ್ರ್ಯಾಕ್ಟರ್ ನ್ನು ವಿಭಜಕದ ಪಕ್ಕ ನಿಲ್ಲಿಸಿ ಕಾರ್ಮಿಕರು ಗಿಡನೆಡುವ ಕೆಲಸ ನಿರ್ವಹಿಸುತ್ತಿದ್ದರು.
ಈ ವೇಳೆ ಮಂಗಳೂರು – ಕೊಣಾಜೆ ರೂಟಿನ ೫೧ ನಂಬರಿನ ಬಸ್ ಚಾಲಕನ ನಿಯಂತ್ರಣ ತಪ್ಪಿ ನಿಂತಿದ್ದ ಟ್ರ್ಯಾಕ್ಟರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿದ್ದು, ಟ್ರ್ಯಾಕ್ಟರ್ ಚಾಲಕ ಹನುಮಂತ ಎಂಬವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.