ಮಂಗಳೂರು, ಅಕ್ಟೋಬರ್.24: ಮಂಗಳೂರಿನ ಪ್ರತಾಪನಗರದ ಸಂಘನಿಕೇತನದಲ್ಲಿ ಜರಗಿದ ಬಜರಂಗ ದಳ ಕರ್ನಾಟಕ ದಕ್ಷಿಣ ಪ್ರಾಂತದ 3 ದಿನಗಳ ಅಧಿವೇಶನದ ಸಮಾರೋಪದ ಅಂಗವಾಗಿ ರವಿವಾರ ನಗರದ ಕದ್ರಿ ಮೈದಾನದಲ್ಲಿ ಹಿಂದೂ ಜಯಘೋಷ್ ಬೃಹತ್ ಸಾರ್ವಜನಿಕ ಸಭೆ ನಡೆಯಿತು.
ಸಭೆಯನ್ನುದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದ ವಿಶ್ವಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯದರ್ಶಿ ಸುರೇಂದ್ರ ಕುಮಾರ್ ಜೈನ್ ಅವರು, ಹಿಂದೂ ಸಮಾಜದ ಮೇಲೆ ನಿರಂತರ ಆಕ್ರಮಣಗಳು ನಡೆಯುತ್ತಿವೆ. ಸರಕಾರಗಳು ಇದನ್ನು ತಡೆಯಲು ವಿಫಲವಾಗಿವೆ. ಇದೀಗ ಹಿಂದೂ ಸಮಾಜ ಜಾಗೃತವಾಗಿದೆ. ಈಗಾಗಲೇ ಬಹಳಷ್ಟು ಆಕ್ರಮಣಗಳು ಹಿಂದೂ ಸಮಾಜದ ಮೇಲಾಗಿವೆ. ಇನ್ನೂ ಸಹಿಸಲು ಸಾಧ್ಯವಿಲ್ಲ. ಧರ್ಮ ಮತ್ತು ರಾಷ್ಟ್ರ ರಕ್ಷಣೆಗೆ ಕಟಿಬದ್ಧವಾಗಿರುವ ಬಜರಂಗ ದಳದ ಲಕ್ಷಾಂತರ ಯುವಶಕ್ತಿ ಇದನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಿದೆ ಎಂದು ಹೇಳಿದರು.
ದೇಶ, ಧರ್ಮ ರಕ್ಷಣೆಗಾಗಿ ಸರ್ಜಿಕಲ್ ಸ್ಟ್ರೈಕ್ಗೂ ಬಜರಂಗ ದಳ ಸಿದ್ಧವಾಗಿದೆ. ಇದಕ್ಕಾಗಿ ಪ್ರಾಣಾರ್ಪಣೆ ಸೇರಿದಂತೆ ಯಾವುದೇ ತ್ಯಾಗಕ್ಕೂ ಸಿದ್ಧರಿದ್ದಾರೆ. ಧರ್ಮ, ಗೋ ರಕ್ಷಣೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕರ್ನಾಟಕದಲ್ಲಿ ಬಹಳ ಸಂಖ್ಯೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ. ಇವರೆಲ್ಲರಿಗೂ ಬಜರಂಗದಳ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ನ ಯುವ ವಿಭಾಗವಾಗಿರುವ ಬಜರಂಗ ದಳ ಸೇವಾ, ಸುರಕ್ಷಾ ಮತ್ತು ಸಂಸ್ಕಾರ ಎಂಬ ಧ್ಯೇಯದೊಂದಿಗೆ ಕಾರ್ಯಾಚರಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 530ಕ್ಕೂ ಅಧಿಕ ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಬಜರಂಗ ದಳ ಪ್ರಾಂತ ಸಂಯೋಜಕ್ ಶರಣ್ ಪಂಪ್ವೆಲ್ ಅವರ ನೇತೃತ್ವದಲ್ಲಿ ಪ್ರಾಂತ ಮಟ್ಟದ ಅಧಿವೇಶನ ಅತ್ಯಂತ ಶಿಸ್ತುಬದ್ಧ ಹಾಗೂ ವ್ಯವಸ್ಥಿತವಾಗಿ ನಡೆದಿದೆ. ಇದಕ್ಕಾಗಿ ಅವರು ಹಾಗೂ ಅವರ ತಂಡವನ್ನು ಅಭಿನಂದಿಸುತ್ತಿದ್ದೇನೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಹೇಳಿದರು.
ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಬಗ್ಗೆ ಕೆಲವರು ಕ್ಷುಲ್ಲಕ ಮಾತುಗಳನ್ನಾಡಿ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ. ಇಂತಹ ಪ್ರಯತ್ನಗಳನ್ನು ವಿಶ್ವಹಿಂದೂ ಪರಿಷತ್, ಬಜರಂಗ ದಳ ಹಿಮ್ಮೆಟ್ಟಿಸಲಿದೆ ಎಂದು ಹೇಳಿದ ಅವರು, ಅನೇಕ ವರ್ಷಗಳ ಹಿಂದೆಯೇ ಉಡುಪಿಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಜರಗಿದ ಧರ್ಮಸಂಸತ್ ಸಮಾವೇಶದಲ್ಲಿ ಹಿಂದೂ ಧರ್ಮದಲ್ಲಿದ್ದ ಅಸ್ಪೃಶ್ಯತೆ ನಿವಾರಣೆಗೆ ಮುನ್ನುಡಿ ಬರೆಯಲಾಗಿತ್ತು. ಈ ನಿಟ್ಟಿನಲ್ಲಿ ಸ್ವಾಮೀಜಿಯವರು ಬಹಳಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ಅವರ ವಿರುದ್ಧ ಸರಕಾರದ ಪ್ರಾಯೋಜಿತ ಮಂದಿ, ಬುದ್ಧಿಜೀವಿಗಳು ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥವರಿಂದ ಉಡುಪಿ ಮಠದ ಘನತೆ, ಗೌರವಕ್ಕೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನ ಕಾರ್ಯದರ್ಶಿ ಗೋಪಾಲ್ಜಿ ಅವರು ಮಾತನಾಡಿ, ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಅಸ್ಪೃಶ್ಯತೆ ನಿವಾರಣೆಯಾಗ ಬೇಕು ಎಂಬ ಸಂಕಲ್ಪದೊಂದಿಗೆ ಬಹಳಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ. ಆದರೆ ಕೆಲವರು ಸ್ವಾಮೀಜಿಯವರ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡಿ ಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳುವ ಮೂಲಕ ಮಠದ ಘನತೆ, ಗೌರವಕ್ಕೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಹಿಂದೂಗಳ ಸಹನೆಯನ್ನು ಪರೀಕ್ಷಿಸುವ ಕೆಲಸವನ್ನು ಯಾರೂ ಮಾಡಬಾರದು. ಹಿಂದೂ ಸಮಾಜದ ಮೇಲೆ ಈ ಹಿಂದೆ ಅನೇಕ ಬಾರಿ ಆಕ್ರಮಣಗಳು ನಡೆದಾಗ ಅದನ್ನು ಸಮರ್ಥವಾಗಿ ಎದುರಿಸಿದೆ. ಹಿಂದೂ ಹಸನ್ಮುಖೀ. ಆದರೆ ಆತನ ಮೇಲೆ ಆಕ್ರಮಣ, ದಮನಿಸುವ ಪ್ರಯತ್ನಗಳು ನಡೆದರೆ ಜ್ವಾಲಾಮುಖೀಯೂ ಆಗಬಲ್ಲದು ಎಂದು ಅವರು ಹೇಳಿದರು.
ಸಭೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಯಿತು .ಕರ್ನಾಟಕ ಸರಕಾರ ಟಿಪ್ಪು ಜಯಂತಿ ಆಚಣೆಗೆ ಮುಂದಾಗುವ ಮೂಲಕ ಕಳೆದ ವರ್ಷ ಮಾಡಿದ ತಪ್ಪನ್ನು ಈ ವರ್ಷವೂ ಮಾಡಲು ಹೊರಟಿದೆ. ಒಂದೊಮ್ಮೆ ಇದಕ್ಕೆ ಮುಂದಾದರೆ ಇಡೀ ಕರ್ನಾಟಕದಲ್ಲಿ ಶಾಂತಿ, ಸಾಮರಸ್ಯ ವಾತಾವರಣ ಹದಗೆಡಲಿದೆ. ಟಿಪ್ಪು ಸುಲ್ತಾನ್ ಓರ್ವ ಮತಾಂಧ, ಆಕ್ರಮಣಕಾರಿ, ಕನ್ನಡ ವಿರೋಧಿಯಾಗಿದ್ದ. ಆತನ ಜಯಂತಿಯನ್ನು ಮಾಡುತ್ತಿರುವುದು ದೌರ್ಭಾಗ್ಯಕರ. ಟಿಪ್ಪು ಜಯಂತಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ರಾಜ್ಯದಲ್ಲಿ ಆಶಾಂತಿ ಸೃಷ್ಟಿಸಲು ಹುನ್ನಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂತು. ಸರಕಾರ ಟಿಪ್ಪು ಜಯಂತಿ ಮಾಡ ಹೊರಟರೆ ಇದನ್ನು ಯಾವುದೇ ಬೆಲೆ ತೆತ್ತಾದರೂ ತಡೆಯಲು ಬಜರಂಗ ದಳ ಸಿದ್ಧವಿದೆ ಎಂಬ ಸಂಕಲ್ಪ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಎ.ಬಿ. ಶೆಟ್ಟಿ ದಂತ ವೈದ್ಯಕೀಯ ಕಾಲೇಜಿನ ಮಾಜಿ ಡೀನ್ ಡಾ| ಶ್ರೀಧರ್ ಶೆಟ್ಟಿ ಅವರು ವಹಿಸಿದ್ದರು. ಬಜರಂಗ ದಳ ಪ್ರಾಂತ ಸಂಯೋಜಕ್ ಶರಣ್ ಪಂಪ್ವೆಲ್ ಸ್ವಾಗತಿಸಿದರು. ಕ್ಷೇತ್ರೀಯ ಸಂಯೋಜಕ ಸೂರ್ಯನಾರಾಯಣ ಅವರು ಪ್ರಸ್ತಾವನೆಗೈದು ನಿರ್ಣಯಗಳನ್ನು ಮಂಡಿಸಿದರು.
ರಾಜ್ಯ ಗೋರಕ್ಷಾ ಪ್ರಮುಖ್ ರಘು ಸಕಲೇಶಪುರ, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಗದೀಶ ಶೇಣವ, ಬಜರಂಗ ದಳ ಬೆಂಗಳೂರು ಮಹಾನಗರ ಸಂಚಾಲಕ ಕೇಶವ ನಾಯ್ಕ್, ಬಸವರಾಜು, ರಂಗನಾಥ್, ಸುನೀಲ್ ಕೆ.ಆರ್., ಭುಜಂಗ ಕುಲಾಲ್, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಮುರಳಿಕೃಷ್ಣ ಹಸಂತಡ್ಕ ನಿರೂಪಿಸಿದರು.
ಆರಂಭದಲ್ಲಿ ಆಕರ್ಷಕ ಪಥಸಂಚಲನ :
ಸಾರ್ವಜನಿಕ ಸಭೆಯ ಮೊದಲು ನಗರದ ಅಂಬೇಡ್ಕರ್ ವೃತ್ತದಿಂದ ಕದ್ರಿ ಮೈದಾನದ ವರೆಗೆ ಪ್ರತಿನಿಧಿಗಳ ಪಥಸಂಚಲನ ಹಾಗೂ ಆಕರ್ಷಕ ಶೋಭಾಯಾತ್ರೆ ನಡೆಯಿತು. ಬಂಟ್ಸ್ ಹಾಸ್ಟೆಲ್, ಮಲ್ಲಿಕಟ್ಟೆ ಕದ್ರಿ ಮಂಜುನಾಥ ಸ್ವಾಮಿ ದ್ವಾರದ ಮೂಲಕ ಕದ್ರಿ ಮೈದಾನಕ್ಕೆ ಸಾಗಿಬಂದ ಪಥಸಂಚಲನ ಹಾಗೂ ಶೋಭಾಯಾತ್ರೆಯಲ್ಲಿ ಚೆಂಡೆ, ನಾಸಿಕ್ ಬ್ಯಾಂಡ್, ಮಹಾಪುರುಷರ ಸ್ತಬ್ಧಚಿತ್ರಗಳನ್ನು ಒಳಗೊಂಡ ಟ್ಯಾಬ್ಲೋಗಳು ಭಾಗವಹಿಸಿದ್ದವು.