ಮಂಗಳೂರು, ಅ. 8: ಮಂಗಳೂರು ಹೊರವಲಯದ ಮರಕಡದಲ್ಲಿ ದರೋಡೆಗೆ ಸಂಚು ರೂಪಿಸುತ್ತಿದ್ದ 6 ಮಂದಿಯ ತಂಡವನ್ನು ಕಾವೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಮೆಣಸಿನ ಹುಡಿ ಹಾಗೂ 2 ಹರಿತವಾದ ಅಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಕಾಶಭವನದ ನಿವಾಸಿಗಳಾದ ಗೌತಮ್ (26), ಕೌಶಿಕ್ (22), ಪ್ರೀತಮ್ (22), ರಿತೇಶ್ (19), ವಿಶಾಲ್ ದಾಸ್ (31) ಹಾಗೂ ಕುಂಜತ್ತಬೈಲ್ ನಿವಾಸಿ ವಿಶಾಲ್ ಕುಮಾರ್ (22) ಬಂಧಿತ ಆರೋಪಿಗಳು.
ಮರಕಡ ಬಸ್ಸು ನಿಲ್ದಾಣದ ಬಳಿ ಐದರಿಂದ ಆರು ಮಂದಿಯ ತಂಡವೊಂದು ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ 12:15ರ ಹೊತ್ತಿಗೆ ಕಾವೂರು ಠಾಣಾ ಪಿಎಸ್ಸೈ ಉಮೇಶ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಪೊಲೀಸರನ್ನು ಕಂಡ ಯುವಕರು ಅಲ್ಲಿಂದ ಓಡಲು ಯತ್ನಿಸಿದಾಗ ಅವರನ್ನು ಪೊಲೀಸರು ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ರಸ್ತೆಯಲ್ಲಿ ಹೋಗುವ ವಾಹನವನ್ನು ಅಡ್ಡಹಾಕಿ ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂದು ತಿಳಿದು ಬಂದಿದೆ.
ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.