
ಮಂಗಳೂರು, ಸೆ.16: ಆತ್ಮಹತ್ಯೆಗೈಯಲು ನಿರ್ಧರಿಸಿದಂತಹ ವ್ಯಕ್ತಿಗಳಿಗೆ ಸಾಂತ್ವನ, ಆರೈಕೆ, ಬೆಂಬಲ ದೊರೆತರೆ ಅವರು ಆತ್ಮಹತ್ಯೆ ನಿರ್ಧಾರದಿಂದ ಹೊರಬರಬಹುದು. ಮಾನಸಿಕ ರೋಗ ಗುಣವಾಗಲು ವೈದ್ಯರ ಚಿಕಿತ್ಸೆಯ ಜೊತೆ ಕುಟುಂಬದ, ಸಮಾಜದ ಬೆಂಬಲ ಅಗತ್ಯವಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅಭಿಪ್ರಾಯ ಪಟ್ಟರು.
ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ( ಮಾನಸಿಕ ವಿಭಾಗ) ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಸಹಯೋಗದೊಂದಿಗೆ ಮಂಗಳೂರು ಉಪ ಪೊಲೀಸ್ ಆಯುಕ್ತ ( ಕಾನುನು ಸುವ್ಯವಸ್ಥೆ) ಡಾ.ಕೆ.ಎನ್ .ಶಾಂತರಾಜುರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಂಗಳೂರಿನ ಪೊಲೀಸ್ ಅಯುಕ್ತರ ಕಚೇರಿಯಲ್ಲಿ ನಡೆದ “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ 2016 ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎ.ಜೆ ಆಸ್ಪತ್ರೆ ಮನೋರೋಗ ವಿಭಾಗ ಮುಖ್ಯಸ್ಥ ಡಾ. ರವೀಶ್ ತುಂಗ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಯೋಚನೆಗಿಂತ ಭಾವನೆ ಪ್ರಬಲವಾಗುತ್ತ ಹೋದರೆ ಮನಸಿನ ಸಮತೋಲನ ತಪ್ಪುತ್ತದೆ. ಈ ರೀತಿಯಾದಾಗ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಒತ್ತಡ ನಿಭಾಯಿಸಲು ಸಾಧ್ಯವಾದರೆ ಮಾನಸಿಕ ಕಾಯಿಲೆಯ ಜೊತೆಗೆ ದೈಹಿಕ ಕಾಯಿಲೆಯನ್ನೂ ಗುಣಮುಖವಾಗಿಸಲು ಸಾಧ್ಯ ಎಂದು ಅವರು ಹೇಳಿದರು.
ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಪ್ರಸಕ್ತ ಒತ್ತಡಕ್ಕೆ ಒಳಗಾಗಿ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡುವಂತಹ ಪರಿಸ್ಥಿತಿಯಿದೆ. 6ನೆ ತರಗತಿ ಕಲಿಯುವ ವಿದ್ಯಾರ್ಥಿ , 72 ವರ್ಷದ ವೃದ್ದರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆ ನಡೆಯುತ್ತಿದೆ. ಈ ರೀತಿ ಆಗುತ್ತಿರುವುದು ಕಳವಳಕಾರಿ ಎಂದರು.
ಉಪ ಪೊಲೀಸ್ ಆಯುಕ್ತ ಸಂಜೀವ ಎಂ. ಪಾಟೀಲ್ ಹಾಗೂ ಮತ್ತಿತ್ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Comments are closed.