ಮಂಗಳೂರು, ಸೆಪ್ಟಂಬರ್.4: ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಬಂಟರ ಯಾನೆ ನಾಡವರ ಮಾತೃ ಸಂಘ, ಬಂಟ್ಸ್ ಹಾಸ್ಟೆಲ್ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ “ರಾಷ್ಟ್ರ ರಕ್ಷಕರೊಂದಿಗೆ ಒಂದು ಸುಂದರ ಸಂಜೆ’ ಎಂಬ ವಿನೂತನ ಕಾರ್ಯಕ್ರಮ ಶನಿವಾರ ಸಂಜೆ ನಗರದ ಬಂಟ್ಸ್ ಹಾಸ್ಟೇಲ್ ಪ್ರಾಂಗಣದಲ್ಲಿ ಜರಗಿತು.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವದಲ್ಲೇ ಮೂರನೇ ಅತೀ ದೊಡ್ಡ ಸೇನೆಯಿರುವ ನಮ್ಮ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಅದರಲ್ಲೂ ನಮ್ಮ ಜಿಲ್ಲೆಯಿಂದ ಸೈನ್ಯಕ್ಕೆ ಸೇರುವವರ ಸಂಖ್ಯೆ ಬಹಳ ಕಡಿಮೆ ಸಂಖ್ಯೆಯಲ್ಲಿದ್ದು, ಬುದ್ಧಿವಂತರ ಜಿಲ್ಲೆ ಎನಿಸಿಕೊಂಡ ದ.ಕ.ದಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ನಿಟ್ಟಿನಲ್ಲಿ ಜಾಗೃತಿ ನಡೆಯಬೇಕಿದೆ ಎಂದು ಹೇಳಿದರು.
ಸೈನಿಕರು ತಮ್ಮನ್ನು ಗೌರವಿಸಿ ಎಂದು ಯಾವತ್ತೂ ಕೇಳುವುದಿಲ್ಲ. ಆದರೆ ಅವರನ್ನು ಅವಮಾನ ಮಾಡುವ ಮನಸ್ಥಿತಿಯನ್ನು ಯಾರೂ ಬೆಳೆಸಿಕೊಳ್ಳಬಾರದು. ಭಾರತೀಯತೆ ಮತ್ತು ದೇಶ ರಕ್ಷಕರಿಗಾಗಿ ಮಿಡಿಯುವ ಮನಸ್ಸು ನಮ್ಮದಾಗಬೇಕು ಎಂದು ಮೋಹನ್ ಆಳ್ವ ಅವರು ಈ ಸಂದರ್ಭ ಹೇಳಿದರು.
ಯೋಧರಿಗೆ ಗೌರವ ಸಮ್ಮಾನ :
ಸುಮಾರು 11ಕ್ಕೂ ಹೆಚ್ಚು ಮಂದಿ ಹಿರಿಯ ಯೋಧರನ್ನು ಈ ವೇಳೆ ಸಮ್ಮಾನಿಸಲಾಯಿತು. ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ಲೆ| ಕಮಾಂಡರ್ ಜಿ.ಪಿ. ಮಸ್ಕರೇನಸ್, ಬ್ರಿಗೇಡಿಯರ್ ಐ.ಎನ್. ರೈ ಅವರು ಸಮ್ಮಾನಿತರ ಪರವಾಗಿ ಮಾತನಾಡಿದರು.
ವಾಗ್ಮಿ ನಿಕೇತ್ರಾಜ್ ಅಭಿನಂದನ ಭಾಷಣ ಮಾಡಿದರು. ಅಧಿಕಾರ, ಹೆಸರಿಗಾಗಿ ನಾ ಮುಂದು ತಾ ಮುಂದು ಎಂದು ಹಲವರು ಬರುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಲು ನಾ ಮುಂದು ಎಂದು ಹೆಮ್ಮೆಯಿಂದ ಮುಂದೆ ಬರುವವರು ಈ ದೇಶದ ಸೈನಿಕರು ಮಾತ್ರ ಎಂದರು. ಸೈನಿಕರಿಗೆ ಇರುವುದೊಂದೇ ಧರ್ಮ; ಅದು ಭಾರತೀಯತೆ. ಅವರಿಗಿರುವ ಒಂದೇ ಕರ್ಮ ರಾಷ್ಟ್ರ ರಕ್ಷಣೆ. ಇಂತಹ ಸೈನಿಕರ ಆತ್ಮವಿಶ್ವಾಸ ಕುಗ್ಗಿಸದೇ ಇಡೀ ದೇಶ ಅವರೊಂದಿಗಿದೆ ಎಂದು ತೋರಿಸಿಕೊಡಬೇಕಾಗಿದೆ ಎಂದು ಹೇಳಿದರು.
ಯೋಧ ಹನುಮಂತಪ್ಪ ಕೊಪ್ಪದ್ ಅವರು ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರೆ, ಇತ್ತ ದೇಶದ ವಿಶ್ವವಿದ್ಯಾನಿಲಯವೊಂದರಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗುತ್ತಿತ್ತೆಂದರೆ ನಮ್ಮ ಶಿಕ್ಷಣ ಎಲ್ಲಿಗೆ ತಲುಪಿದೆ ಎಂಬುದನ್ನು ಯೋಚಿಸಬೇಕಾಗಿದೆ. ವಿದ್ಯಾರ್ಥಿಗಳಿಗೆ ದೇಶಪ್ರೇಮದ ಶಿಕ್ಷಣ ಅಗತ್ಯವಾಗಿ ಬೇಕು ಎಂದು ನಿಕೇತ್ರಾಜ್ ಆಶಯ ವ್ಯಕ್ತಪಡಿಸಿದರು.
ಶಾಸಕ ಮೊದಿನ್ ಬಾವಾ, ಸಂಘದ ಕಾರ್ಯದರ್ಶಿ ಮೇಘನಾಥ ಶೆಟ್ಟಿ, ಉಪಾಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಖಜಾಂಚಿ ಮನಮೋಹನ್ ಶೆಟ್ಟಿ, ಜತೆ ಕಾರ್ಯದರ್ಶಿ ಕಾವು ಹೇಮನಾಥ್ ಶೆಟ್ಟಿ, ಟ್ರಸ್ಟಿಗಳಾದ ಶೆಡ್ಡೆ ಮಂಜುನಾಥ ಭಂಡಾರಿ, ಕೆ.ಪಿ. ರೈ, ಬಾಲಕೃಷ್ಣ ಶೆಟ್ಟಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಡಾ| ಆಶಾಜ್ಯೋತಿ ರೈ, ತಾಲೂಕು ಸಮಿತಿ ಸಂಚಾಲಕ ಜಯರಾಮ ಸಾಂತ, ಸಹ ಸಂಚಾಲಕ ಉಮೇಶ್ ರೈ, ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ಕುಮಾರ್ ರೈ ಪ್ರಸ್ತಾವನೆಗೈದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ವಂದಿಸಿದರು. ಬಿ. ಶೇಖರ ಶೆಟ್ಟಿ, ಸುಕೇಶ್ ಚೌಟ, ಪುರುಷೋತ್ತಮ ಭಂಡಾರಿ ನಿರೂಪಿಸಿದರು.
Comments are closed.