ಕರಾವಳಿ

ದಿನ ನಿತ್ಯದ ಪಥ್ಯದಲ್ಲಿ ಡ್ರೈಫ್ರೂಟ್ಸ್ ಬಳಕೆ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

dry_fruits_1

ಮಂಗಳೂರು: ಹಣ್ಣುಗಳು ದೇಹಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಪೌಷ್ಠಿಕಾಂಶಗಳನ್ನು ಒದಗಿಸುತ್ತವೆ. ಅದರಲ್ಲೂ ಡ್ರೈಫ್ರೂಟ್ಸ್ (ಒಣಹಣ್ಣು) ಗಳೆಂದರೆ ಮತ್ತಷ್ಟು ಉತ್ತಮವಾದವುಗಳು ‘ಆಯನ್ ಆಯಪಲ್ ಎ ಡೇ ಕೀಪ್ಸ್ ಡಾಕ್ಟರ್ ಅವೇ’ ಎನ್ನುವುದು ಸಾಮಾನ್ಯ ಹೇಳಿಕೆ, ಆದರೆ, ‘ಆಯನ್ ಡ್ರೈಡ್ ಆಯಪಲ್ ಆಯಂಡ್ ಏಪ್ರಿಕೋಟ್ ಎ ಡೇ ಕೀಪ್ಸ್ ಕ್ಯಾನ್ಸರ್’ ಅವೇ ಎನ್ನುವುದೂ ಅಷ್ಟೇ ಸತ್ಯ.

ಡ್ರೈ ಫ್ರೂಟ್ಸ್ ಅದರಲ್ಲೂ ಬಾದಾಮಿ, ಆಕ್ರೋಟ್, ಪಿಸ್ತಾ, ಶೇಂಗಾ, ಗೇರು ಬೀಜಗಳು ದೇಹಕ್ಕೆ ಉತ್ತಮವಾಗಿವೆ. ನಾವು ದಿನ ನಿತ್ಯದ ಪಥ್ಯದಲ್ಲಿ ಹಸಿ ಹಣ್ಣು (ಫ್ರೂಟ್ಸ್)ಗಳನ್ನು ಬಳಸುವ ಕುರಿತು ಯೋಚಿಸುತ್ತೇವೆ. ಆದರೆ ಡ್ರೈಫ್ರೂಟ್ಸ್‍ಗಳ ಬಳಕೆಯ ಕುರಿತು ಚಿಂತಿಸಲು ಹೋಗುವುದಿಲ್ಲ. ಡ್ರೈ ಫ್ರೂಟ್ಸ್‍ಗಳೆಂದರೆ ಬಾದಾಮಿ ಆಕ್ರೋಟ್, ಪಿಸ್ತಾ ಗೇರು ಬೀಜಗಳೇ ಅಲ್ಲ, ಬದಲಾಗಿ ಆಯಪಲ್, ಏಪ್ರಿಕೋಟ್ ಮತ್ತು ಮಾವುಗಳನ್ನೂ ಒಣಗಿಸಿ ಉಪಯೋಗಿಸಲಾಗುತ್ತದೆ.

ಈ ಕುರಿತು ಅರಿತಿರುವವರು ಬಹಳಾ ವಿರಳ.
ಒಣಗಿಸಿದ ಆಯಪಲ್ ಮತ್ತು ಏಪ್ರಿಕೋಟ್‍ಗಳಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿರುತ್ತದೆ. ಮತ್ತು ಒಣ ಹಣ್ಣುಗಳಲ್ಲಿ ಯಥೇಚ್ಚವಾಗಿರುವ ನೈಸರ್ಗಿಕವಾದ ಫೈಟೋನ್ಯೂಟ್ರಿಯೆಂಟ್ಸ್‍ಗಳಾದ ಆಯಂಟಿ ಓಕ್ಸಿಡೆಂಟ್‍ಗಳನ್ನೂ ನಾರಿನಂಶಗಳನ್ನೂ ಹೊಂದಿದ್ದು ಅದು ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಮಾವಿನ ಹಣ್ಣುಗಳು ನಾಲಿಗೆಗೂ ರುಚಿಕರವಾಗಿದೆಯಲ್ಲವೇ? ಆದರೆ ಅದಕ್ಕಿಂತಲೂ ಹೆಚ್ಚಾಗಿ ಒಣ ಮಾವಿನ ಹಣ್ಣುಗಳು ತ್ವಚೆಯ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಒಣ ಮಾವಿನ ಹಣ್ಣುಗಳಲ್ಲಿರುವ ವಿಟಮಿನ್ ಎ, ಸಿ ಮತ್ತು ಇಗಳು ನಿಮ್ಮ ತ್ವಚೆಯನ್ನು ಮಿರಮಿರನೇ ಮಿಂಚಿಸಲು ಸಹಕರಿಸುತ್ತದೆ. ಮಾವಿನಲ್ಲಿರುವ ಒಮೇಗಾ 3 ಮತ್ತು 6 ಆಮ್ಲಗಳು ತ್ವಚೆಯ ಸೌಂದರ್ಯವನ್ನು ರಕ್ಷಿಸುವುದಲ್ಲದೇ ಯೌವ್ವನವನ್ನು ಕಾಪಾಡುತ್ತದೆ.

ಒಣ ಬಾದಾಮಿಗಳು ಮುಖದ ಮೊಡವೆಗಳನ್ನು ನಿಗ್ರಹಿಸುತ್ತದಲ್ಲದೇ ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಿದೆ. ನಿರ್ಜೀವದಂತಿರುವ ಕೂದಲಿಗೆ ಬಾದಾಮಿ ಎಣ್ಣೆ ಹೊಳಪು ನೀಡುತ್ತದೆ. ಕೊಲೆಸ್ಟ್ರಾಲ್‍ನ್ನು ನಿಯಂತ್ರಿಸುವುದಲ್ಲದೇ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವುದನ್ನೂ ತಡೆಯುತ್ತದೆ.

ವಾಲ್ನಟ್‍ಗಳು (ಆಕ್ರೋಟ್) ಎಣ್ಣೆಯ ರೂಪದಲ್ಲಿ ಬಳಸಿದರೆ ತ್ವಚೆಯಲ್ಲುಂಟಾಗುವ ಫೈನ್‍ಲೈನ್‍ಗಳನ್ನು ಮತ್ತು ನೆರಿಗೆಗಳನ್ನು ಇಲ್ಲವಾಗಿಸಿ ತ್ವಚೆಯನ್ನು ಕೋಮಲವಾಗಿಸುತ್ತದೆ. ವಾಲ್ನಟ್‍ಗಳು ನೋಡಲು ನಿಮ್ಮ ಮೆದುಳನ್ನು ಹೋಲುವುದಲ್ಲದೇ ಮೆದುಳಿನ ರಚನೆಯಲ್ಲಿ ವಾಲ್ನಟ್‍ಗಳಲ್ಲಿ ಕಂಡುಬರುವ ಶೇ. 67 ಒಮೇಗಾ-3 ಕೊಬ್ಬಿನ ಆಮ್ಲಗಳು ಕಂಡು ಬಂದಿವೆ. ಹಾಗಾಗಿ ವಾಲ್ನಟ್‍ಗಳು ನಮ್ಮ ಮೆದುಳಿನ ಆರೋಗ್ಯಕ್ಕೂ ಉತ್ತಮವೇ.

ಗೇರು ಬೀಜಗಳನ್ನು ನಾವು ಸಿಹಿ ಖದ್ಯಗಳಲ್ಲಿಯೋ ಅಥವಾ ಇನ್ನಿತರ ವಿಶೇಷ ಖಾದ್ಯಗಳಲ್ಲಿ ಮಾತ್ರವೇ ಬಳಸುತ್ತೇವಲ್ಲವೇ. ಆದರೆ, ಗೇರು ಬೀಜದ ಎಣ್ಣೆಯನ್ನು ಅದರ ಆಯಂಟಿ ಏಜೆಂಟ್ ಗುಣದಿಂದಾಗಿ ಹಲವಾರು ಸೌಂದರ್ಯ ವರ್ಧಕ ಕ್ರೀಮು ಗಳಲ್ಲಿಯೂ ಬಳಸ ಲಾಗುತ್ತದೆ.

ಒಣ ಚೆರ್ರಿಗಳು ಮತ್ತು ಅರ್ತಿ ಕಾಯಿಗಳು : ಇವುಗಳ ಸೇವನೆಯಿಂದ ಮಲಬದ್ಧತೆಯ ತೊಂದರೆಯನ್ನು ನಿವಾರಿಸಿಕೊಳ್ಳಬಹುದು ಮತ್ತು ಮಲಬದ್ಧತೆಯಿಂದಾಗಿ ಮುಖದಲ್ಲುಂಟಾಗುವ ಮೊಡವೆಗಳನ್ನೂ ನಿಗ್ರಹಿಸಬಹುದು. ಒಣ ದ್ರಾಕ್ಷಿಗಳು ಮುಖದ ಆರೋಗ್ಯವನ್ನು ಕಾಪಾಡುತ್ತದೆ. ಒಣದ್ರಾಕ್ಷಿಗಳು ಪೋಟಾಶಿಯಂ ಮತ್ತು ಮೆಗ್ನೀಶಿಯಂ, ರಂಜಕ ಮತ್ತು ಖನಿಜಾಂಶಗಳ ಉತ್ತಮ ಮೂಲವಾಗಿದ್ದು, ದೇಹದಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ವೈದ್ಯರು ರಕ್ತ ಹೀನತೆಯಿಂದ ನರಳುವ ರೋಗಿಗಳಿಗೆ ಹೆಚ್ಚಾಗಿ ಒಣದ್ರಾಕ್ಷಿ ಸೇವಿಸುವ ಸಲಹೆ ನೀಡುತ್ತಾರೆ.

ಇನ್ನು ನೀವು ತೂಕ ಇಳಿಸುತ್ತಿರುವಿರಾದರೆ ಡಯಟ್‍ಗಳಿಂದಾಗಿ ನೀವು ಕಳೆದುಕೊಳ್ಳುವ ಪೋ ಶಕಾಂಶಗಳನ್ನು ಒಣ ಹಣ್ಣುಗಳು ಸರಿದೂಗಿಸುತ್ತದೆ. ಒಂದು ಮುಷ್ಠಿಯಷ್ಟು ಒಣ ಹಣ್ಣುಗಳನ್ನು ಹಾಲು ಅಥವಾ ಮೊಸರಿನೊಂದಿಗೆ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅವಶ್ಯಕವಾಗಿರುವ ದಿನದ ಪೌಷ್ಠಿಕಾಂಶವನ್ನು ಪೂರೈಸಿಕೊಳ್ಳಬಹುದು ಮತ್ತು ಡಯಟ್‍ನಿಂದಾಗಿ ನೀವು ನಿತ್ರಾಣಗೊಳ್ಳುವುದನ್ನು ತಡೆಯಬಹುದು.

ಡ್ರೈಫ್ರೂಟ್ಸ್‍ಗಳಲ್ಲಿ ನಾರಿನಂಶ ಮತ್ತು ಖನಿಜಾಂಶಗಳು ಹೇರಳವಾಗಿರುತ್ತದೆಯಷ್ಟೇ. ಇದು ನಿಮ್ಮ ಹೃದಯಕ್ಕೆ ಬಡಿತವನ್ನು ಕೊಡುತ್ತದೆ ಎನ್ನುವುದು ವೈದ್ಯರ ಅಂಬೋಣ. ಒಣ ಹಣ್ಣುಗಳಲ್ಲಿರುವ ಒಮೇಗಾ-3 ಒಳ್ಳೆಯ ಕೊಬ್ಬುಗಳು. ಇವು ಹೃದಯಕ್ಕೆ ಚೈತನ್ಯ ನೀಡುತ್ತದೆ ಮತ್ತು ಡ್ರೈಫ್ರೂಟ್ಸ್‍ಗಳ ಹಿತ-ಮಿತದ ಸೇವನೆಯು ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ ಮತ್ತು ಹೃದಯಾಘಾತವನ್ನು ತಪ್ಪಿಸುತ್ತದೆ.

Comments are closed.