ಮಂಗಳೂರು, ಆ. 26: ಕದ್ರಿ ಕ್ರಿಕೆಟರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಗುರುವಾರ ರಾತ್ರಿ ಕದ್ರಿ ಮೈದಾನದಲ್ಲಿ ಅಯೋಜಿಸಲಾದ “ರಿದಮಿಕ್ ನೈಟ್” ಸಂಗೀತಾ ರಸಮಂಜರಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿದ್ದ ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ವೇದಿಕೆಗೆ ಆಗಮಿಸುತ್ತಿದ್ದಂತೆ ಕೆಲವರು ವೇದಿಕೆ ಮೇಲೆ ಮೊಟ್ಟೆ, ಟೊಮೆಟೊ ಮತ್ತು ಶೂ ಎಸೆದ ಘಟನೆ ನಡೆದಿದೆ.
ಪಾಕಿಸ್ತಾನದ ಜನರ ಪರ ಹೇಳಿಕೆ ನೀಡಿ ಈಗಾಗಲೇ ವಿವಾದಕ್ಕೀಡಾಗಿರುವ ರಮ್ಯಾ, ಬಳಿಕ ವಾಹಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಮಂಗಳೂರನ್ನು ನರಕ’ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಇತರ ಕೆಲ ಸಘಟನೆಯ ಕಾರ್ಯಕರ್ತರು ರಮ್ಯಾ ವೇದಿಕೆಯ ಮೇಲೆ ಬರುತ್ತಿದ್ದಂತೆ ಕಲ್ಲು, ಶೂ ಮತ್ತು ಟೊಮ್ಯಾಟೊಗಳನ್ನು ಎಸೆದು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು.
ಆದರೆ, ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಆಯೋಜಕರು ರಮ್ಯಾ ಅವರ ಕಾರ್ಯಕ್ರಮವನ್ನು ಅರ್ಧದಲ್ಲೇ ಮೊಟಕುಗೊಳಿಸಿ ರಮ್ಯಾರನ್ನು ಬೀಳ್ಕೊಟ್ಟರು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ನಗರದ ಪ್ರತಿಷ್ಠಿತ ಉದ್ಯಮಿಗಳು, ರಾಜಕೀಯ ಮುಖಂಡರು ಮೂಕ ಪ್ರೇಕ್ಷರಾಗಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚಿನ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಂಡರು. ರಮ್ಯಾ ನಿರ್ಗಮನದ ಬಳಿಕ ಕದ್ರಿ ಕ್ರಿಕೆಟರ್ಸ್ ವತಿಯಿಂದ ಅಯೋಜಿಸಲಾದ “ರಿದಮಿಕ್ ನೈಟ್” ಸಂಗೀತಾ ರಸಮಂಜರಿ ಕಾರ್ಯಕ್ರಮ ಸರಾಗವಾಗಿ ನಡೆಯಿತು.
ವಿಮಾನ ನಿಲ್ದಾಣದಲ್ಲಿ ಕಾರಿಗೆ ಮೊಟ್ಟೆ ಎಸೆತ:
ಇದಕ್ಕೂ ಮೊದಲು ರಮ್ಯಾ ಮಂಗಳೂರಿಗೆ ಬರುತ್ತಿದ್ದಂತೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ರಮ್ಯಾ ವಿರುದ್ಧ ಕಪ್ಪು ಬಾವೂಟ ಹಿಡಿದು ಪ್ರತಿಭಟನೆ ಮಾಡಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು,ರಮ್ಯಾರ ಕಾರಿಗೆ ಮೊಟ್ಟೆ ಎಸೆದು ಆಕ್ರೋಷ ವ್ಯಕ್ತಪಡಿಸಿದ್ದರು.
ರಮ್ಯಾ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು, ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
Comments are closed.