ಚಿಕ್ಕಬಳ್ಳಾಪುರ ಆ.05: ಬಂಕ್’ನಲ್ಲಿ ಬೈಕ್ ಗೆ ಪೆಟ್ರೋಲ್ ತುಂಬಿಸುವಾಗ ಉಂಟಾದ ಆಕಸ್ಮಿಕ ಬೆಂಕಿಯಿಂದ ಬೈಕ್ ಸಂಪೂರ್ಣ ಭಸ್ಮವಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಗೌರಿಬಿದನೂರು ಮಾರ್ಗದ ವಿಹಾನ್ ಪೆಟ್ರೋಲ್ ಬಂಕ್ ನಲ್ಲಿ ಸಂಭವಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ಮಂಚೇನಹಳ್ಳಿ ಗ್ರಾಮದ ಮೆಕಾನಿಕ್ ಆಗಿರುವ ಅಶೋಕ್ ತನ್ನ ಬೈಕ್ ಗೆ ಪೆಟ್ರೋಲ್ ತುಂಬಿಸಿ, ಬಂಕ್’ನಲ್ಲೇ ಸ್ಟಾಟ್ ಮಾಡಲು ಕಿಕ್ ಒಡೆಯುವಾಗ ಪೆಟ್ರೋಲ್ ಸೋರಿಕೆಯಾಗಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ.
ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದರಿಂದ ಅಲ್ಲಿದ್ದವರು ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ, ಹತೋಟಿಕೆಗೆ ಬರಲಿಲ್ಲ. ಕೂಡಲೇ ಎಚ್ಚೆತ್ತ ಜನ ಬೈಕ್ ಗೆ ಪೈಪ್ ಕಟ್ಟಿ ಬಂಕ್ ನಿಂದ ದೂರ ಎಳೆಯುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನೆಯಲ್ಲಿ ಬೈಕ್ ಸಂಪೂರ್ಣ ಭಸ್ಮವಾಗಿದ್ದು, ಸ್ಥಳಕ್ಕಾಗಮಿಸಿದ್ದ ಅಗ್ನಿಶಾಮಕ ದಳ ಬೆಂಕಿ ನಂದಿಸಿತು.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Comments are closed.