
ಮಂಗಳೂರು,ಜುಲೈ.12: ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಅತ್ಮಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ನೇರವಾಗಿ ಕಾರಣರಾಗಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ರಾಜ್ಯಾದಾದ್ಯಂತ ಹೋರಾಟಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಇಂದು ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಮೊದಲಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನ ಜಾಥಾದಲ್ಲಿ ತೆರಳಿದ ವಿಧ್ಯಾರ್ಥಿಗಳು ಬಳಿಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನ ಸಭೆಯನ್ನುದ್ದೇಶಿಸಿ ವಿಶ್ವ ವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ ಮಾತನಾಡಿ, ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಅತ್ಮಹತ್ಯೆಗೆ ರಾಜ್ಯ ಸರ್ಕಾರದ ಸಚಿವ ಜಾರ್ಜ್ ಮತ್ತು ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ನೇರವಾಗಿ ಕಾರಣರಾಗಿದ್ದಾರೆ ಎಂದು ಗಣಪತಿಯವರು ಸಾಯುವ ಮೊದಲು ಸುದ್ಧಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರೆ. ಈ ಹಿನ್ನೆಲೆಯಲ್ಲಿ ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಭಾವಿಪ ಮಂಗಳೂರು ನಗರ ಪ್ರಮುಖ್ ಕೀರ್ತನ್ ಮಾತನಾಡಿ, ಯಾವ ಸರ್ಕಾರ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕರ್ತವ್ಯವನ್ನು ನಿರ್ವಹಿಸಲು ಸಕಲ ಸವಲತ್ತುಗಳನ್ನು ನೀಡಬೇಕೋ ಅಂತಹ ಸರ್ಕಾರ ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳಿಗೆ ಒತ್ತಡ ಮತ್ತು ವರ್ಗಾವಣೆಗಳ ಮೂಲಕ ಅವರನ್ನು ಮಾನಸಿಕವಾಗಿ ಮತ್ತು ನೈತಿಕವಾಗಿ ಅವರನ್ನು ಹಿಂಸಿಸುತ್ತಿದ್ದಾರೆ. ಹತಾಶಕ್ಕೆ ಒಳಗಾದ ಕಿರಿಯ ಪೊಲೀಸ್ ಅಧಿಕಾರಿಗಳು ಅತ್ಮಹತ್ಯೆಯ ಮಾರ್ಗವನ್ನು ಹಿಡಿದಿದ್ದಾರೆ ಎಂದು ಆರೋಪಿಸಿದರು.
ಅಭಾವಿಪ ಮಂಗಳೂರು ನಗರ ಕಾರ್ಯದರ್ಶಿ ಹಿತೇಶ್ ಬೇಕಲ್ ಹಾಗೂ ಮಂಗಳೂರು ವಿಭಾಗ ಸಹಸಂಚಾಲಕ್ ಚೇತನ್ ಪಡೀಲ್ ಮಾತನಾಡಿ, ಸಿದ್ದರಾಮಯ್ಯನವರು ತಮ್ಮ ಬೆಂಬಲಿಗರನ್ನು ರಕ್ಷಿಸಲು ಮೈಸೂರು ಜಿಲ್ಲಾಧಿಕಾರಿಯಾದ ಶ್ರೀಮತಿ ಎಸ್.ಶಿಖಾ ಅವರಿಗೆ ಕೇಸು ದಾಖಲಿಸದಂತೆ ಒತ್ತಡ ಹಾಕಿದ್ದಾರೆ. ಮಾಜಿ ಸಚಿವ ಪರಮೇಶ್ವರ ನಾಯಕ್ ಅವರು ಶ್ರೀಮತಿ ಅನುಪಮಾ ಶೆಣೈ ವರ್ಗಾವಣೆ ಮಾಡಿ ತಮ್ಮ ದರ್ಪವನ್ನು ತೊರಿಸಿದ್ದರು. ಹೀಗೆ ಸರಕಾರದ ಹಲವಾರು ಸಚಿವರು ತಮ್ಮ ಅಧಿಕಾರದ ಅಮಲಿನಲ್ಲಿ ನಿಷ್ಠಾವಂತ ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಕಿರುಕುಳವನ್ನು ನೀಡುತ್ತಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಅತ್ಮಹತ್ಯೆ ಘಟನೆಗಳು ಪುನಃ ಪುನಃ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರ್ಕಾರ ಈ ರೀತಿಯ ಘಟನೆಗಳನ್ನು ತಡೆಯುವಲ್ಲಿ ಯಾವುದೇ ಕಠಿಣಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ ದೂರಿದರು.
ಈ ಹಿಂದೆ ಡಿಕೆ.ರವಿ ಅವರ ಅತ್ಮಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾರ್ಜ್ ಅವರ ಹೆಸರು ಕೇಳಿ ಬಂದಿತ್ತು.ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಜಾರ್ಜ್ ಅವರ ರಕ್ಷಣಗೆ ನಿಲ್ಲದೇ ತಕ್ಷಣ ಅವರಿಂದ ರಾಜಿನಾಮೇಯನ್ನು ಪಡೆದು ಕಾನೂನಿನ ಪ್ರಕಾರ ಕ್ರಮಜರುಗಿಸಬೇಕೆಂದು ಆಗ್ರಹಿಸಿದರು.
Comments are closed.