ಮಂಗಳೂರು : ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ನಾಯಕತ್ವ ಗುಣ ಹೊಂದಿರುವ ವ್ಯಕ್ತಿಗಳ ಅವಶ್ಯಕತೆ ಇದೆ. ಯಾವುದೇ ವ್ಯಕ್ತಿ ಉತ್ತಮ ನಾಯಕನಾಗಿ ಹೊರಹೊಮ್ಮಬೇಕಾದರೆ ಸಂವಹನ ಚಾತುರ್ಯ ಹೊಂದಿರುವುದು ಅಗತ್ಯ. ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕಾದರೆ ಸಂವಹನ ಕಲೆಯನ್ನು ಕರಗತ ಮಾಡಿಕೊಳ್ಳಬೇಕಾದುದು ಅತ್ಯಗತ್ಯ, ಎಂದು ನಿಟ್ಟೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪ್ರೊ. ಎಂ. ಎಸ್. ಮೂಡಿತ್ತಾಯ ಹೇಳಿದರು.
ನಗರದಲ್ಲಿ (ಭಾನುವಾರ ಜರುಗಿದ ವಿನ್ನರ್ಸ್ ಕ್ಲಬ್ ಟೋಸ್ಟ್ ಮಾಸ್ಟರ್ಸ್ನ 2016-17ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿರಿಯ ಶಿಕ್ಷಕರೂ, ಶಿಕ್ಷಣತಜ್ಞರೂ ಆಗಿರುವ ಪ್ರೊ. ಮೂಡಿತ್ತಾಯ ಅವರು ತಮ್ಮ ಹಲವಾರು ಮಂದಿ ಮಾಜಿ ವಿದ್ಯಾರ್ಥಿಗಳು ಕ್ಲಬ್ನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಕುರಿತು ಅಪಾರ ಸಂತೋಷ ವ್ಯಕ್ತಪಡಿಸಿದರು ಮತ್ತು ಹೊಸ ತಂಡಕ್ಕೆ ಶುಭ ಹಾರೈಸಿದರು.
ಜೀವನದಲ್ಲಿ ಯಾವುದೇ ರೀತಿಯ ಇತ್ಯಾತ್ಮಕ ಬದಲಾಣೆ ಸಾಧ್ಯವಾಗಬೇಕಾದರೆ ನಿರಂತರ ಕಲಿಕೆ ಮತ್ತು ಪ್ರಯೋಗಶೀಲತೆ ಅವಶ್ಯಕ. ಅದೇ ರೀತಿ ಮುನ್ನುಗ್ಗುವ ಧೈರ್ಯ ಬೆಳೆಸಿಕೊಳ್ಳಬೇಕಾದುದು ಕೂಡ ಗೆಲುವಿನ ಶೀಖರ ತಲುಪಬೇಕಾದರೆ ಅಗತ್ಯ. ಸಂವಹನದ ವಿಚಾರದಲ್ಲಿ ಹೇಳುವುದಾದರೆ, ವೇದಿಕೆಯನ್ನು ಏರದೆ, ವಿಚಾರ ಅಭಿವ್ಯಕ್ತಿಗೊಳಿಸಲು ಪ್ರಯತ್ನವನ್ನು ಮಾಡದೇ ಈ ಕಲೆ ಒಲಿಯಲು ಸಾಧ್ಯವೇ ಇಲ್ಲ. ಸಾರ್ವಜನಿಕ ಸಂವಹನದಲ್ಲಿ ಮಾತನಾಡುವ ವಿಧಾನ ಮತ್ತು ವಿಷಯವಸ್ತು ಎರಡೂ ಮುಖ್ಯ. ಆದರೆ, ಇದೆರಡರ ನಡುವೆ ವಿಷಯವಸ್ತು ತುಂಬ ಮಹತ್ವದ್ದು. ಎರಡೂ ವಿಚಾರಗಳು ಇದ್ದರಂತೂ ಬಹಳ ಒಳ್ಳೆಯದು, ಎಂದು ಅವರು ವಿವರಿಸಿದರು.
ಟೋಸ್ಟ್ ಮಾಸ್ಟರ್ಸ್ ಕ್ಲಬ್ ಪ್ರಾದೇಶಿಕ ನಿರ್ದೇಶಕಿ ಶಿವಾನಿ ಬಾಳಿಗಾ ನೂತನ ಪದಾಧಿಕಾರಿಗಳ ಪ್ರತಿಜ್ಞಾ ವಿಧಿ ನಡೆಸಿಕೊಟ್ಟರು. ನೂತನ ಅಧ್ಯಕ್ಷ ಭಾಸ್ಕರ ಕಿರಣ್ ಮತ್ತವರ ತಂಡ ಅಧಿಕಾರ ವಹಿಸಿಕೊಂಡಿತು.
ನೂತನ ತಂಡದ ಸದಸ್ಯರ ಹೆಸರು – ಶ್ರೀಸ್ತುತಿ ಎಂ. ಶೆಟ್ಟಿ (ಉಪಾಧ್ಯಕ್ಷೆ-ಶಿಕ್ಷಣ), ಲತಾಮಣಿ ಹರೀಶ್ (ಉಪಾಧ್ಯಕ್ಷ-ಸದಸ್ಯತ್ವ), ಫ್ಲೆಕ್ಸಾನ್ ಜೆ. ಫೆರ್ನಾಂಡಿಸ್ (ಉಪಾಧ್ಯಕ್ಷ-ಸಾರ್ವಜನಿಕ ಸಂಪರ್ಕ), ವಾಣಿ ಉಮ್ಮಕ್ಕ (ಕಾರ್ಯದರ್ಶಿ), ಸವಿತಾ ಸಾಲಿಯಾನ್ (ಖಜಾಂಚಿ), ಶಹಾಬ್ ಅರಬಿ (ಸಾರ್ಜೆಂಟ್ ಎಟ್ ಆರ್ಮ್ಸ್), ಶಿವಾನಿ ಬಾಳಿಗ (ನಿಕಟಪೂರ್ವ ಅಧ್ಯಕ್ಷೆ).
ಕ್ಯಾಪ್ಟನ್ ರಾಮ್ಪ್ರಸಾದ್ ಕೊಡಿಯಾಲ್ಬೈಲ್ ಸ್ವಾಗತಿಸಿದರು. ನಿಕಟಪೂರ್ವ ಕಾರ್ಯದರ್ಶಿ ಡೆಬೊರಾ ಲೋಬೊ ವಾರ್ಷಿಕ ವರದಿ ವಾಚಿಸಿದರು. ಶ್ರೀಸ್ತುತಿ ಎಂ. ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ನಿಕಟಪೂರ್ವ ಅಧ್ಯಕ್ಷೆ ಶಿವಾನಿ ಬಾಳಿಗಾ ತಮ್ಮ ಅಧಿಕಾರಾವಧಿಯಲ್ಲಿ ಕ್ಲಬ್ಗೆ 22 ವಿವಿಧ ಸಾಧನೆಗಳನ್ನು ಮಾಡುವಲ್ಲಿ ಮತ್ತು ಗಣನೀಯ ಸಂಶಕ್ಯೆಯ ಸದಸ್ಯತ್ವ ಸಾಧ್ಯವಾಗುವಲ್ಲಿ ಸಹಕರಿಸಿದ ಎಲ್ಲ ಸಹೋದ್ಯೋಗಿಗಳು ಮತ್ತು ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಭಾಸ್ಕರ್ ಕಿರಣ್ ಅವರು ಮುಂದಿನ ದಿನಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಕ್ಲಬ್ ಪ್ರತಿಯೊಂದು ಸಭೆಯನ್ನು ಕೂಡ ಅರ್ಥಪೂರ್ಣವಾಗಿ ನಡಸಬೇಕು ಎಂದರು. ಸದಸ್ಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಬೇಕು ಮತ್ತು ಗೆಲುವು ಸಾಧಿಸಬೇಕು ಎಂದವರು ಎಲ್ಲ ಸದಸ್ಯರಿಗೆ ಕರೆ ನೀಡಿದರು.
ವಿಭಾಗೀಯ ರಾಜ್ಯಪಾಲರಾದ ಪೂರ್ವಿ ವರ್ಮಾ, ನಿಕಟಪೂರ್ವ ಪ್ರಾದೇಶಿಕ ನಿರ್ದೇಶಕಿ ಸವಿತಾ ಸಾಲಿಯಾನ್, ಸಹಾಯಕ ಆಡಳಿತಾಧಿಕಾರಿ ಮಾಳಿನಿ ಹೆಬ್ಬಾರ್ ಹಾಜರಿದ್ದರು. ವಿದ್ಯಾ ಶೆಣೈ ಅವರು ಕ್ಲಬ್ನ ಹೊಸ ನುಡಿಗೀತೆಯನ್ನು ಪರಿಚಯಿಸಿದರು. ನವರಸ ನೃತ್ಯ ತಂಡದಿಂದ ಸಾಮೂಹಿಕ ನೃತ್ಯ ಕಾರ್ಯಕ್ರಮ ನಡೆಯಿತು. ಫೆಮಿನಾ ಮಿಸ್ ಇಂಡಿಯಾ ಸೂಪರ್ನ್ಯಾಶನಲ್ 2015 ಆಫ್ರೀನ್ ವಾಝ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಿತು.
ಕ್ಲಬ್ನ ಮಾಜಿ ಅಧ್ಯಕ್ಷೆ ಡಾ. ಪ್ರಭಾ ಶೆಟ್ಟಿ ಮತ್ತು ಇತರ ಟೋಸ್ಟ್ ಮಾಸ್ಟರ್ ಕ್ಲಬ್ಗಳ ಪ್ರತಿನಿಧಿಗಳು ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿದರು.
ವಾಣಿ ಉಮ್ಮಕ್ಕ ವಂದಿಸಿದರು. ಶ್ವೇತಾ ಡಿಸೋಜ, ಫ್ಲೆಕ್ಸಾನ್ ಜೆ. ಫೆsರ್ನಾಂಡಿಸ್ ಕಾರ್ಯಕ್ರಮ ನಿರ್ವಹಿಸಿದರು. ವಿನ್ನರ್ಸ್ ಕ್ಲಬ್ ಟೋಸ್ಟ್ ಮಾಸ್ಟರ್ಸ್ ಸದಸ್ಯರು ಪ್ರತೀ ಎರಡು ಶನಿವಾರಗಳಿಗೂವ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ಬೆಳಿಗ್ಗೆ 7.30 ಕ್ಕೆ ಸಭೆ ಸೇರುತ್ತಾರೆ.
Comments are closed.