
ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಪಿವಿಎಸ್ ಕಲಾಕುಂಜದಲ್ಲಿರುವ ನಿವಾಸಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಚಂದ್ರಶೇಖರ್ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಬಾಳಿಗಾ ಕುಟುಂಬಸ್ಥರ ಮಾತುಕತೆ ನಡೆಸಿದರು.ಈ ಭೇಟಿಯ ವೇಳೆ ಬಾಳಿಗಾ ಕೊಲೆ ಪ್ರಕರಣದಲ್ಲಿ ಪ್ರಸ್ತುತ ತನಿಖಾ ಹಂತ ಹಾಗೂ ತನಿಖೆಗೆ ಪೂರಕವಾಗಿ ಇನ್ನಿತರ ಮಾಹಿತಿಗಳನ್ನು ಬಾಳಿಗಾ ಕುಟುಂಬದ ಜೊತೆ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದ ಅಯುಕ್ತರು, ತನಿಖೆ ಕುರಿತು ಕೆಲವೊಂದು ಮಾಹಿತಿಗಳ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು. ಮಾತ್ರವಲ್ಲದೇ ಈ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿದ್ದ
ಎಸಿಪಿ ತಿಲಕ್ಚಂದ್ರ ಹಾಗೂ ಇತರ ಕೆಲವು ಇನ್ಸ್ಪೆಕ್ಟರ್ ಗಳ ವರ್ಗಾವಣೆಯಿಂದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿವರ್ಷವೂ ರೂಟೀನ್ ಮೇಲೆ ವರ್ಗಾವಣೆ ಆಗುತ್ತಿರುತ್ತದೆ, ಇದರಿಂದ ತನಿಖೆಯ ಹಾದಿ ತಪ್ಪುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.


ಮಾಚ್ 21ರಂದು ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಅವರ ನಿವಾಸದಿಂದ ಕೆಲವೇ ಅಂತರದಲ್ಲಿ ಕೊಲೆಗೈಯಲಾಗಿತ್ತು.ಈ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಆಯುಕ್ತ ಚಂದ್ರಶೇಖರ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈ ಹತ್ಯಾ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದ್ದು ಮಂಜು ಅಲಿಯಾಸ್ ಮಂಜು ನಿರೇಶ್ವಾಲ್ಯ ರನ್ನು ಹೊರತು ಪಡಿಸಿ ಉಳಿದ ಎಲ್ಲಾ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿದ ಬಳಿಕ ವಿನಾಯಕ ಬಾಳಿಗಾರ ತಂದೆ ರಾಮಚಂದ್ರ ಬಾಳಿಗಾ ಕುಟುಂಬಸ್ಥರು ಆಯುಕ್ತರನ್ನು ಭೇಟಿ ಮಾಡಿ ಕೃತಜ್ಞತೆ ವ್ಯಕ್ತಪಡಿಸಿದ್ದರು. ಬಾಳಿಗಾ ನಿವಾಸಕ್ಕೆ ಅಯುಕ್ತರು ಭೇಟಿ ನೀಡಿದ ಸಂದರ್ಭ ಬರ್ಕೆ ಠಾಣಾ ಇನ್ಸ್ಪೆಕ್ಟರ್ ರಾಜೇಶ್ ಹಾಗೂ ವಿಚಾರವಾದಿ ನರೇಂದ್ರ ನಾಯಕ್ ಜೊತೆಗಿದ್ದರು.
Comments are closed.