ಕುಂದಾಪುರ: ನಾಲ್ಕು ಬಾರೀ ಶಾಸಕರಾಗಿದ್ದು ಮಾತ್ರವಲ್ಲದೇ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕ ಕಾರ್ಯವನ್ನು ಮಾಡಿದ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಅಸಮಧಾನ ಬುಗಿಲೆದ್ದಿದೆ. ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಶಾಸಕರ ಅಭಿಮಾನಿಗಳು ಕಾಂಗ್ರೆಸ್ ಕಛೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸರಕಾರಕ್ಕೆ ಬಿಸಿಮುಟ್ಟಿಸುವ ಯತ್ನ ನಡೆಸಿದರು.
ಸೋಮವಾರ ಬೆಳಿಗ್ಗೆ ಪಕ್ಷದ ಕಛೇರಿಯೆದುರು ಜಮಾಯಿಸಿದ ಪ್ರತಿಭಟನಾಕಾರರು ಬ್ಲಾಕ್ ಕಾಂಗ್ರೆಸ್ ಕಛೇರಿಯ ನಾಮಫಲಕವನು ಕಿತ್ತೆಸೆದರು. ಅಲ್ಲದೇ ಟೈಯರ್ ಹಾಗೂ ನಾಮಫಲಕಕ್ಕೆ ಬೆಂಕಿ ಹಚ್ಚುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಶಾಸಕರಾದ ತರುವಾಯ ಬೈಂದೂರು ಭಾಗದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದು, ಹಲವಾರು ಯೋಜನೆಗಳನ್ನು ಅನುಷ್ಟನಕ್ಕೆ ತಂದಿದ್ದು ಮಾತ್ರವಲ್ಲದೇ ಜನಪರ ಕೆಲಸ ಕಾರ್ಯಗಳ ಮೂಲಕ ಜನಾನುರಾಗಿಯಾಗಿ ಗುರುತಿಸಿಕೊಂದವರು. ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಸಚಿವ ಸ್ಥಾನಕ್ಕೆ ಅರ್ಹತೆ ಹೊಂದಿದ್ದ ಪೂಜಾರಿಯವರಿಗೆ ಸಚಿವ ಸ್ಥಾನ ನೀಡದಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಮಣಿಕಂಠ, ತಿಮ್ಮಪ್ಪ , ಗುರುರಾಜ್, ರಿಯಾಜ್ ಅಹ್ಮದ್, ಈಶ್ವರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
Comments are closed.