ಉಡುಪಿ: ಯಾವುಡೇ ಧರ್ಮವಿರಲಿ, ಜಾತಿ-ಸಂಪ್ರದಾಯವಿರಲಿ ಅವರವರ ಮನೆಗಳಲ್ಲಿ ದೇವರಿಗೆ ಪೂಜೆ ಮಾಮೂಲಿ. ಆದ್ರೆ ಈ ಮನೇಲಿ ದೇವ್ರಿಗೆ ಮಾತ್ರ ಅಲ್ಲ ಇಹಲೋಕ ತ್ಯಜಿಸಿದ ಹಿರಿಯರಿಗೆ ಪೂಜೆ ನಡೆಯುತ್ತದೆ. ಈ ಪೂಜೆ ಕಳೆದ 7 ವರ್ಷಗಳಿಂದ ನಡೆಯುತ್ತಾ ಬಂದಿದೆ. ತನ್ನ ತಂದೆಯನ್ನು ನೆನೆಸಿಕೊಂಡು ತನ್ನ ಮಗ ಈ ಪೂಜೆ ಮಾಡುತ್ತಿದ್ದಾರೆ. ತಂದೆಯ ಮೂರ್ತಿ ರಚನೆ ಮಾಡಿ ದೇವರ ಸ್ಥಾನ ಮಾನ ನೀಡಿದ್ದಾರೆ. ಇದು ಇಂದಿನ (ಭಾನುವಾರದ) ಫಾದರ್ಸ್ ಡೇ ಸ್ಪೆಷಲ್..
ವಯಸ್ಸಾದ ತಂದೆ ತಾಯಿಯರನ್ನು ಜೀವಿತದಲ್ಲೇ ಅನಾಥಾಶ್ರಮಕ್ಕೆ ದೂಡುವ ಅಥವಾ ಅನಾಥರನ್ನಾಗಿ ಮಾಡುವ ಅನೇಕ ನಿದರ್ಶನಗಳನ್ನು ನೋಡುತ್ತೇವೆ. ಅಂತದರಲ್ಲಿ ಇಹಲೋಕ ತ್ಯಜಿಸಿದ ತಂದೆ-ತಾಯಿಯರನ್ನು ನೆನಪಿಸುವುದುಂಟೇ?.. ಆದರೆ ಇಲ್ಲಿ ಮಾತ್ರ ಹಾಗಿಲ್ಲ. ಈ ಮನೆಯ ಹಿರಿಯ ತಲೆಯ ಮೂರ್ತಿ ರಚನೆ ಮಾಡಿ ದಿನ ನಿತ್ಯ ಆರತಿ ಪೂಜೆ ನಡೆಯುತ್ತದೆ. ತಂದೆಯನ್ನ ದೇವರ ಸಮಾನ ರೀತಿಯಲ್ಲಿ ನೋಡಲಾಗುತ್ತಿದೆ. ಉಡುಪಿಯ ಉದ್ಯಾವರದಲ್ಲಿರುವ ಶೇಖರ್ ಅವರ ಮನೆಯಲ್ಲಿ ಇಂತಹ ಸಂಪ್ರದಾಯ ಕಳೆದ 7 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಮೂಲಕ ಇಹಲೋಕ ತ್ಯಜಿಸಿದ ತನ್ನ ತಂದೆಯನ್ನ ನೆನಪಿಸಿ ಇಂದು ಶೇಖರ್ ಸುವರ್ಣ ನಿತ್ಯ ಪೂಜೆಯನ್ನು ಮಾಡುತ್ತಿದ್ದು ವರ್ಷದ ಒಂದು ದಿನ ತಂದೆಯ ಪುಣ್ಯತಿಥಿ ಕಾರ್ಯ ನಡೆಸಿ ಊರವರಿಗೆ ಊಟ ಹಾಕುತ್ತಿದ್ದಾರೆ.
32 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿದ್ದ ಶೇಖರ್ ಸುವರ್ಣ ಅವರ ತಂದೆ ಸೂರಪ್ಪ ಪಂಡಿತ್ ಸುವರ್ಣರ ಪುಣ್ಯತಿಥಿ ಸಂದರ್ಭ ಇಂದಿನ ದಿನ. ಸೂರಪ್ಪ ಪಂಡಿತ್ ಸುವರ್ಣ ಅವರ 25ನೇ ಪುಣ್ಯ ತಿಥಿಯ ಸಂದರ್ಬದಲ್ಲಿ(ಏಳು ವರ್ಷದ ಹಿಂದೆ) ಶೇಖರ್ ಸುವರ್ಣ ಅವರು ತನ್ನ ತಂದೆಯ ಮೂರ್ತಿಯನ್ನು ರಚನೆ ಮಾಡಬೇಕು. ಅದಕ್ಕೆ ಪೂಜೆ ಸಲ್ಲಿಸಬೇಕು ಎನ್ನುವ ಅಭಿಲಾಶೆಯಿಂದ ತನ್ನ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಶಿಲಾ ಕಲ್ಲಿನ ಮೂರ್ತಿಯನ್ನ ಮನೆಯ ಮುಂದೆಯೇ ಪ್ರತಿಷ್ಟಾಪಿಸುತ್ತಾರೆ. ಮಾತ್ರವಲ್ಲದೇ ದಿನ ನಿತ್ಯ ಮೂರ್ತಿಗೆ ಪೂಜೆ ಸಲ್ಲಿಸುತ್ತಿದ್ದಾರೆ.
ಇಹ ಲೋಕ ತ್ಯಜಿಸಿದ ಸೂರಪ್ಪ ಪಂಡಿತ್ ಸುವರ್ಣ ನಾಟಿ ವೈದ್ಯರಾಗಿದ್ದರು. ನಾಟಿ ವೈದರಾಗಿ ಹಲಾವರು ರೋಗಿಗಳಿಗೆ ಗುಣಮುಖರನ್ನಾಗಿ ಮಾಡಿದ್ದಲ್ಲದೇ , ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ದರ್ಶನ ಪಾತ್ರಿಯಾಗಿ ಕಾರ್ಯ ನಿರ್ವಹಿಸಿ ಸಮಾಜದಲ್ಲಿ ಉನ್ನತ ಸ್ಥಾನ ಮಾನವನ್ನು ಗಳಿಸಿದ್ದರು. ತಮ್ಮ ಸಮಾಜಮುಖಿ ಕಾರ್ಯದಿಂದಲೇ ಇಂದು ನಾವು ಈ ಸ್ಥಿತಿಗೆ ಬರಲು ಕಾರಣವಾಯಿತು ಎಂದುಕೊಂಡು ಇಂದು ಶೇಖರ್ ಸುವರ್ಣ ಅವರು ತಂದೆಯ ಮೂರ್ತಿ ರಚಿಸಿ ಪೂಜೆ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ ಇಂದಿನ ಆಧುನಿಕ ಯುಗದಲ್ಲಿ ಹಿರಿಯರನ್ನು ಸ್ಮರಿಸುವ ಕಾಯಕವೇ ಮರೆಯಾಗುತ್ತಿದ್ದು ಇಂತಹ ಸಂದರ್ಬದಲ್ಲಿ ಮೂರ್ತಿ ರಚನೆ ಮಾಡಿ ದೇವರ ಸ್ಥಾನ-ಮಾನ ನೀಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವೇ ಸರಿ.
Comments are closed.