ಮಂಗಳೂರು,ಜೂ.13: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರು ಬಯೋಮೆಟ್ರಿಕ್ ಗುರುತಿನ ಚೀಟಿಯನ್ನು ಹೊಂದುವುದು ಕಡ್ಡಾಯವಾಗಿದ್ದು, ಕರಾವಳಿ ಕರ್ನಾಟಕದಲ್ಲಿ ಜೂ. 20ರಿಂದ 30ರವರೆಗೆ ಅಲ್ಲಲ್ಲಿ ಶಿಬಿರಗಳನ್ನು ಮಾಡಿ ಗುರುತಿನ ಚೀಟಿ ವಿತರಿಸಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ. ದ.ಕ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಮೀನುಗಾರಿಕೆ ಹಾಗೂ ಕ್ರೀಡಾ ಸಚಿವರಾದ ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಮೀನುಗಾರರ ಸಮಸ್ಯೆಗಳ ಕುರಿತಂತೆ ನಡೆದ ಸಭೆಯಲ್ಲಿ ಕರ್ನಾಟಕ ಮೀನುಗಾರಿಕಾ ಇಲಾಖೆಯ ನಿರ್ದೇಶಕರಾದ ಎಚ್.ಎಸ್. ವೀರಪ್ಪ ಗೌಡ ಈ ವಿಷಯ ತಿಳಿಸಿದರು.
ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ಸುರಕ್ಷತೆಯ ಬಗ್ಗೆ ಕರಾವಳಿ ಪಡೆ ಗಂಭೀರವಾಗಿದ್ದು, ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಇದನ್ನು ವಿತರಿಸುವ ಕಾರ್ಯ ನಡೆಯುತ್ತಿದೆ.
ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಎಲ್ಲಾ ಮೀನುಗಾರರು ಬಯೋಮೆಟ್ರಿಕ್ ಕಾರ್ಡ್ ಹೊಂದಿರುವುದನ್ನು ಸಂಬಂಧಪಟ್ಟ ದೋಣಿಗಳ ಮಾಲಕರು ಖಾತರಿಪಡಿಸಿಕೊಳ್ಳಬೇಕು. ಮೀನುಗಾರರ ವೇಷದಲ್ಲಿ ಸಮುದ್ರದ ಮೂಲಕ ಭಯೋತ್ಪಾದಕರು ದೇಶದಲ್ಲಿ ಆತಂಕ ಸೃಷ್ಟಿಸುವ ಅಪಾಯವಿರುವ ಹಿನ್ನೆಲೆಯಲ್ಲಿ ಮೀನುಗಾರರು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕಾ ಇಲಾಖೆಯು ಜೂ.20ರಿಂದ 10 ದಿನಗಳ ಕಾಲ ಕರಾವಳಿ ಕರ್ನಾಟಕದಾದ್ಯಂತ ಬಂದರು, ಬೀಚ್ ಪ್ರದೇಶಗಳಲ್ಲಿ ಈ ಶಿಬಿರವನ್ನು ಹಮ್ಮಿಕೊಂಡು ಬಯೋ ಮೆಟ್ರಿಕ್ ಕಾರ್ಡ್ ವಿತರಿಸಲಿದೆ ಎಂದು ಅವರು ಹೇಳಿದರು.
Comments are closed.