ಸಮಾಜದ ಸ್ವಾಸ್ತ್ಯ ಕೆಡಿಸುವ ಸುದ್ಧಿಗಳು ಬೇಡ : ಪತ್ರಕರ್ತರಿಗೆ ಹೊರನಾಡು ಶ್ರೀ ಕ್ಷೇತ್ರದ ಧರ್ಮಕರ್ತ ಶ್ರೀ ಜಿ.ಭೀಮೇಶ್ವರ ಜೋಷಿ ಕರೆ
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ – ಚಿಕ್ಕಮಂಗಳೂರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ 100ಕ್ಕೂ ಹೆಚ್ಚು ಚಿತ್ರಗಳನ್ನು ಇಲ್ಲಿ ವೀಕ್ಷಿಸಿ..
ಮಂಗಳೂರು / ಚಿಕ್ಕಮಂಗಳೂರು : ಕರ್ನಾಟಕ ಪತ್ರಕರ್ತರ ಸಂಘ ( ರಿ) ( Karnataka Journalists Union) ದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಮತ್ತು ವಿಶೇಷ ಸರ್ವ ಸದಸ್ಯರ ಸಭೆ ಜೂನ್ 4 ಮತ್ತು 5ರಂದು ಚಿಕ್ಕಮಂಗಳೂರು ಜಿಲ್ಲೆಯ ಶ್ರೀಕ್ಷೇತ್ರ ಹೊರನಾಡು ಇಲ್ಲಿನ ಮಾಂಗಲ್ಯ ಮಂಟಪದಲ್ಲಿ ಜರಗಿತು.
ಶ್ರೀಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಶ್ರೀ ಜಿ.ಭೀಮೇಶ್ವರ ಜೋಷಿಯವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಸಮಾಜ ಸುಧಾರಣೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದ್ದು, ಸಮಾಜದ ಸ್ವಾಸ್ತ್ಯ ಕೆಡಿಸುವ ಸುದ್ಧಿಗಳಿಗೆ ಹೆಚ್ಚು ಒತ್ತು ನೀಡದೇ, ಸಮಾಜಮುಖಿ ಕೆಲಸ ಮಾಡುವವರ ಬಗ್ಗೆ ಹಾಗೂ ಸಮಾಜಕ್ಕೆ ಕೊಡುಗೆ ನೀಡುವವರ ಬಗ್ಗೆ ಸುದ್ಧಿ ನೀಡುವ ಮೂಲಕ ಪತ್ರಕರ್ತರು ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಮಾಧ್ಯಮವನ್ನು ದುರುಪಯೋಗ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸ್ವಾಭಿಮಾನಿ ಪತ್ರಕರ್ತರು ಕೈಕಟ್ಟಿ ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕಾಲಘಟ್ಟದಲ್ಲಿ ಪತ್ರಕರ್ತರು ಪರಿಪೂರ್ಣವಾಗಿ, ಅಳವಾಗಿ ಅಧ್ಯಯನ ಮಾಡಿ ಆಳವಾದ ವಿಮರ್ಶೆಯೊಂದಿಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವ ಮೂಲಕ ಮಾಧ್ಯಮಕ್ಕೆ ಬಂದಿರುವ ಕಳಂಕ ದೂರ ಮಾಡಲು ಸಾಧ್ಯ ಎಂದು ಭೀಮೇಶ್ವರ ಜೋಷಿಯವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಮುರುಗೇಶ್ ಬಿ.ಶಿವಪೂಜಿ ಅವರು ಮಾತನಾಡಿ, ಸಂಘದ ಸದಸ್ಯರು ಹಲವಾರು ಚಟುವಟಿಕೆಗಳ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ಸಂಘ ವಿಸ್ತಾರವಾಗಿ ಬೆಳೆದು ಅಭಿವೃದ್ಧಿ ಕಾಣುತ್ತಿದೆ. ಹೆಚ್ಚಿನ ಜಿಲ್ಲೆಗಳಲ್ಲಿ ಸಂಘದ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ನಡೆಯುತ್ತಿರುವುದರಿಂದ ಸಂಘ ಕೆಲವೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಸಂಘದ ರಾಜ್ಯ ಸಮಿತಿಯ ಕಾರ್ಯಕಾರಿ ಸದಸ್ಯರು ಆಗಿರುವ ದ.ಕ.ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ಅವರ ನೇತ್ರತ್ವದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಜನಪರ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದಿದೆ ಎಂದು ಸಭೆಯಲ್ಲಿ ಹೇಳಿದ ಶಿವಪೂಜಿಯವರು ದ.ಕ.ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಸಂಘ ಉತ್ತಮ ಪ್ರಗತಿ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಪಾಂಚಾಲ್, ಕಳಸ ಜಿಲ್ಲಾ ಪಂಚಾಯತ್ ಸದಸ್ಯ ಪ್ರಭಾಕರ್, ಚಿಕ್ಕಮಂಗಳೂರು ಜಿಲ್ಲೆಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಮಂಜುನಾಥ್, ಕರ್ನಾಟಕ ಪತ್ರಕರ್ತರ ಸಂಘದ ದ.ಕ.ಜಿಲ್ಲಾ ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಹೊರನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸನ್ಮತಿ ವೃಷಭರಾಜ್, ತಾಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಮೀನಾಕ್ಷಿ ಮೋಹನ್, ರಾಜ್ಯ ಸಮಿತಿ ಸದಸ್ಯರಾದ ಬಿ.ತಿಪ್ಪೇರುದ್ರಪ್ಪ, ಬಿ.ಕೃಷ್ಣಪ್ಪನಾಯಕ್ ಮುಂತಾದವರು ಅತಿಥಿಗಳಾಗಿದ್ದರು.
ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ರೂವಾರಿ ಜಿ.ಎಂರಾಜಶೇಖರ್ ಸ್ವಾಗತಿಸಿ, ಪ್ರಸ್ತಾವನೆಗೈದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ದ.ಕ.ಜಿಲ್ಲಾ ಕಮಿಟಿಯ ಸದಸ್ಯರಾದ ವೆಂಕಟೇಶ್ ಬೆಂಡೆ ,ಇಜಾಝ್ ಮೇರಮಜಲ್, ಬಂಟ್ವಾಳ ತಾಲ್ಲೂಕು ಕಮಿಟಿಯ ಸದಸ್ಯರಾದ ಲತೀಪ್ ನೇರಳಕಟೆ,ಮೋಹನ್ ಶಿಯಾನ್,ಜಯಾನಂದ ಪೆರಾಜೆ, ಮಂಗಳೂರು ಸಮಿತಿ ಸದಸ್ಯೆ ಕರೀಶ್ಮಾ ಎಸ್. ಶೆಟ್ಟಿ, ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಪದಾಧಿಕಾರಿಗಳು ಹಾಗೂ ಕರ್ನಾಟಕದ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಜಿಲ್ಲೆ : ಪ್ರೇಕ್ಷಣೀಯ ಸ್ಥಳಗಳ ಸ್ವರ್ಗ
ಚಿಕ್ಕಮಂಗಳೂರು ಜಿಲ್ಲೆ ಗುಡ್ಡ – ಬೆಟ್ಟಗಳೇ ತುಂಬಿರುವ ಸುಂದರವಾದ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಜಿಲ್ಲೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಡೀ ಜಿಲ್ಲೆ ಸುಂದರ ಪರಿಸರವನ್ನು ಹೊಂದಿದ್ದು, ವಿಸ್ಮಯಗೊಳಿಸುವ ಬೆಟ್ಟ,ಗುಡ್ಡಗಳು, ಬಂಡೆಕಲ್ಲುಗಳ ಮಧ್ಯೆ ನೀರು ಹರಿದಾಡುವ ನದಿ, ಸುತ್ತಮುತ್ತಲು ಹಸಿರು ತುಂಬಿದ್ದು, ಯಾವಾಗಲೂ ತಂಪಿನ ಅನುಭವ ನೀಡುವ ವಾತಾವರಣ. ಕಾಫಿ ಹಾಗೂ ಟೀ ಎಸ್ಟೇಟ್ ಗಳಿಂದ ಕಂಗೋಳಿಸುತ್ತಿರುವ ಒಂದು ಸುಂದರ ನಾಡು.
ಈ ಜಿಲ್ಲೆಯಲ್ಲಿ ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ, ಶ್ರೀ ಕ್ಷೇತ್ರ ಹೊರನಾಡು, ಶ್ರೀ ಕ್ಷೇತ್ರ ಕಳಸ, ಬಾಬಬುಡನಗೀರಿ, ಎತ್ತರ ಪ್ರದೇಶದಲ್ಲಿರುವ ಆಕರ್ಷಕ ಡ್ಯಾಮ್ ಹಾಗೂ ವಿಶಾಲವಾದ ರಾಷ್ಟ್ರೀಯ ಉದ್ಯಾನ (ಅರಣ್ಯ)ವನ್ನು ಹೊಂದಿರುವ ಕುದುರೆಮುಖ, ವಿಶೇಷವಾಗಿ ಸಿನಿಮಾ ಚಿತ್ರೀಕರಣಕ್ಕಾಗಿ ಎಂದೇ ರೂಪುಗೊಂಡಿರುವ ಆಕರ್ಷಣೀಯ ಸ್ಥಳಗಳಾದ ಬಲ್ಗೇರಿ ಬೆಟ್ಟ, ಗಾಳಿಗೋಪುರ, ಮುಳ್ಳಯನಗಿರಿ ಬೆಟ್ಟ, ಹಳ್ಳಿಮನೆ, ಅಂಭಾ ತೀರ್ಥ, ತೂಗೂ ಸೇತುವೆ( ರೋಫ್ ವೇ ), ಹನುಮಾನ್ ಗುಂಡಿ, ಇನ್ನೂ ನೂರಾರು ಪ್ರೇಕ್ಷಣೀಯ ಸ್ಥಳಗಳು ಇಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಆಯೋಜಿಸಲಾದ ಎರಡು ದಿನಗಳ ಸಮ್ಮೇಳನಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದಂತಹ ಎಲ್ಲಾ ಪತ್ರಕರ್ತರಿಗೆ ಇಲ್ಲಿನ ಹಲವಾರು ರಮಣೀಯ ಸ್ಥಳಗಳನ್ನು ವೀಕ್ಷಿಸುವ ಅವಕಾಶವನ್ನು ಚಿಕ್ಕಮಂಗಳೂರು ಜಿಲ್ಲಾ ಪತ್ರಕರ್ತ ಸಂಘದ ಅಶ್ರಯದಲ್ಲಿ ವ್ಯವಸ್ಥೆಗೊಳಿಸಲಾಗಿತ್ತು.
Comments are closed.