ವರದಿ : ಈಶ್ವರ ಎಂ. ಐಲ್ಚಿತ್ರ : ದಿನೇಶ್ ಕುಲಾಲ್
ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಪ್ರತಿಷ್ಠಿತ ಎಂವಿಎಂ ಶಿಕ್ಷಣ ಸಂಸ್ಥೆಗೆ 2015-2016 ನೇ ಶೈಕ್ಷಣಿಕ ಸಾಲಿನ ಎಸ್ಎಸ್ಸಿ ಮತ್ತು ಎಚ್ಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ಎಸ್ಎಸ್ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದರೆ, ಎಚ್ಎಸ್ಸಿ ಪರೀಕ್ಷೆಯಲ್ಲಿ ಶೇ. 98.51 ಫಲಿತಾಂಶ ಲಭಿಸಿದೆ. ಎಸ್ಎಸ್ಸಿಯಲ್ಲಿ ಸಖೀ ಗುಂಡೆಟ್ಟಿ ಮತ್ತು ಸೌಮ್ಯಾ ಯಾದವ್ ಶೇ. 94.20 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮಿಗರೆನಿಸಿದರೆ, ಆಕಾಶ್ ಕಾಂಬ್ಳೆ ಶೇ. 92, ತುಳು-ಕನ್ನಡ ವಿದ್ಯಾರ್ಥಿನಿ ನವ್ಯತಾ ಪುತ್ರನ್ ಶೇ. 91.20, ಓಂಕಾರ್ ಸುರ್ವೆ ಅವರು ಶೇ. 91.20, ಅದಿತಿ ನಾಯಕ್ ಶೇ. 90.80 ಹಾಗೂ ದಿವ್ಯಾ ಮೇಸಿ ಶೇ. 90.20 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಎಸ್ಎಸ್ಸಿಯಲ್ಲಿ ಪರೀಕ್ಷೆಗೆ ಹಾಜರಾದ 134 ವಿದ್ಯಾರ್ಥಿಗಳ ಪೈಕಿ 56 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 47 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 31 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಎಚ್ಎಸ್ಸಿ ಪರೀಕ್ಷೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಸಂಚಾಲಿತ ಸಸಿಹಿತ್ಲು ಭವಾನಿ ಮೆಂಡನ್ ಆ್ಯಂಡ್ ಮೋಹನ್ ಮೆಂಡನ್ ಜೂನಿಯರ್ ಕಾಲೇಜ್ ಆಫ್ ಕಾಮರ್ಸ್ಗೆ ಶೇ. 98.51 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 134 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 51 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಸಾರಾ ಖಾನ್ ಶೇ. 85.53, ಧಾರ್ಮಿಕ್ ಗಾಲಾ ಅವರು ಶೇ. 82.15, ಇಶಾ ಪಾಟೀಲ್ ಶೇ. 77.38 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಮೊಗವೀರ ವ್ಯವಸ್ಥಾಪಕ ಮಂಡಳಿ ಸಂಚಾಲಿತ ಸಸಿಹಿತ್ಲು ಭವಾನಿ ಮೆಂಡನ್ ಆ್ಯಂಡ್ ಮೋಹನ್ ಮೆಂಡನ್ ಜೂನಿಯರ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜು ಅಂಧೇರಿ ಪಶ್ಚಿಮದ ಇತರ ಕಾಲೇಜುಗಳ ಪೈಕಿ ಪ್ರಥಮ ಸ್ಥಾನವನ್ನು ಪಡೆದಿದೆ.
ಮೊಗವೀರ ವ್ಯವಸ್ಥಾಪಕ ಮಂಡಳಿಯು 114 ವರ್ಷಗಳಿಂದ ಶಿಕ್ಷಣ ಸೇವೆಗೈಯುತ್ತಿದ್ದು, ಮುಂಬಯಿಯಲ್ಲಿ ಪ್ರಪ್ರಥಮ ಫ್ರೀನೈಟ್ ಹೈಸ್ಕೂಲ್ ಪ್ರಾರಂಭಿಸಿ ನೂರಾರು ವಿದ್ಯಾರ್ಥಿಗಳಿಗೆ ಅಂದಿನ ದಿನಗಳಲ್ಲಿ ಅತ್ಯವಶ್ಯವಾಗಿದ್ದ ಶಿಕ್ಷಣದ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಮಂಡಳಿಯು ವಿದ್ಯಾ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಸಮಾಜದ ಹಲವಾರು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಹಾಗೂ ವಿವಿಧ ರೀತಿಯಲ್ಲಿ ಸಹಕರಿಸುತ್ತಾ ಪ್ರೋತ್ಸಾಹಿಸುತ್ತಿದೆ. ಅಂಗನವಾಡಿಯಿಂದ ಪದವಿಯವರೆಗೆ ಮಂಡಳಿಯು ಶಿಕ್ಷಣವನ್ನು ನೀಡುತ್ತಿದೆ.
ತುಳು-ಕನ್ನಡ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ರಿಯಾಯಿತಿ ಸಂಸ್ಥೆಯಲ್ಲಿ ಬಿಎಂಎಸ್, ಬಿಎಸ್ಸಿ (ಐಟಿ), ಬಿಎಸ್ಸಿ (ಐಟಿ) ಹಾಗೂ ಬಿಎಎಫ್ ಪದವಿಗಳನ್ನು ಕಲಿಯಲು ಅವಕಾಶವಿದೆ. ಭಾರತ ಸರಕಾರದಿಂದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಂಧೇರಿ ಶಿಕ್ಷಣ ಸಂಕುಲಕ್ಕೆ ತನ್ನ ಕಾರ್ಯವೈಖರಿಯ ಪರಿಶೀಲನೆಗೊಳಗಾಗಿ ನಾಬೆಟ್ ಮಾನ್ಯತೆ ದೊರೆತಿದೆ. ಎಂವಿಎಂ ಎಜುಕೇಶನಲ್ ಕ್ಯಾಂಪಸ್ ಮೈನಾರಿಟಿ ಇನ್ಸ್ಟಿಟ್ಯೂಷನ್ ಎಂದು ಸರಕಾರದಿಂದ ಮಾನ್ಯತೆ ಪಡೆದಿದೆ. ಇಲ್ಲಿ ತುಳು-ಕನ್ನಡ ವಿದ್ಯಾರ್ಥಿಗಳಿಗೆ ಶೇ. 50ರಷ್ಟು ರಿಯಾಯಿತಿ ಇರುವುದರಿಂದ ಇದರ ಪ್ರಯೋಜನವನ್ನು ಎಲ್ಲ ಸಮಾಜ ಬಾಂಧವರು ಪಡೆಯಬೇಕು ಎಂದು ಮಂಡಳಿಯ ಪ್ರಕಟನೆ ತಿಳಿಸಿದೆ.
Comments are closed.