ಮಂಗಳೂರು, ಜೂನ್.6 : ಹೋಮ್ ಸ್ಟೇ ದಾಳಿ ಪ್ರಕರಣದ ಆರೋಪಿಗಳಾದ ಸಂದೀಪ್ ಹಾಗೂ ಸುಭಾಷ್ ಪಡೀಲ್ ವಿಚಾರಣೆಗಾಗಿ ಕೋರ್ಟ್ಗೆ ಹಾಜರಾಗಿದ್ದ ಸಂದರ್ಭ ಮಂಗಳೂರಿನ ಕೋರ್ಟ್ ಆವರಣದಲ್ಲಿ ರೌಡಿ ಶೀಟರ್ ರಾಜು ಅಲಿಯಾಸ್ ಜಪಾನ್ ಮಂಗ ದಾಳಿ ಮಾಡಿ ಇವರಿಬ್ಬರ ಮೇಲೆ ಚೂರಿಯಿಂದ ಇರಿಯಲು ಯತ್ನಿಸಿದ್ದ ಸಂದರ್ಭ ತಮ್ಮ ಜೀವದ ಹಂಗು ತೊರೆದು ಆರೋಪಿಯನ್ನು ಹಿಡಿದು ನಡೆಯ ಬಹುದಾದ ಅನಾಹುತ ತಪ್ಪಿಸಿದ ನಾಲ್ವರು ಪೊಲೀಸರಿಗೆ ಮಂಗಳೂರು ಪೊಲೀಸ್ ಆಯುಕ್ತರು ಅಭಿನಂದನೆ ಸಲ್ಲಿಸಿ, ನಗದು ಬಹುಮಾನ ಪ್ರಕಟಿಸಿದ್ದಾರೆ.
ಘಟನೆ ನಡೆದ ಶನಿವಾರ ವಿವಿಧ ಭೇಡಿಕೆಗಳಿಗೆ ಆಗ್ರಹಿಸಿ ರಾಜ್ಯಾದ್ಯಂತ ಪೊಲೀಸರು ಪ್ರತಿಭಟನೆಗೆ ಕರೆಕೊಟ್ಟಿದ್ದರು. ಅದರೆ ಕ್ರಿಮಿನಲ್ ರಾಜು ಯಾನೆ ಜಪಾನ್ ಮಂಗ ಎಂಬಾತ ಶನಿವಾರ ವಿಚಾರಣೆಗಾಗಿ ಬಂದಿದ್ದ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳಾದ ಸುಭಾಷ್ ಪಡೀಲ್ ಮತ್ತು ಸಂಪತ್ ಅವರನ್ನು ಮಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದಾಗ ಅಲ್ಲೆ ಕರ್ತವ್ಯದಲ್ಲಿದ್ದ ಉರ್ವ ಠಾಣೆಯ ಎಚ್.ಸಿ. ಹರೀಶ್, ಬಂದರು ಠಾಣೆಯ ಎಚ್.ಸಿ. ಮಹಂತೇಶ್, ಗ್ರಾಮಾಂತರ ಠಾಣೆ ಎಎಸ್ಐ ಶ್ರೀಧರ್, ಬಜಪೆ ಠಾಣೆಯ ಎಚ್.ಸಿ.ದಿನೇಶ್ ಕುಮಾರ್ ಅವರು ತಕ್ಷಣ ಆರೋಪಿಯನ್ನು ಹಿಡಿದು ಹೆಚ್ಚಿನ ಅಹಿತರಕರ ಘಟನೆ ನಡೆಯದಂತೆ ತಡೆಗಟ್ಟಿ ಸಾಹಸ ಮೆರೆದಿದ್ದಾರೆ.
ಪೊಲೀಸರ ಪ್ರತಿಭಟನೆಯಲ್ಲಿ ಭಾಗವಹಿಸದೇ ಸಾಮೂಹಿಕ ರಜೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಆರೋಪಿಯನ್ನು ಹಿಡಿದು ಪರಿಸ್ಥಿತಿ ನಿಯಂತ್ರಿಸಿ, ನಗರದಲ್ಲಿ ಸಂಭವಿಸ ಬಹುದಾದ ಗಂಭೀರ ಪ್ರಕರಣವೊಂದನ್ನು ತಪ್ಪಿಸುವ ಮೂಲಕ ಕರ್ತವ್ಯ ನಿಷ್ಠೆ ಮೆರೆದ ಉರ್ವ ಠಾಣೆಯ ಎಚ್.ಸಿ. ಹರೀಶ್, ಬಂದರು ಠಾಣೆಯ ಎಚ್.ಸಿ. ಮಹಂತೇಶ್, ಗ್ರಾಮಾಂತರ ಠಾಣೆ ಎಎಸ್ಐ ಶ್ರೀಧರ್, ಬಜಪೆ ಠಾಣೆಯ ಎಚ್.ಸಿ.ದಿನೇಶ್ ಕುಮಾರ್ ಅವರಿಗೆ ತಲಾ 2,000 ರೂ. ಬಹುಮಾನ ಹಾಗೂ ಫಲಕ ನೀಡಲಾಗುವುದು ಎಂದು ಪೊಲೀಸ್ ಕಮಿಷನರ್ ಚಂದ್ರಶೇಖರ್ ಘೋಷಿಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸದೆ ಇರುತ್ತಿದ್ದರೆ ಪ್ರಕರಣ ಇನ್ನಷ್ಟು ಗಂಭೀರವಾಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.
ಘಟನೆ ವಿವರ :
ಜೂನ್ 4 ಶನಿವಾರದಂದು ಮಂಗಳೂರಿನ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಬಂದಿದ್ದ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ಆರೋಪಿಗಳಾದ ಸುಭಾಷ್ ಪಡೀಲ್ ಮತ್ತು ಸಂಪತ್ ಅವರನ್ನು ಕುಂಜತ್ತಬೈಲ್ನ ರಾಜು ಯಾನೆ ಜಪಾನ್ ಮಂಗ(25 ಎಂಬಾತ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು, ಈ ಸಂದರ್ಭ ಅಲ್ಲೆ ಕರ್ತವ್ಯದಲ್ಲಿದ್ದ ಪೊಲೀಸರು ಆರೋಪಿಯನ್ನು ಸ್ಥಳದಲ್ಲಿಯೇ ಬಂಧಿಸಿದ್ದಾರೆ.
ನಗರದ ಬಾವುಟಗುಡ್ಡೆಯಲ್ಲಿರುವ ಕೋರ್ಟ್ ಕಟ್ಟಡದ 3ನೇ ಮಹಡಿಯಲ್ಲಿರುವ 6ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಪೂರ್ವಾಹ್ನ 38 ಮಂದಿ ಆರೋಪಿಗಳು ಹಾಜರಾಗಿ ದ್ದರು. ಮುಂದಿನ ವಿಚಾರಣೆಗೆ ನ್ಯಾಯಾಧೀಶರು ದಿನಾಂಕವನ್ನು ನಿಗದಿಪಡಿಸಿದ ಬಳಿಕ 11.30ರ ವೇಳೆಗೆ ಆರೋಪಿಗಳು ಕೋರ್ಟ್ ಹಾಲ್ನಿಂದ ಹೊರಗೆ ಬಂದು ಮೆಟ್ಟಲುಗಳನ್ನು ಇಳಿದು ಕೆಳಗೆ ಬರುವಷ್ಟರಲ್ಲಿ ಸುಭಾಷ್ ಪಡೀಲ್ ಮತ್ತು ಸಂಪತ್ ಕೈಕಂಬ ಅವರಿಗೆ ರಾಜು ಯಾನೆ ಜಪಾನ್ ಮಂಗ ಎದುರಾಗಿದ್ದಾನೆ.
ಸುಭಾಷ್ ಪಡೀಲ್ ಮತ್ತು ಸಂಪತ್ ಅವರನ್ನು ರಾಜು ಯಾನೆ ಜಪಾನ್ ಮಂಗ ಗುರಾಯಿಸಿ ನೋಡಿದ್ದು, ಈ ಸಂದರ್ಭ ಅವರೊಳಗೆ ಮಾತಿಗೆ ಮಾತು ಬೆಳೆದಿದೆ. ಜಪಾನ್ ಮಂಗನು ಸುಭಾಸ್ ಪಡೀಲ್ಗೆ ಬೈಯ್ದು “ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಹೇಳಿ ತನ್ನ ಸೊಂಟದಲ್ಲಿದ್ದ ಎರಡು ಅಲಗು(ತುದಿ)ಗಳಿರುವ ಚಾಕುವನ್ನು ತೆಗೆದು ತಿವಿಯಲು ಬಂದಿದ್ದಾನೆ. ಆಗ ಸುಭಾಸ್ ಪಡೀಲ್ ತಪ್ಪಿಸಿಕೊಂಡಿದ್ದಾನೆ. ಇದೇ ವೇಳೆ ಜಪಾನ್ ಮಂಗ ಚಾಕುವನ್ನು ಮಡಚಿ ಇಟ್ಟುಕೊಳ್ಳುವಾಗ ಆತನ ಎಡ ಕೈಯ ಉಂಗುರ ಬೆರಳಿಗೆ ತಗುಲಿ ಗಾಯವಾಗಿದೆ.
ಅಲ್ಲಿಂದ ಓಡಿ ಕೆಳಗಡೆ ಹೋಗಿದ್ದು, ಆತನನ್ನು ಸುಭಾಸ್ ಪಡೀಲ್ ಮತ್ತು ಸಹಚರರು ಕೋರ್ಟ್ನ ಕೆಳ ಅಂತಸ್ತಿನವರೆಗೆ ಬೆನ್ನಟ್ಟಿಕೊಂಡು ಹೋಗಿದ್ದಾರೆ. ಕೆಳ ಅಂತಸ್ತು ತಲುಪುತ್ತಲೇ ಮಾರಾಮಾರಿ ನಡೆದಿದೆ. ಅಷ್ಟರಲ್ಲಿ ಅಲ್ಲಿ ಕರ್ತವ್ಯ ನಿರತರಾಗಿದ್ದ ನಾಲ್ವರು ಪೊಲೀಸರು ಪ್ರಕರಣದ ಗಂಭೀರತೆಯನ್ನು ಮನಗಂಡು ಕೂಡಲೇ ಧಾವಿಸಿ ಜಪಾನ್ ಮಂಗನನ್ನು ತಡೆದು ವಶಕ್ಕೆ ಪಡೆದುಕೊಂಡು ಗಲಾಟೆಯನ್ನು ಬಿಡಿಸಿದ್ದಾರೆ.
ಪೂರ್ವ ದ್ವೇಷವೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎಂ. ಚಂದ್ರ ಶೇಖರ್, ಡಿಸಿಪಿಗಳಾದ ಶಾಂತರಾಜು ಮತ್ತು ಡಾ| ಸಂಜೀವ್ ಎಂ. ಪಾಟೀಲ್, ಎಸಿಪಿ ತಿಲಕ್ಚಂದ್ರ, ಕದ್ರಿ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯಕ್, ಬಂದರ್ ಠಾಣಾ ಇನ್ಸ್ಪೆಕ್ಟರ್ ಶಾಂತಾ ರಾಮ್ ಭೇಟಿ ನೀಡಿ ಪರಿಶೀಲಿಸಿದರು.
ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಪೊಲೀಸರು ಶನಿವಾರ ಸಾಮೂಹಿಕ ರಜೆಯನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ನಗರ ದಲ್ಲಿ ಗಂಭೀರ ಪ್ರಕರಣವೊಂದು ನಡೆಯುವುದು ತಪ್ಪಿ ಹೋಗಿದೆ. ಆರೋಪಿ ಜಪಾನ್ ಮಂಗನ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಬಂದರು ಠಾಣೆಯ ಇನ್ಸ್ಪೆಕ್ಟರ್ ಶಾಂತಾರಾಂ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಜಪಾನ್ ಮಂಗ
ರಾಜು ಯಾನೆ ಜಪಾನ್ ಮಂಗ ನಟೋರಿಯಸ್ ಕ್ರಿಮಿನಲ್. ಕುಂಜತ್ತಬೈಲ್ ನಿವಾಸಿಯಾಗಿರುವ ಈತ ಕುಖ್ಯಾತ ಕಳ್ಳ. ಈತನ ವಿರುದ್ಧ 2012ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ, ಬಿಲ್ಡರ್ ಕೊಲೆಗೆ ವಿಫಲ ಯತ್ನ, ದರೋಡೆ, ಹಲ್ಲೆ ಉದ್ಯಮಿಯೊಬ್ಬರ ಕೊಲೆಗೆ ಯತ್ನ ಸೇರಿದಂತೆ ಸುರತ್ಕಲ್, ಕಾವೂರು, ಬಂದರ್ ಠಾಣೆಗಳಲ್ಲಿ ಹಾಗೂ ಕಾಸರಗೋಡಿನಲ್ಲೂ ಪ್ರಕರಣಗಳು ದಾಖಲಾಗಿವೆ.
Comments are closed.