ಉಡುಪಿ: ಬ್ರಹ್ಮಾವರ ಮೂಲದ ಯುವತಿಯೊಬ್ಬರು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಉಡುಪಿ ಜಿಲ್ಲೆಯ ಕೋಟ ಪೊಲೀಸರ ಮೇಲೆ ಅನುಚಿತ ವರ್ತನೆಯ ಬಗ್ಗೆ ಹೇಳಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರು ಸ್ಪಷ್ಟನೆ ನೀಡಿದ್ದಾರೆ.
ಸುಧೀರ್ ಅವರ ಮೇಲೆ ಹಲ್ಲೆ ನಡೆದಿದ್ದು, ಬ್ರಹ್ಮಾವರ ಠಾಣೆಯ ಸಿಬ್ಬಂದಿ ತಾರಾನಾಥ ಅವರು ಆಸ್ಪತ್ರೆಯಲ್ಲಿ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಬಂದಿದ್ದ ಹಲ್ಲೆಗೊಳಗಾದ ವ್ಯಕ್ತಿಯ ಸಹೋದರಿ ತಾರಾನಾಥ ಅವರಲ್ಲಿದ್ದ ಪೇಪರ್, ಪ್ಯಾಡ್ ಎಳೆದುಕೊಂಡಿದ್ದಾರೆ. ಅನಂತರ ಮಾನಭಂಗ ಯತ್ನ ಕೇಸು ದಾಖಲಿಸಲು ಪೊಲೀಸರಿಗೆ ದೂರು ನೀಡಿದ್ದು, ಸತ್ಯಾಸತ್ಯತೆ ಕಂಡುಬಾರದ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಿಸಲು ನಿರಾಕರಿಸಲಾಗಿತ್ತು. ಘಟನೆ ಬಗ್ಗೆ ಉಡುಪಿ ಡಿವೈಎಸ್ಪಿ ಅವರ ಮುಖಾಂತರ ವರದಿ ತರಿಸಿಕೊಂಡು ಪರಿಶೀಲನೆಯನ್ನು ನಡೆಸಲಾಗಿದೆ.
ಈ ಪ್ರಕರಣದಲ್ಲಿ ಮಾನಭಂಗದಂತಹ ಹೀನ ಕೃತ್ಯ ವನ್ನು ಪೊಲೀಸರು ನಡೆಸಿಲ್ಲ. ಆದರೂ ಸಾರ್ವಜನಿಕರೊಂದಿಗೆ ಏಕೆ ಸೌಜನ್ಯಯುತವಾಗಿ ವರ್ತಿಸಿಲ್ಲ ಎಂದು ಪಿಎಸ್ಐ ಮತ್ತು ಸಿಬ್ಬಂದಿ ಅವರಿಗೆ ಕಾರಣ ಕೇಳಿ ವಿವರಣೆ ನೀಡುವಂತೆ ದೋಷಾರೋಪ ಪತ್ರ ಹೊರಡಿಸಲಾಗಿದೆ. ಉತ್ತರ ಬಂದ ಅನಂತರ ಸೂಕ್ತ ಎಂದು ಕಂಡುಬಾರದೆ ಇದ್ದಲ್ಲಿ ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ ಎಸ್ಪಿ ಸಾರ್ವಜನಿಕರಿಗೆ ರಕ್ಷಣೆ ಕೊಡುವುದರ ಜತೆಗೆ ತಪ್ಪು ಮಾಡದ, ಉತ್ತಮವಾಗಿ ಕಾರ್ಯನಿರ್ವಹಿಸುವ ನನ್ನ ಅಧೀನದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ರಕ್ಷಿಸುವುದು ಕೂಡ ನನ್ನ ಕರ್ತವ್ಯವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿರಿ:
ಯುವತಿ ಜೊತೆ ಬ್ರಹ್ಮಾವರ ಪೊಲೀಸರ ಅಸಭ್ಯ ವರ್ತನೆ: ಉಡುಪಿ ಎಸ್ಪಿ ವಿರುದ್ಧ ಐಜಿಪಿಗೆ ದೂರು
Comments are closed.