ಉಡುಪಿ: ವಿವಿಧ ಬೇಡಿಕೆಯನ್ನು ಇಡೇರಿಸುವಂತೆ ಈಗಾಗಲೇ ಪೊಲೀಸರ ಪ್ರತಿಭಟನೆಗೆ ಭಾರೀ ಬೆಂಬಲ ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿರುವ ಸಂದರ್ಬದಲ್ಲೇ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ಪಿಎಸೈ ಕಬ್ಬಲ್ ರಾಜ್ ಅವರು ರಾಜೀನಾಮೆ ನೀಡಲು ಮುಂದಾಗಿರುವ ಘಟನೆ ವರದಿಯಾಗಿದೆ.
ಪೊಲೀಸ್ ಪ್ರತಿಭಟನೆಯ ಕುರಿತು ಸಾಮಾಹಿಕವಾಗಿ ರಜೆ ಪಡೆದು ಪ್ರತಿಭಟನೆ ನಡೆಸದಂತೆ ಗುರುವಾರದಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾ ಮಲೈ ಕೋಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸ್ ಸಿಬ್ಬಂದಿಗಳಲ್ಲಿ ಮನವಿ ಮಾಡಿದರು. ಈ ಸಂದರ್ಭ ಕೋಟ ಪೊಲೀಸ್ ಠಾಣಾಧಿಕಾರಿ ಕಬ್ಬಾಳ್ರಾಜ್ ಅವರು ಇಲಾಖೆಯ ಸಮಸ್ಯೆಗಳನ್ನು ಕೇಳುವವರು ಇಲ್ಲವಾಗಿದ್ದಾರೆ, ಈ ವಿಚಾರದಲ್ಲಿ ಬೇಸರವಾಗಿದೆ ಈ ನಿಟ್ಟಿನಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸುದಾಗಿ ತಿಳಿಸಿದ ಘಟನೆ ನಡೆಯಿತು.
ರಾಜ್ಯದ ಪೊಲೀಸ್ ಇಲಾಖೆಯಲ್ಲಿ ವೇತನ ತಾರತಮ್ಯ ಮತ್ತಿತರ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್ 4 ರಂದು ಸಾಮೂಹಿಕ ಪ್ರತಿಭಟನೆಗೆ ಪೊಲೀಸ್ ಸಿಬ್ಬಂದಿಗಳು ಕರೆ ನೀಡಿದ ಬೆನ್ನಲ್ಲಿ, ರಾಜ್ಯ ಸರಕಾರವು ಪೊಲೀಸ್ ಸಿಬ್ಬಂದಿಗಳ ಸಂಘಟನೆಯ ರಾಜ್ಯದ ನಾಯಕ ಶಶಿಧರ ಅವರನ್ನು ಬುಧವಾರದಂದು ರಾತ್ರಿ ಬಂಧಿಸಿತ್ತು. ಈ ಘಟನೆಯಿಂದ ಬಹುತೇಕ ಸಿಬ್ಬಂದಿಗಳು ಉದ್ಯೋಗವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಸಮಸ್ಯೆಗಳನ್ನು ತಮ್ಮಲ್ಲೆ ಇಟ್ಟು ಪ್ರತಿಭಟನೆಯಿಂದ ದೂರ ಉಳಿಯುವಂತಾಗಿದೆ. ಈ ವ್ಯವಸ್ಥೆಯಿಂದ ಬಹಳಷ್ಟು ಬೇಸರವಾಗಿದೆ, ಆದ್ದರಿಂದ ರಾಜಿನಾಮೆ ನಿರ್ಧಾರ ಮಾಡಿದ್ದೇನೆ ಎಂದು ಕೋಟ ಠಾಣಾಧಿಕಾರಿ ಕಬ್ಬಾಳ್ರಾಜ್ ಅವರು ಅಣ್ಣಾಮಲೈ ಅವರ ಬಳಿ ತಿಳಿಸಿದ್ದಾರೆ.
ಬಳಿಕ ಅಣ್ಣಾಮಲೈ ಅವರು ಸಮಸ್ಯೆಗಳ ಬಗ್ಗೆ ಸರಕಾರ ಗಮನಹರಿಸಲಿದೆ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪೊಲೀಸ್ ಇಲಾಖೆಯ ಕೊಡುಗೆ ಬೇಕು, ನಿಮ್ಮ ರಾಜಿನಾಮೆಯಿಂದ ಇಡಿ ಪೊಲೀಸ್ ಸಮೂಹಕ್ಕೆ ನ್ಯಾಯ ದೊರಕಿದಂತಾಗುವುದಿಲ್ಲ ಎಂದು ಕಬ್ಬಾಳ್ರಾಜ್ ಅವರನ್ನು ಸಂತೈಸಿದ್ದಾರೆ ಎನ್ನಲಾಗಿದೆ.
ಇನ್ನು ರಾಜಿನಾಮೆ ವಿಚಾರದ ಬಗ್ಗೆ ಕನ್ನಡಿಗ ವರ್ಲ್ಡ್ ಜೊತೆ ಮಾತನಾಡಿದ ಎಸ್ಪಿ ಅವರು ‘ ರಾಜಿನಾಮೆ ನೀಡಿಲ್ಲ. ವರ್ಗಾವಣೆ ವಿಚಾರದಲ್ಲಿ ಬೇಸರಗೊಂಡು ರಾಜಿನಾಮೆ ನೀಡುವ ಬಗ್ಗೆ ಮಾತನಾಡಿದ್ದಾರೆ. ಇದಕ್ಕೂ ಪ್ರತಿಭಟನೆ ವಿಚಾರಕ್ಕೂ ಸಂಬಂದವಿಲ್ಲ’ ಎಂದು ಸ್ಪಷ್ಟನೆ ನೀಡಿದರು.
Comments are closed.