ವರದಿ / ಚಿತ್ರ : ಸತೀಶ್ ಕಾಪಿಕಾಡ್
ಮಂಗಳೂರು: ದುಬೈಯ ಖ್ಯಾತ ಉದ್ಯಮಿ, ಆಕ್ಮೆ ( ACME) ಬಿಲ್ಡಿಂಗ್ ಮೆಟೀರಿಯಲ್ಸ್, ದುಬಾಯಿ ಇದರ ಆಡಳಿತಾ ನಿರ್ದೇಶಕ ಹಾಗೂ ಕನ್ನಡಿಗವರ್ಲ್ಡ್ ಅಂತಾರ್ಜಾಲ ತಾಣದ ಮಾಲಕ, ಹೆಸರಾಂತ ಗಾಯಕ, ಕೊಡುಗೈ ದಾನಿ ಶ್ರೀ ಹರೀಶ್ ಶೇರಿಗಾರ್ ಅವರು ಪ್ರತಿ ವರ್ಷ ಖ್ಯಾತ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ದುಬೈಯಲ್ಲಿ ಸಾಂಸ್ಕೃತಿಕ ಹಾಗೂ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸಿ, ಅದರಲ್ಲಿ ಬರುವ ಅದಾಯವನ್ನು ತಮ್ಮ ಊರಿನಲ್ಲಿ ಸಂಘ ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಸೇವಾ ಸಂಸ್ಥೆಗಳಿಗೆ ಹಾಗೂ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮತ್ತು ಶಾಲಾ ಫೀಸ್ ಗಳಿಗಾಗಿ ದೇಣಿಗೆ ನೀಡುತ್ತಾ ಬಂದಿದ್ದಾರೆ.
ಶ್ರೀ ಹರೀಶ್ ಶೇರಿಗಾರ್ ಅವರು ಕಳೆದ ಆರು ವರ್ಷಗಳಿಂದ ಇದೇ ರೀತಿ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನ ಖ್ಯಾತ ಕಲಾವಿದರನ್ನು ಕರೆ ತಂದು “ಧೂಮ್ ಧಮಾಕ ” ಕಾರ್ಯಕ್ರಮವನ್ನು ಅಯೋಜಿಸಿ, ಈ ಮೂಲಕ ಬರುವ ಹಣವನ್ನು ದುಬೈ ಹಾಗೂ ದ.ಕ.ಜಿಲ್ಲೆಯ ಹಲವಾರು ಸೇವಾ ಸಂಸ್ಥೆಗಳು ಮತ್ತು ಬಡ ವಿದ್ಯಾರ್ಥಿಗಳ ವಿಧ್ಯಾಬ್ಯಾಸಕ್ಕೆ ಧನ ಸಹಾಯ ಮಾಡುತ್ತಾ ಬಂದಿದ್ದಾರೆ.
ಈ ಬಾರಿ ದುಬೈಯಲ್ಲಿ ಬಾಲಿವುಡ್ನ ಖ್ಯಾತ ಹಾಸ್ಯನಟ ಜಾನಿಲಿವರ್ ಸೇರಿದಂತೆ ಹಲವಾರು ಜನಪ್ರಿಯ ಕಲಾವಿದರ ಕೂಡುವಿಕೆಯಲ್ಲಿ “ಧೂಮ್ ಧಮಾಕ -2016” ಎಂಬ ಹಾಸ್ಯ ಕಾರ್ಯಕ್ರಮವನ್ನು ಅಯೋಜಿಸಿದ್ದು, ಈ ಕಾರ್ಯಕ್ರಮದ ಮೂಲಕ ಬಂದಂತಹ ಆದಾಯದಲ್ಲಿ ಮಂಗಳೂರಿನ ಸೇವಾ ಭಾರತಿ ಟ್ರಸ್ಟ್ನ ಅಧೀನಕ್ಕೊಳಪಟ್ಟ ಚೇತನಾ ಬಾಲವಿಕಾಸ ಕೇಂದ್ರಕ್ಕೆ ರೂ. 5,00000 / ದೇಣಿಗೆ ಹಾಗೂ ನಗರದ ಕೆಲವು ಬಡ (ಅರ್ಹ) ವಿದ್ಯಾರ್ಥಿಗಳ ಕಾಲೇಜು ಮತ್ತು ಶಾಲಾ ಶುಲ್ಕ ( ಎಜ್ಯುಕೇಶನ್ ಫೀ ) ಗಾಗಿ ರೂ. ರೂ. 4,00000 /, ಸಹಾಯ ಧನ ಮತ್ತು ದೇರಳಕಟ್ಟೆ ಸಮೀಪದ ಬೆಳ್ಮದಲ್ಲಿ ಕಾರ್ಯನಿರ್ವಾಹಿಸುತ್ತಿರುವ ವೃದ್ಧಾಶ್ರಮ “”ಸೇವಾಶ್ರಮ”” ಕ್ಕೆ ರೂ.3,00000 / ದೇಣಿಗೆ ಹಾಗೂ ಕಿಡ್ನಿ ವೈಫಲ್ಯದಿಂದ ನಗರದ ಯೆನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮತಿ ಶಾಂತಾ ಮೊಯ್ಲಿ ಇವರ ಚಿಕಿತ್ಸೆಗಾಗಿ ಆಸ್ಪತ್ರೆ ವೆಚ್ಚ ರೂ.. 2,00000/ ನೆರವು ಮತ್ತು ಹಿರಿಯಡ್ಕ ಬಳಿಯ ಪೆರ್ನಾಂಕಿಯಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣಕ್ಕೆ ರೂ.1,00000 ನೆರವು, ಈ ರೀತಿ ಒಟ್ಟು 15 ಲಕ್ಷ ರೂಪಾಯಿಯನ್ನು ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ ಶೇರಿಗಾರ್ ದಂಪತಿಗಳು ತಾವೇ ಸ್ವತ ಈ ಸೇವಾ ಸಂಸ್ಥೆಗಳಿರುವ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಕಾರ್ಯಾಚಟುವಟಿಕೆಗಳನ್ನು ಖುದ್ದಾಗಿ ಪರಿಶೀಲನೆ ಮಾಡಿ ಬಳಿಕ ದೇಣಿಗೆ ನೀಡಿದ್ದಾರೆ.
ಉದ್ಯಮದೊಂದಿಗೆ ಕಲಾಫೋಷರೂ ಆಗಿರುವ ಶ್ರೀ ಹರೀಶ್ ಶೇರಿಗಾರ್ ಅವರು ತಮ್ಮ ಸಮಾಜ ಸೇವೆಯ ಮೂಲಕ ಜನಮಣ್ಣನೆಗೆ ಪಾತ್ರರಾಗಿದ್ದಾರೆ. ದುಬೈ ಮಾತ್ರವಲ್ಲದೇ ತಮ್ಮ ಹುಟ್ಟೂರಿನ ಹಲವಾರು ವಿದ್ಯಾರ್ಥಿಗಳಿಗೆ ಅವರು ವಿದ್ಯಾಭ್ಯಾಸಕ್ಕೆ ಧನ ಸಹಾಯ ಮಾಡುತ್ತಾ ಬಂದಿದ್ದಾರೆ. ಮಾತ್ರವಲ್ಲದೇ ತಮ್ಮ ಸ್ವಜಾತಿ ಬಾಂಧವರಿಗೆ ಹಲವಾರು ರೀತಿಯ ಕೊಡುಗೆಗಳನ್ನು ನೀಡಿದ್ದಾರೆ.
ವಿದ್ಯಾರ್ಥಿ ವೇತನ, ವಿದ್ಯಾರ್ಥಿಗಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ, ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆಗಾಗಿ ನೆರವು, ವಾಸಕ್ಕೆ ಯೋಗ್ಯ ಮನೆಯಿಲ್ಲದ ಬಡ ಕುಟುಂಬಗಳಿಗೆ ಮೂಲ ಸೌಕರ್ಯದೊಂದಿಗೆ ಮನೆ ಕಟ್ಟಿಸಿ ಕೊಡುವುದು ಈ ರೀತಿ ಕಳೆದ ಕೆಲವು ವರ್ಷಗಳಿಂದ ಹಲವಾರು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದಾರೆ.
ಚೇತನಾ ಬಾಲವಿಕಾಸ ಕೇಂದ್ರ -ವಿ.ಟಿ ರಸ್ತೆ, ಕೊಡಿಯಾಲ್ ಬೈಲ್, ಮಂಗಳೂರು
ನಗರದ ವಿಟಿ ರಸ್ತೆಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ಚೇತನಾ ಬಾಲವಿಕಾಸ ಕೇಂದ್ರಕ್ಕೆ ಇತ್ತೀಚಿಗೆ ಭೇಟಿ ನೀಡಿದ ಶ್ರೀ ಹರೀಶ್ ಶೇರಿಗಾರ್ ಅವರು, ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿ ಸಂಸ್ಥೆಯ ಸೇವಾಚಟುವಟಿಗೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಂಸ್ಥೆಯಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿ, ಶ್ರೀ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ರೂ. 5 ಲಕ್ಷವನ್ನು ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಸೇವಾಂಜಲಿ ಸಂಸ್ಥೆಯ ಟ್ರಸ್ಟಿ ಶ್ರೀ ವಿನೋದ್ ಶೆಣೈ ದೇಣಿಗೆಯನ್ನು ಸ್ವೀಕರಿಸಿ, ಶ್ರೀ ಹರೀಶ್ ಶೇರಿಗಾರ್ ದಂಪತಿಗಳಿಗೆ ಗೌರವ ಪೂರ್ವಕ ಕೃತಜ್ಞತೆ ಸಲ್ಲಿಸಿದರು.
ಈ ವೇಳೆ ಹರೀಶ್ ಶೇರಿಗಾರ್ ಅವರ ಸಹೋದರರಾದ ಶ್ರೀ ಪ್ರಕಾಶ್ ಶೇರಿಗಾರ್, ಶ್ರೀ ಶ್ರೀನಿವಾಸ್ ಶೇರಿಗಾರ್, ಶ್ರೀ ಗೋಕರ್ಣನಾಥ ಕಾಲೇಜಿನ ಸಲಹೆಗಾರರಾದ ಡಾ.ರೆಣುಕಾ, ಸೇವಾ ಭಾರತಿ ಟ್ರಸ್ಟ್ನ ಸಂಸ್ಥೆಯ ಟ್ರಸ್ಟಿ ಡಾ. ಯು.ಆರ್.ಶೆಣೈ, ಚೇತನಾ ಬಾಲವಿಕಾಸ ಕೇಂದ್ರದ ಸ್ವಯಂ ಸೇವಕ ನರಸಿಂಹ ರಾಜು ಹಾಗೂ ಸುನೀಲ್ ದತ್ತ್ ಪೈ, ಧನಂಜಯ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
2011ರಲ್ಲಿ ಗ್ರೀಸ್ ದೇಶದ ಯಥೆನ್ಸ್ ನಲ್ಲಿ ನಡೆದ ವಿಕಲಚೇತನರ ಒಲಂಪಿಕ್ನಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗಗಳಲ್ಲಿ ಎರಡು ಚಿನ್ನದ ಪದಕ ಗಳಿಸುವ ಮೂಲಕ ಮಂಗಳೂರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ತಂದ ಇದೇ ಶಾಲೆಯಲ್ಲಿ ಕಲಿಯುತ್ತಿರುವ ಧನ್ಯಾ ಎಸ್.ರಾವ್ (20) ಕೂಡ ಈ ಸಂದರ್ಭದಲ್ಲಿ ಜೊತೆಗಿದ್ದರು.
1992 ಸೆಪ್ಟಂಬರ್ ನಲ್ಲಿ ಆರಂಭವಾದ ಸೇವಾಭಾರತಿ ಸಂಸ್ಥೆಯ ಮೂಲಕ ಆರಂಭಗೊಂಡ ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಅಂಗ ವೈಕಲ್ಯವಿರುವವರಿಗೆ ವಿಧ್ಯಾಬ್ಯಾಸದ ಜೊತೆಗೆ ಅಂಗವೈಕಲ್ಯ, ಅಂಧತ್ವ, ಶ್ರವಣದೋಷ ಮೊದಲಾದ ನ್ಯೂನತೆ ಇರುವವರಿಗೆ ಸೂಕ್ತ ಸಲಹೆ, ಚಿಕಿತ್ಸೆ ಕೊಡಲಾಗುತ್ತದೆ. ಇದೀಗ ರಥಬೀದಿ ಸಮೀಪ ವಿಶಾಲವಾದ 2 ಅಂತಸ್ತಿನ ಕಟ್ಟಡದಲ್ಲಿ ಕಾರ್ಯಾನಿರ್ವಾಹಿಸುತ್ತಿದ್ದು, ಪೂರ್ಣ ಪ್ರಮಾಣದ ಫಿಸಿಯೋಥೆರೆಪಿ ಘಟಕ, ಸ್ಟೀಮ್ ಥೆರೆಪಿ, ಮಾಗ್ನೆಟಿಕ್ ಥೆರೆಪಿ, ಸೆನ್ಸರಿ ಪಾರ್ಕ್, ಹೋಮಿಯೋಪಥಿ ಚಿಕಿತ್ಸೆ, ವೃತ್ತಿಪರ ಶಿಕ್ಷಣ ತರಬೇತಿ ಕೇಂದ್ರ, ಅಕ್ಕ ಪಕ್ಕದ ಊರುಗಳಿಗೆ ತೆರಳಿ ಚಿಕಿತ್ಸೆ ಕೊಡುವ ಫಿಸಿಯೋಥೆರೆಪಿ ಸಂಚಾರಿ ಘಟಕ, ರಕ್ತದಾನ ಶಿಬಿರ, ರಕ್ತದಾನ ಜಾಗೃತಿ ಶಿಬಿರ, ಸಾಪ್ತಾಹಿಕ ವೈದ್ಯಕೀಯ ಶಿಬಿರ, ಆಪ್ತ ಸಲಹಾ ಕೇಂದ್ರ, ಕಲಿಕಾ ನ್ಯೂನತಾ ಕೇಂದ್ರ, ವಿಶಿಷ್ಟರಿಗಾಗಿ ಪ್ರವಾಸ, ಹಿರಿಯ ನಾಗರಿಕರ ವೈದ್ಯಕೀಯ ಶಿಬಿರ, ವಿಶಿಷ್ಟರ ವಾರ್ಷಿಕ ಜಾತ್ರೆ, ಅಂಧ ಮಕ್ಕಳ ವಸತಿ ಶಾಲೆ, ತೆಲಸೇಮಿಯಾ ಪೀಡಿತರಿಗೆ ವೈದ್ಯಕೀಯ ನೆರವು, ನವ ಚೇತನಾ ಆಟಿಸಂ ಸೆಂಟರ್, ಚಿಕಿತ್ಸಾ ಉಪಕರಣಗಳ ಬ್ಯಾಂಕ್ (ಮೆಡಿಕಲ್ ಅಸಿಸ್ಟೀವ್ ಬ್ಯಾಂಕ್)…….ಮೊದಲಾದುವುಗಳನ್ನು ಸಮಾಜಕ್ಕಾಗಿ ಸ್ಪಂದಿಸಿರುವ ಹೃದಯವಂತ ಸಾವಿರಾರು ಬಂಧುಗಳ ನೆರವಿನಿಂದ ಸೇವಾಭಾರತಿ ಮಂಗಳೂರಿನ ಆಶ್ರಯದಲ್ಲಿ ನಡೆಸುತ್ತಾ ಬರುತ್ತಿದೆ.
ಸೇವಾಶ್ರಮ – ಅನಾಥ ಮಹಿಳೆಯರ ಆಶ್ರಮ. ಬೆಳ್ಮ, ದೇರಳಕಟ್ಟೆ, ಉಳ್ಳಾಲ ತಾಲೂಕ್. ದ.ಕ.ಜಿಲ್ಲೆ
ದೇರಳಕಟ್ಟೆ ಸಮೀಪದ ಬೆಳ್ಮ ಎಂಬಲ್ಲಿ ಡಾ. ಜಿ.ಆರ್.ಶೆಟ್ಟಿಯವರ ನೇತ್ರತ್ವದಲ್ಲಿ ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡದಲ್ಲಿ 2013ರಲ್ಲಿ ಆರಂಭಗೊಂಡ “ಸೇವಾಶ್ರಮ”ದಲ್ಲಿ ಮಕ್ಕಳಿಲ್ಲದ, ಮಕ್ಕಳನ್ನು ಕಳೆದುಕೊಂಡಂತಹ ಹಾಗೂ ಮಕ್ಕಳು ಇದ್ದು ಅನಾಥರಾದಂಥ 60 ವರ್ಷಕ್ಕೂ ಮೇಲ್ಪಟ್ಟ ವಯೋವೃದ್ಧ ಮಹಿಳೆಯರನ್ನು ಫೋಷಿಸಲಾಗುತ್ತಿದ್ದು, ಇವರೆಲ್ಲರಿಗೂ ಇಲ್ಲಿ ಉತ್ತಮ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಹಾಗೂ ಶುಚಿಕರವಾದ ಊಟ ಉಪಚಾರದ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಮೆಡಿಟೇಷನ್ ಕೂಡ ಮಾಡಲಾಗುತ್ತಿದೆ.
ಇಲ್ಲಿ ಇದೀಗ 17 ಮಂದಿಯನ್ನು ಫೋಷಿಸಲಾಗುತ್ತಿದ್ದು, ಇನ್ನೂ 40ಕ್ಕೂ ಹೆಚ್ಚು ಮಂದಿಗೆ ಅಗತ್ಯವಿರುವಷ್ಟು ಸ್ಥಳಾವಕಾಶವಿದೆ. ಮಂಗಳೂರು ಸುತ್ತಮುತ್ತ ವ್ಯಾಪ್ತಿಯ ಮಾತ್ರವಲ್ಲದೇ ಇತರ ಜಿಲ್ಲೆಗಳು ಮತ್ತು ಕೇರಳ ಸೇರಿದಂತೆ ಇತರ ರಾಜ್ಯಗಳ ಅರ್ಹ ವ್ಯಯೋವೃದ್ಧರಿಗೆ ಇಲ್ಲಿ ಅವಕಾಶ ನೀಡಲಾಗಿದ್ದು, ಯಾವೂದೇ ಜಾತಿ, ಧರ್ಮದವರನ್ನೂ ಇಲ್ಲಿ ಸೇರಿಸಿಕೊಳ್ಳಲಾಗುತ್ತದೆ.
ಈ ಸೇವಾಶ್ರಮಕ್ಕೆ ಸರಕಾರದಿಂದ ಯಾವೂದೇ ಸ್ಪಂದನೆವಿಲ್ಲದಿರುವುದರಿಂದ ಸಂಪನ್ಮೂಲ ಕ್ರೋಡಿಕರಣದ ನಿಟ್ಟಿನಲ್ಲಿ ದಾನಿಗಳು ಮುಂದೆ ಬಂದರೆ ಇನ್ನಷ್ಟು ಹೆಚ್ಚಿನ ವಯೋವೃದ್ಧರನ್ನು ಇಲ್ಲಿ ಸೇರಿಸಿಕೊಂಡು ಮಕ್ಕಳಂತೆ ಫೋಷಿಸುವ ಮೂಲಕ ಅವರಿಗೆ ನೆಮ್ಮದಿಯ ಬದುಕನ್ನು ಕಲ್ಪಿಸ ಬಹುದು ಎನ್ನುತ್ತಾರೆ ಸೇವಾಶ್ರಮದ ಮುಖ್ಯಸ್ಥೆ ಲಯನೆಸ್ ರಾಯಬಾರಿ ಶ್ರೀಮತಿ ಗೀತಾ ಆರ್.ಶೆಟ್ಟಿ.
ಸೇವಾಶ್ರಮಕ್ಕೆ ಇತ್ತೀಚಿಗೆ ಭೇಟಿ ನೀಡಿದ ಶ್ರೀ ಹರೀಶ್ ಶೇರಿಗಾರ್ ಹಾಗೂ ಶ್ರೀಮತಿ ಶರ್ಮಿಳಾ.ಎಚ್. ಶೇರಿಗಾರ್ ಅವರು ಸೇವಾಶ್ರಮಕ್ಕೆ ಮೂರು ಲಕ್ಷ ರೂಪಾಯಿ ದೇಣಿಗೆ ನೀಡಿದರು. ಆಶ್ರಮದ ಸ್ಥಾಪಕ ಡಾ. ಜಿ.ಆರ್.ಶೆಟ್ಟಿ ಹಾಗೂ ಮುಖ್ಯಸ್ಥೆ ಲಯನ್ ಮತ್ತು ಲಯನೆಸ್ ಸದಸ್ಯೆ ಶ್ರೀಮತಿ ಗೀತಾ ಆರ್.ಶೆಟ್ಟಿ ಅವರು ದೇಣಿಗೆಯನ್ನು ಸ್ವೀಕರಿಸಿ ಹರೀಶ್ ಶೇರಿಗಾರ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು.
Comments are closed.