ಸೌದಿ ಅರೇಬಿಯಾ: ಜುಬೈಲ್ನಲ್ಲಿರುವ ಪೆಟ್ರೋಕೆಮಿಕಲ್ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಜಿಲ್ಲೆಯ ಆರು ಮಂದಿ ಸೇರಿದಂತೆ ಕನಿಷ್ಟ 12 ಮಂದಿ ಮೃತಪಟ್ಟಿದ್ದು ಹನ್ನೊಂದು ಮಂದಿ ಗಾಯಗೊಂಡ ಘಟನೆ ಶನಿವಾರ ಸಂಭವಿಸಿದೆ. ಮೃತರ ಪೈಕಿ ಐವರು ಮಂಗಳೂರಿಗರಾಗಿದ್ದಾರೆ.
ಕಾರ್ತಿಕ್ ಸನಿಲ್, ಭಾಸ್ಕರ್ ಪೂಜಾರಿ, ವಿನ್ಸೆಂಟ್ ಮೊಂಥೆರೋ, ಬಾಲಕೃಷ್ಣ ಪೂಜಾರಿ ವಾಮಂಜೂರು, ಅಶ್ರಫ್ ಹಳೆಯಂಗಡಿ ಮೃತ ದುರ್ದೈವಿಗಳಾಗಿದ್ದು, ಆಶಿಶ್ ಸಿಂಗ್ ಉತ್ತರಪ್ರದೇಶ ಮತ್ತು ಕೇರಳ ನಿವಾಸಿ ಬೆನ್ನಿ, ಮೊಹಮ್ಮದ್ ಇಬ್ರಾಹಿಂ, ಕೇರಳದ ಡೇನಿಯಲ್, ಲಿಜೋನ್ ಕೂಡಾ ಸಾವಿಗೀಡಾಗಿದ್ದಾರೆ. ಇವರ ಜೊತೆ ಫಿಲಿಫೈನ್ಸ್ ಪ್ರಜೆಗಳಾದ ಜೋಲನ್ ಮತ್ತು ಮಾರ್ಟಿನ್ ಕೂಡಾ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಧೀರಜ್ ಮಂಜೇಶ್ವರ, ಉತ್ತರ ಪ್ರದೇಶದ ಆತಿಕ್, ನೇಪಾಳದ ಅಮೃತ್, ಫಿಲಿಪೈನ್ಸ್ನ ರಯಾನ್ ಎಂಬವರು ಗಂಭೀರ ಗಾಯಗೊಂಡಿದ್ದು ಅಲ್-ಮನಾ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿತಿನ್ ವೇಣೂರು, ಯತೀಶ್ ಉಳ್ಳಾಲ, ಆಯುಬ್ ಫರಂಗಿಪೇಟೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಸಯೀದ್ ಕಾವೂರು ಎಂಬವರನ್ನು ಮೊವಸತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಕೂಡಾ ಚೇತರಿಸಿಕೊಳ್ಳುತ್ತಿದ್ದಾರೆ. ಅಭಿಲಾಷ್ ನಿಡ್ಡೋಡಿ ಎಂಬವರನ್ನು ರಾಯಲ್ ಕಮಿಷನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜುಬೈಲ್ನಲ್ಲಿರುವ ಯುನೈಟೆಡ್ ಪೆಟ್ರೊಕೆಮಿಕಲ್ ಕಂಪನಿಯ ಕನ್ಫೈನ್ಮೆಂಟ್ ಪ್ರದೇಶದಲ್ಲಿ ಮೆಂಟೆನೆನ್ಸ್ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಕಾಲಮಾನ ಪ್ರಕಾರ ಬೆಳಿಗ್ಗೆ ೧೧.೪೦ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಕನ್ಫೈನ್ಮೆಂಟ್ನಲ್ಲಿ ದುಡಿಯುತ್ತಿದ್ದವರು ಅಗ್ನಿ ಅವಘಡದಿಂದ ಪಾರಾಗಲು ಹೊರಬರಲು ಪ್ರಯತ್ನಿಸುತ್ತಿದ್ದಂತೆ ದಟ್ಟ ಹೊಗೆ ಹಬ್ಬಿದ ಕಾರಣ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೆಲವರ ಮೃತದೇಹಗಳು ಗುರುತು ಸಿಗಲಾರದಷ್ಟು ಕರಟಿಹೋಗಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹತ್ತು ನಿಮಿಷದೊಳಗೆ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಅದಾಗಲೇ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದರು ಎಂದು ಸುದ್ದಿಮೂಲ ತಿಳಿಸಿದೆ.