ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಮಾ.6: ‘ನಮ ತುಳುವೆರು ದುಬೈ’ಯವರ ಆಶ್ರಯದಲ್ಲಿ ಮಾ.4ರ ಶುಕ್ರವಾರದಂದು ದುಬೈಯ ಇಂಡಿಯನ್ ಹೈಸ್ಕೂಲ್ನ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಕಾಪು ರಂಗ ತರಂಗ ತಂಡದ ‘ದುಂಬು ಪಿರ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಲೀಲಾಧರ ಶೆಟ್ಟಿ ಸಾರಥ್ಯದ ಕಾಪು ರಂಗ ತರಂಗ ತಂಡದ ಕಲಾವಿದರ ನಾಟಕ ವೀಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸಂದೀಪ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿಯವರ ಹಾಸ್ಯವನ್ನು ಸವಿಯಲೆಂದೇ ಜನ ನಾಟಕಕ್ಕೆ ಆಗಮಿಸಿದ್ದರು.
ಜನರ ನಿರೀಕ್ಷೆಯನ್ನು ಸಂದೀಪ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಹುಸಿಮಾಡಲಿಲ್ಲಿ. ಒಂದು ಕುಟುಂಬದ ವೃದ್ಧ ತಂದೆ-ತಾಯಿಯ ಮಧ್ಯೆ ನಡೆಯುವ ಮನಕಲಕುವಂಥ ಕಥೆಯನ್ನು ನಿರ್ದೇಶಕರು ಚೆನ್ನಾಗಿಯೇ ಕಟ್ಟಿಕೊಟ್ಟಿದ್ದಾರೆ. ಇದರ ಮಧ್ಯೆ ಹಾಸ್ಯದ ಸನ್ನಿವೇಶವಂತೂ ಜನರನ್ನು ಹಿಡಿದಿಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಂತೂ ನಿಜ. ರಂಗ ತರಂಗ ತಂಡದ ಕಲಾವಿದರು ಚೆನ್ನಾಗಿಯೇ ನಟಿಸುವ ಮೂಲಕ ತಮ್ಮ ಪಾತ್ರಗಳಿಗೆ ನ್ಯಾಯತುಂಬಿದ್ದಾರೆ.
ನಾಟಕ ಪ್ರದರ್ಶನಕ್ಕೂ ಮುನ್ನ ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ದುಬೈ ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿಗಳಾದ ಹರೀಶ್ ಬಂಗೇರಾ, ಮೋಹನ್ದಾಸ್ ಪೂಜಾರಿ, ಉಮೇಶ್ ಕುಕ್ಯಾನ್, ಫಾದರ್ ಫ್ರಾಂಕ್ಲಿನ್ ಡಿಸೋಜ, ಲೀಲಾಧರ ಶೆಟ್ಟಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಾಟಕ ನಿರ್ದೇಶಕ ಶಿವಪ್ರಕಾಶ್ ಪೂಂಜಾ, ಮೋಹನ್ದಾಸ್ ಪೂಜಾರಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು. ‘ನಮ ತುಳುವೆರು ದುಬೈ’ಯ ಶೋಧನ್ ಪ್ರಸಾದ್, ದೀಪಕ್, ಸೈಯದ್ ಅಜ್ಮಲ್ ಉಪಸ್ಥಿತರಿದ್ದರು.