ನವದೆಹಲಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಝಿಕಾ ವೈರಾಣು ರೋಗಕ್ಕೆ ಭಾರತದಲ್ಲಿ ಪರಿಣಾಮಕಾರಿ ನೈಸರ್ಗಿಕ ಔಷಧಿ ದೊರೆತಿದ್ದು, ಸೋಪ್ ಆಯಿಲ್ ತಯಾರಿಕೆಗೆ ಬಳಕೆ ಮಾಡಲಾಗುವ ಲೆಮನ್ ಗ್ರಾಸ್ (ನಿಂಬೆಹುಲ್ಲು) ನಲ್ಲಿರುವ ಔಷಧೀಯಗುಣಗಳು ಝಿಕಾ ವೈರಾಣುವನ್ನು ನಿಯಂತ್ರಿಸಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.
ಗರ್ಭಿಣಿ ಸ್ತ್ರೀಯರ ಮೇಲೆ ನೇರ ಪರಿಣಾಮ ಬೀರಬಲ್ಲ ಝಿಕಾ ವೈರಾಣು ರೋಗ ಹೊಟ್ಟೆಯಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಗರ್ಭಧಾರಣೆಯಲ್ಲಿ ಝಿಕಾ ವೈರಸ್ ಸೋಂಕು ಉಂಟಾದರೆ ಹುಟ್ಟುವ ಮಗುವಿನ ತಲೆ ಚಿಕ್ಕದಾಗಿ ಅಸಹಜ ಮಗುವಿನ ಜನನವಾಗುತ್ತದೆ. ಇದು ಮಗುವಿನ ಬುರುಡೆ ಮತ್ತು ಮಿದುಳಿನ ಬದಲಿಸಲಾಗದ ವಿರೂಪತೆಯಾಗಿರುತ್ತದೆ. ಹಾಗಾಗಿ ಸರ್ಕಾರ ಈ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ವಿತರಿಸುತ್ತಿರುವ ಮಡಿಲು ಕಿಟ್ ನಲ್ಲಿ ಸೊಳ್ಳೆ ನಿವಾರಕಗಳು ಮತ್ತು ಪ್ರಮುಖವಾಗಿ ಈ ನಿಂಬೆ ಹುಲ್ಲಿನ ತೈಲವನ್ನು ಕೂಡ ವಿತರಣೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಅಮೆರಿಕ ರಾಷ್ಟ್ರಗಳಲ್ಲಿ ವ್ಯಾಪಕ ಹರಡಿರುವ ಝಿಕಾ ವೈರಾಣು ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನಲೆಯಲ್ಲಿ ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿತ್ತು. ಅಲ್ಲದೆ ಝಿಕಾ ವೈರಾಣು ನಿಯಂತ್ರಣ ಔಷಧಿಗಾಗಿ ಇಂದಿಗೂ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಅತ್ತ WHO ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿರುವಂತೆಯೇ ಭಾರತ ಸರ್ಕಾರ ಕೂಡ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಅಲ್ಲದೆ ಝಿಕಾ ನಿಯಂತ್ರಕ ಔಷಧಿಗಳ ಸಂಶೋಧನೆಗೂ ಒತ್ತು ನೀಡಿತ್ತು.
ಇದರ ಪರಿಣಾಮವಾಗಿ ಇದೀಗ ಗರ್ಭಿಣಿಯರನ್ನು ಝಿಕಾ ವೈರಸ್ನಿಂದ ದೂರವಿರಿಸಲು ನೈಸರ್ಗಿಕ ನಿಂಬೆ ಹುಲ್ಲಿನ ತೈಲ ವಿತರಿಸಲು ಸರ್ಕಾರ ಮುಂದಾಗಿದೆ. ನಿಂಬೆ ಹುಲ್ಲು ತೈಲ ನೈಸರ್ಗಿಕವಾಗಿ ಸೊಳ್ಳೆ / ಕೀಟ ನಿವಾರಕ ರೀತಿ ವರ್ತಿಸುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ದುಬಾರಿ “ನಿಂಬೆಹುಲ್ಲು”, ಕೆಜಿಗೆ 1300 ರು.
ಇನ್ನು ಹೆಚ್ಚಾಗಿ ಸೋಪ್ ತಯಾರಿಕೆಯಲ್ಲಿ ಬಳಸುವ ಈ ನಿಂಬೆ ಹುಲ್ಲಿನ ತೈಲವನ್ನು ಗುಜರಾತ್ ಮೂಲದ ಕಂಪನಿಯಿಂದ ಕರ್ನಾಟಕ ಸೋಪ್ ಆಂಡ್ ಡಿಟರ್ಜಂಟ್ ಲಿ. ಖರೀದಿ ಮಾಡುತ್ತಿದೆ. ಸರ್ಕಾರ ಆದೇಶ ಹೊರಡಿಸಿದರೆ ನಾವು ಹಂತಹಂತವಾಗಿ ನಿಂಬೆ ಹುಲ್ಲಿನ ತೈಲ ಪೂರೈಕೆ ಮಾಡುತ್ತೇವೆ. ಕೆ.ಜಿಗೆ 1200 ರಿಂದ 1300 ರು. ನೀಡಿ ನಿಂಬೆ ಹುಲ್ಲಿನ ತೈಲ ಖರೀದಿ ಮಾಡುತ್ತಿದ್ದೇವೆ ಎಂದು ಕೆಎಸ್ಡಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.