ದುಬೈ: ಕರಾವಳಿ ಭಾಗದಲ್ಲಿ ನಿರುದ್ಯೋಗವನ್ನು ಹೋಗಲಾಡಿಸಿ, ವಿದ್ಯಾವಂತರಿಗೆ ಉದ್ಯೋಗವನ್ನು ದೊರಕಿಸಿಕೊಡುವ ಉದ್ದೇಶದಿಂದ ‘ಮಂಗಳೂರು ಉದ್ಯೋಗ ಮೇಳ-2015’ನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗಲ್ಫ್ನಲ್ಲಿರುವ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸುವಂತೆ ಅರಣ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಆಹ್ವಾನ ನೀಡಿದ್ದಾರೆ.
ನವಂಬರ್ 19 ಹಾಗೂ 20ರಂದು ಮಂಗಳೂರಿನಲ್ಲಿ ನಡೆಯಲಿರುವ ‘ಮಂಗಳೂರು ಉದ್ಯೋಗ ಮೇಳ-2015’ರ ಹಿನ್ನೆಲೆಯಲ್ಲಿ ದುಬೈಯ ಹೊಟೇಲ್ ರೆಡಿಸ್ಸನ್ನಲ್ಲಿ ಗುರುವಾರ ಗಲ್ಫ್ನಲ್ಲಿರುವ ಕರಾವಳಿ ಪ್ರದೇಶದ ಉದ್ಯಮಿಗಳ ಜೊತೆ ಆಯೋಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಭೆಯಲ್ಲಿ ಕನ್ನಡ, ತುಳು, ಇಂಗ್ಲಿಷ್, ಬ್ಯಾರಿ, ಕೊಂಕಣಿ ಹೀಗೆ ವಿವಿಧ ಭಾಷೆಗಳಲ್ಲಿ ಮಾತನಾಡಿದ ಚಿವ ರಮನಾಥ ರೈ, ಎಲ್ಲಾ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ಮೂಲಕ ನಿರುದ್ಯೋಗದ ನಿರ್ಮೂಲನೆಗೆ ಮುಂದಾಗಿರುವ ಸರಕಾರದ ಜೊತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ವರ್ಷದಿಂದ ವರ್ಷಕ್ಕೆ ಗಲ್ಫ್ ಪ್ರದೇಶಗಳು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿರುವುದರಿಂದ ಇಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಮಂಗಳೂರಿನಲ್ಲಿ ಪ್ರತೀ ವರ್ಷ 1 ಲಕ್ಷ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ನಮ್ಮಲ್ಲಿ ಪ್ರಚಂಡ ಸಾಮರ್ಥ್ಯದ ಅಸಂಖ್ಯಾತ ಪ್ರತಿಭಾನ್ವಿತರಿದ್ದಾರೆ. ಮಂಗಳೂರು ಮಾನವ ಸಂಪನ್ಮೂಲಕ್ಕೆ ಹೆಸರಾಗಿದ್ದು, ನಾವಿದಕ್ಕೆ ಹೆಮ್ಮೆ ಪಡಬೇಕಿದೆ. ನಮ್ಮ ಯುವಕರು ಸುಲಭವಾಗಿ ಉದ್ಯೋಗ ಪಡೆಯುವಂತೆ ನಾವೊಂದು ವೇದಿಕೆ ಸೃಷ್ಟಿಸಿಕೊಡಬೇಕಿದೆ. ಆ ಕಾರಣದಿಂದ ನಾವು ಈ ಎರಡು ದಿನಗಳ ಉದ್ಯೇಗ ಮೇಳವನ್ನು ಆಯೋಜಿಸಿದ್ದೇವೆ. ಇದು ನಮ್ಮ ಜಿಲ್ಲೆಯ ಸಚಿವರಾದ ಬಿ.ರಮನಾಥ ರೈಯವರ ಕನಸಿನ ಕೂಸಾಗಿದೆ ಎಂದರು.
ಉದ್ಯೋಗ ಮೇಳ ಮಂಗಳೂರಿಗರಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ಇಡೀ ಕರಾವಳಿ ಪ್ರದೇಶಕ್ಕೆ ಆದ್ಯತೆ ನೀಡಲಾಗಿದೆ. ರಾಜ್ಯಾದ್ಯಂತ, ಅಷ್ಟೇ ಏಕೆ ಇತರ ರಾಜ್ಯಗಳಿಂದಲೂ ಜನರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಗಲ್ಫ್ ರಾಷ್ಟ್ರಗಳಲ್ಲಿರುವ ಕಂಪೆನಿಗಳು ಸಹ ಈ ಮೇಳದಲ್ಲಿ ಭಾಗವಹಿಸಬೇಕು. ಇದಕ್ಕೆ ಯಾವುದೇ ಶುಲ್ಕಗಳಿಲ್ಲ. ಅಷ್ಟೇ ಅಲ್ಲದೆ, ವಿದೇಶದಿಂದ ಆಗಮಿಸುವ ಕಂಪೆನಿಯ ಪ್ರತಿನಿಧಿಗಳಿಗೆ ಆಹಾರ, ವಸತಿ ಮತ್ತು ಸಾರಿಗೆ ವ್ಯವಸ್ಥೆಯನ್ನೂ ಸಹ ಜಿಲ್ಲಾಡಳಿತದ ವತಿಯಿಂದ ನೀಡಲಾಗುವುದು ಎಂದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಪರಿಸರ ಇಲಾಖೆಯ ಕಾರ್ಯದರ್ಶಿ ರಾಮಚಂದ್ರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಸಿದ್ದಪ್ಪ ಶಾಂತಪ್ಪ, ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಸದಸ್ಯ ಡಾ.ಯು.ಟಿ.ಇಫ್ತಿಕಾರ್ ಹಾಗೂ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಚೆಯರ್ಮೆನ್ ಪಿಯುಸ್ ರೋಡ್ರಿಗಸ್ ಸಚಿವರ ನಿಯೋಗದಲ್ಲಿದ್ದರು.
ಈ ಮಧ್ಯೆ ವಿವಿಧ ಕಂಪೆನಿಗಳ ಸಿಇಒಗಳೊಂದಿಗೆ ಹಾಗೂ ಪ್ರತಿನಿಧಿಗಳೊಂದಿಗೆ ನಡೆಸಿದ ಮಾತುಕತೆ ವೇಳೆ ಮೇಳಕ್ಕೆ ಸಂಬಂಧಿಸಿದಂತೆ ಹಲವು ಸಲಹೆ ಸೂಚನೆಗಳು ತೇಲಿ ಬಂದವು. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೂಡಿಕೆ ಮೇಳವೊಂದನ್ನು ಆಯೋಜಿಸಲು ಉದ್ಯಮಿಗಳು ಒತ್ತಾಯಿಸಿದರು.
ಸಭೆಯಲ್ಲಿ ಕರಾವಳಿ ಪ್ರದೇಶದ ಕೆಲ ಕಂಪೆನಿಗಳು ಮೇಳದಲ್ಲಿ ಭಾಗವಹಿಸುವುದಾಗಿ ಘೋಷಿಸಿದವು. ಸಭೆಯಲ್ಲಿ ಯುಎಒ ಮತ್ತು ಸೌದಿ ಅರೇಬಿಯಾದ ಸುಮಾರು 75 ಕಂಪೆನಿ ನಿಯೋಗಗಳು ಹಾಜರಿದ್ದವು.