ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ:ಅಶೋಕ್ ಬೆಳ್ಮೆಣ್-ಉದಯ್ ದುಬೈ
ದುಬೈ, ಅ.10: ತುಳುನಾಡಿನ ಸಾಂಸ್ಕೃತಿಕ ವೈಭವ, ಪರಂಪರೆ, ಭಾಷೆಯ ಸೊಗಡನ್ನು ನೆನಪಿಸುವಂಥ ಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಮಾಯಾನಗರಿ ದುಬೈ. ಯುಎಇ ತುಳುಕೂಟ ತನ್ನ ರಜತಮಹಬೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸುಸಂದರ್ಭದಲ್ಲಿ ಶುಕ್ರವಾರ ಸಂಜೆ ದುಬೈಯ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ರಿಂಕ್ ಸಭಾಂಗಣದಲ್ಲ್ಲಿ ಆಯೋಜಿಸಿದ್ದ ‘ತುಳು ಪರ್ಬ’ ಕಾರ್ಯಕ್ರಮವು ತುಳು ಮಣ್ಣಿನ ವೈಭವವನ್ನು ತೆರೆದಿಟ್ಟಿತು.
ಹಾಸ್ಯ, ಜಾದೂ, ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ, ಸೌಹರ್ದಾ ಪರಂಪರೆಯನ್ನು ನೆನಪಿಸುವಂಥ ಮೆರವಣಿಗೆ, ತಿಂಡಿ-ತಿನಸುಗಳು, ಆಟೋಟ ಸ್ಪರ್ಧೆಗಳು ತುಳು ಮಣ್ಣಿನ ಕಮ್ಮನೆಯನ್ನು ಕಾಂಕ್ರಿಟ್ನಗರಿ ದುಬೈಯಲ್ಲಿ ಪಸರಿಸುವಂಥೆ ಮಾಡಿತು.
ಮನ ತಣಿಸಿದ ಸಾಂಸ್ಕೃತಿಕ ಕಾರ್ಯಕ್ರಮ
ತುಳುರಂಗಭೂಮಿಯಲ್ಲಿ ತೆಳಿಕೆದ ಬೊಳ್ಳಿ ಎಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್ರ ತಂಡದವರಿಂದ ನಡೆದ ಹಾಸ್ಯ ಪ್ರಹಸನ ಸೇರಿದ ತುಳು ಭಾಷಿಗರನ್ನು ನಗೆಗಡಲಿಲ್ಲಿ ತೇಳುವಂತೆ ಮಾಡಿತು.
ಹಾಸ್ಯ ದಿಗ್ಗಜರೆಂದೇ ಖ್ಯಾತರಾಗಿರುವ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ಅರವಿಂದ್ ಬೋಳಾರ್, ಸತೀಶ್ ಬಂದಲೆ, ಸುನಿಲ್ ಚಿತ್ರಾಪುರ, ಜ್ಯೋತಿಶ್ ಶೆಟ್ಟಿಯವರು ತಮ್ಮ ಎಂದಿನ ಶೈಲಿಯಲ್ಲಿ ಹಾಸ್ಯಚಟಾಕಿಗಳನ್ನು ಸಿಡಿಸಿ, ಜನರಿಗೆ ಮುದನೀಡಿದರು.
‘ವಿಸ್ಮಯ’ ಮಾಡಿದ ಕುದ್ರೋಳಿ ಗಣೇಶ್ರ ಜಾದೂ ಪ್ರದರ್ಶನ
ಖ್ಯಾತ ಜಾದೂಗಾರನೆಂದೇ ಹೆಸರುವಾಸಿಯಾಗಿರುವ ಕುದ್ರೋಳಿ ಗಣೇಶ್ರವರ ವಿಸ್ಮಯ ಜಾದೂವಂತೂ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.
ಹಲವಾರು ವಿಸ್ಮಯ ಜಾದೂಗಳನ್ನು ಪ್ರದರ್ಶನದ ಮುಂದಿಟ್ಟ ಕುದ್ರೋಳಿ ಗಣೇಶ್, ನಾವು ಮಾಡುತ್ತಿರುವುದು ಜಾದೂವೇ ವಿನಃ ಮಾಟ-ಮಂತ್ರವಲ್ಲ ಎಂದರು. ವಿಜ್ಞಾನ ಹಾಗೂ ಕೈಚಳಕವನ್ನು ಪ್ರಮುಖ ತಂತ್ರವಾಗಿ ಮಾಡಿಕೊಂಡು ಜಾದ ಮಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ತುಳುನಾಡಿನ ಜಾನಪದ ಕಂಪನ್ನು ಬೀರಿದ ಜಸ್ಮಿತಾ ವಿವೇಕ್
ತುಳುನಾಡಿನ ಚೆನ್ನು ಕುಣಿತ, ಕಂದೀಲು ಕುಣಿತ, ಹುಲಿವೇಷ, ಯಕ್ಷಗಾನ ಸೇರಿದಂತೆ ವಿವಿಧ ಜಾನಪದ ನೃತ್ಯ ರೂಪಕಗಳನ್ನು ಮುಂದಿಟ್ಟ ಜಸ್ಮಿತಾ ವಿವೇಕ್ ತಂಡ ಹಲವರ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಖ್ಯಾತ ಪ್ರಶಾಂತ್ ದೇವಾಡಿಗ ತಂಡದವರ ಸ್ಯಾಕ್ಸೊಫೋನ್ ವಾದನವು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತು.ಜಯರಾಂ ನಿರ್ದೇಶನದಲ್ಲಿ ಅಪ್ಪೆನ ತ್ಯಾಗ ಪ್ರಹಸನ ಮೂಡಿಬಂತು.
ತುಳುನಾಡಿನ ಸೌಹಾರ್ದತೆಗೆ ಸಾಕ್ಷಿಯಾದ ವೈಭವದ ಮೆರವಣಿಗೆ
ಸಮಾರಂಭದ ಮಧ್ಯೆ ವೈಭವಪೂರಿತ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಭಾರತ ಮಾತೆಯ ತೇರು, ಮಂಗಳೂರು ಕೊಂಕಣ್ಸ್ನವರ ಮದರ್ ತೆರೆಸಾ, ದುಬೈ ಬ್ಯಾರೀಸ್ ಕಲ್ಚರಲ್ ಫಾರಂನವರ ಟಿಪ್ಪು ಸುಲ್ತಾನ್, ಬಿಲ್ಲವಾಸ್ನವರ ಕೋಟಿ-ಚೆನ್ನಯ್ಯರ ವೇಷಾಧಾರಿ, ದುಬೈ ಯಕ್ಷಮಿತ್ರರ ಯಕ್ಷಗಾನ ಕಲಾವಿದರ ದಂಡು, ಹುಲಿವೇಷ, ಸ್ಯಾಕ್ಸೊಫೋನ್ ವಾದಕರು, ಚಂಡೆ-ವಾದ್ಯದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತುಳುನಾಡಿನ ಸೌಹಾರ್ದತಾ ಪರಂಪರೆಯನ್ನು ಬಿಂಬಿಸುವಂಥ ಮೆರವಣಿಗೆ ಸಮಸ್ಥ ತುಳುವರನ್ನು ಅಕರ್ಷಿಸಿತ್ತು.
ಸಮಾರಂಭಕ್ಕೆ ಚಾಲನೆ ನೀಡಿದ ಡಾ.ವೀರೇಂದ್ರ ಹೆಗ್ಗಡೆ
ದೇಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆಯವರು, ತುಳುನಾಡಿನ ಸಮಗ್ರ ಅಭಿವೃದ್ಧಿಯಿಂದ ಜನ ನೆಮ್ಮದಿ ಕಾಣಬಹುದು. ಈ ನಿಟ್ಟಿನಲ್ಲಿ ನಾವು ನಿನ್ನೆ-ಇಂದು-ನಾಳೆಯ ಬಗ್ಗೆ ಬಹಳ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ನೇತ್ರಾವತಿ ನದಿ ತಿರುವು ಯೋಜನೆಯ ಕುರಿತು ವೈಜ್ಞಾಣಿಕ ಪರಿಶೀಲನೆ ನಡೆಯಬೇಕು ಎಂಬುದನ್ನು ಮತ್ತೆ ಒತ್ತಿಹೇಳಿದ ಹೆಗ್ಗಡೆಯವರು, ನಾವು ಇತರರಿಗೆ ಹಣದ ಸಹಾಯ-ಸಹಕಾರ ನೀಡುವ ಬದಲು ಅವರು ಮುಂದೆ ಜೀವನದದ್ದಕ್ಕೂ ಬದುಕು ಸಾಗಿಸುವಂಥ ಉದ್ಯೋಗದ ಅವಕಾಶವನ್ನು ಸೃಷ್ಟಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ದುಬೈಯ ಖ್ಯಾತ ಉದ್ಯಮಿ, ಎನ್ಎಂಸಿಯ ಡಾ.ಬಿ.ಆರ್.ಶೆಟ್ಟಿ, ತುಳುನಾಡು ಸೇರಿದಂತೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ತನ್ನಲ್ಲಿ ಆಗುವಂಥ ಎಲ್ಲ ರೀತಿಯ ಸಹಾಯ-ಸಹಕಾರವನ್ನು ನೀಡಲು ತಾನು ಸದಾ ಸಿದ್ಧ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ರೋನಾಲ್ಡ್ ಕೊಲಾಸೋ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಜಾನಕಿ ಬ್ರಹ್ಮಾವರ, ಮಾಜಿ ಸಚಿವ ನಾಗರಾಜ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿ, ಜಯಕೃಷ್ಣ ಪರಿಸರ ಸಮಿತಿಯ ಜಯ ಕೃಷ್ಣ ಶೆಟ್ಟಿ, ದೈಜಿವರ್ಲ್ಡ್ನ ವಾಲ್ಡರ್ ನಂದಳಿಕೆ, ದೇವದಾಸ್ ಕಾಪಿಕಾಡ್, ಗಿರೀಶ್ ಶೆಟ್ಟಿ ಉಪಸ್ಥಿತರಿದ್ದರು. ಯುಎಇ ತುಳುಕೂಟದ ಅಧ್ಯಕ್ಷ ಸಿ.ಆರ್.ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರಂಭದಿಂದ ಕೊನೆಯವರೆಗೆ ದಯಾನಂದ್ ಕತ್ತಲ್ಸರ್ರವರು ಮಾಡಿದ ನಿರೂಪಣೆ ಕೂಡಾ ಮೆಚ್ಚುಗೆಗೆ ಪಾತ್ರವಾಯಿತು.
1 Comment
Event is very well covered by kannadigaworld Refreshed the Memories of this Fabalous Event which we witnessed on Friday
Well Done Tulu Parba Organisers