ಬೈಂದೂರು, ಜೂ, 19 : ಇಲ್ಲಿನ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾದ ಅಕ್ಷತಾಳ ಕೊಲೆ ಪ್ರಕರಣದ ಹಿನ್ನೆಲೆ ಎರಡನೇ ದಿನವಾದ ಶುಕ್ರವಾರ ಎನ್.ಎಸ್.ಯು.ಐ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಾರೀ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳು ಕಾಲೇಜಿನಿಂದ ತರಗತಿ ಬಹಿಷ್ಕರಿಸಿ, ಮೆರವಣಿಗೆಯ ಮೂಲಕ ಇಲ್ಲಿನ ಗಾಂಧಿ ಮೈದಾನದಲ್ಲಿ 1 ಗಂಟೆಯ ಕಾಲ ಧರಣಿ ನಡೆಸಿ ಅಲ್ಲಿಂದ ತಹಶೀಲ್ದಾರರ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ನಂತರ ಮೆರವಣಿಗೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮುಖಾಂತರ ಬೈಂದೂರು ಆರಕ್ಷಕ ಠಾಣೆಗೆ ಎಲ್ಲಾ ವಿದ್ಯಾರ್ಥಿಗಳು ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಠಾಣಾಧಿಕಾರಿಯೊಂದಿಗೆ ಮಾತಿಗಿಳಿದ ವಿದ್ಯಾರ್ಥಿಗಳು ನಮಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಕೊಡಬೇಕು. ಹಾಗೇ ಅಕ್ಷತಾಳ ಕೊಲೆ ಪ್ರಕರಣವನ್ನು ಪೊಲೀಸರು ಮತ್ತು ಸರಕಾರ ಗಂಭೀರವಾಗಿ ತೆಗೆದುಕೊಂಡು ಆರೋಪಿಯನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕು. ಹಾಗೇ ಅಕ್ಷತಾಳ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಇಲ್ಲವಾದಲ್ಲಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ತಿಳಿಸಿದರು. ಶಂಕಿತ 6 ಆರೋಪಿಗಳ ವಿಚಾರಣೆಗೊಳಪಡಿಸಲಾಗಿದೆ.