ಬಹರೈನ್ ;ದ್ವೀಪದ ಬಲಿಷ್ಠ ಕ್ರಿಕೆಟ್ ತಂಡವಾಗಿ ರೂಪುಗೊಂಡಿರುವ ಎನೊಕ್ ರಾಯಲ್ಸ್ ಕ್ರಿಕೆಟ್ ತಂಡವು ತನ್ನ ಐದನೇ ವಾರ್ಷಿಕೋತ್ಸವವನ್ನು ಸ್ಥಳೀಯ ಪಪಿಲೋನ್ ರೆಸ್ಟೋರೆಂಟಿನ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿತು .
ದ್ವೀಪದ ಕನ್ನಡಿಗರ ಹೆಮ್ಮೆಯ ಕ್ರಿಕೆಟ್ ತಂಡವಾದ ಎನೋಕ್ ಕರ್ನಾಟಕ ರಾಯಲ್ಸ್ 2010 ರಲ್ಲಿ ಶ್ರೀಯುತ ಡಿ . ರಮೇಶ್ ರವರ ಕನಸಿನ ಕೂಸಾಗಿ ಅಸ್ತಿತ್ವಕ್ಕೆ ಬಂದಿದ್ದು ,ಅಸ್ತಿತ್ವಕ್ಕೆ ಬಂದ ಸ್ವಲ್ಪ ಸಮಯದಲ್ಲೇ ದ್ವೀಪದ ಬಲಿಷ್ಠ ತಂಡವಾಗಿ ರೂಪುಗೊಂಡು ಅನೇಕ ಪಂದ್ಯಾಟಗಳನ್ನು ಜಯಿಸಿ ,ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದೆ . ತಂಡದ ಎಲ್ಲಾ ಆಟಗಾರಾರೂ ಕನ್ನಡಿಗರಾಗಿರುವುದು ಈ ತಂಡದ ವಿಶೇಷತೆಯಾಗಿದೆ . ತಂಡದ ಆಟಗಾರರು ಹಾಗು ಪ್ರೋತ್ಸಾಹಗಾರರು ತಂಡದ ಐದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ತಂಡದ ಐದು ವರುಷಗಳ ಯಶಸ್ವೀ ಜೈತಯಾತ್ರೆಯ ಸಂಭ್ರಮವನ್ನು ಪರಸ್ಪರ ಹಂಚಿಕೊಂಡರು .
ತಂಡದ ಮಾಲಿಕರಾದ ಶ್ರೀ ಡಿ . ರಮೇಶ್ ,ತರಬೇತುದಾರ ರಾಜೇಶ್ ಮಚಾಡೋ ,ವ್ಯವಸ್ಥಾಪಕ ಅಶೋಕ್ ಕಟೀಲ್ ,ತಂಡದ ನಾಯಕ ಪ್ರದೀಪ್ ಶೆಟ್ಟಿ ಮತ್ತು ತಂಡದ ಪ್ರಾಯೋಜಕರಾದ ಎ . ಎ . ಬಿನ್ ಹಿಂದಿಯ ವಿತ್ತ ಪ್ರಭಂದಕರಾದ ಶ್ರೀ ಸಂತೋಷ್ ಕರ್ಕೇರ , ಪ್ರಭಂದಕರಾದ ಶ್ರೀ ಥಾಮಸ್ ಹಾಗು ಇನ್ನಿತರ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಲ್ಲರೂ ಸೇರಿ ಕೇಕ್ ಕತ್ತರಿಸಿ ಪರಸ್ಪರ ಹಂಚಿಕೂಳುವುದರೊಂದಿಗೆ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಲಾಯಿತು . ಇದೇ ಸಂಧರ್ಭದಲ್ಲಿ ತಂಡವು ಇತ್ತೇಚೆಗೆ ವಿಜೇತರಾದ ವಿಜೇತ ಟ್ರೋಫಿಯನ್ನು ಪ್ರಾಯೋಜಕರಾದ ಎ. ಎ . ಬಿನ್ ಹಿಂದಿಯ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು .
ಶ್ರೀಯುತರಾದ ಅಮರನಾಥ್ ರೈ ,ಮೌಸಮ್ ಷಾ ,ಶ್ರೀಮತಿ ಉಷಾ ಮಹೇಶ್ ಮುಂತಾದವರು ಕನ್ನಡ ,ಹಿಂದಿ ಹಾಡುಗಳನ್ನು ಹಾಡಿ ನೆರೆದವರನ್ನು ರಂಜಿಸಿದರು . ಶ್ರೀ ಸಂತೋಷ್ ಕರ್ಕೇರ ,ಥಾಮಸ್ ,ರಾಜೀವ್ ಮೆನನ್ ಮುಂತಾದವರು ಮಾತನಾಡಿ ತಂಡಕ್ಕೆ ಶುಭ ಹಾರೈಸಿದರು . ಶ್ರೀ ಪ್ರದೀಪ್ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಚಿತ್ರ -ವರದಿ-ಕಮಲಾಕ್ಷ ಅಮೀನ್ .