ಕರಾವಳಿ

ಕರ್ನಾಟಕ ತಮಿಳ್ನಾಡು ಆಸ್ಥಾನ ನೃತ್ಯಪರಂಪರೆ ಕಲಿಕೆಯಲ್ಲಿ ಹೊಸ ಪ್ರಯತ್ನ : ಶಾಸ್ತ್ರಪ್ರಯೋಗ ನೃತ್ಯಚಿಂತನ ಕಾರ್ಯಾಗಾರ

Pinterest LinkedIn Tumblr

CAM00150

ನೂಪುರ ಭ್ರಮರಿ (ರಿ.) ಮತ್ತು ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ(ರಿ.)ಯ ಸಹಯೋಗದಲ್ಲಿ ನಡೆಯುತ್ತಿರುವ ವಿನೂತನ ಮಾರ್ಗದರ್ಶೀ ಪ್ರಯತ್ನಗಳ ಪೈಕಿ ಈ ವರುಷ ಕರ್ನಾಟಕ-ತಮಿಳ್ನಾಡು ಆಸ್ಥಾನ ಮತ್ತು ಆಲಯ ನೃತ್ಯಪ್ರಂಪರೆಯಲ್ಲಿ ಚಾಲ್ತಿಯಲ್ಲಿದ್ದ ಹಳೆಯ ನೃತ್ಯಬಂಧಗಳ ಪುನರ್ ನವೀಕರಣವೂ ಒಂದಾಗಿದೆ. ಈ ಕಾಲಕ್ಕೆ ಮರೆಯಾಗಿರುವ ರಾಜಾಶ್ರಯ ಮತ್ತು ಆಲಯ ನೃತ್ಯಪದ್ಧತಿಗಳಲ್ಲಿ ಬೆಳೆದುಬಂದ ವಿಶೇಷವಾದ ಪಾರಂಪರಿಕ ನೃತ್ಯಬಂಧಗಳು-ಸ್ವರಸರಿ, ವಳವೂರು ತೋಡಯಂ, ನಾಂದೀ ಸ್ವನ, ರಾಗಾನುರಾಗತಿನೃತ್ತ, ಉಪೋದ್ಘಾತ ಬಂಧ, ಸ್ವರಜತಿ, ನಾಟ್ಯಶಾಸ್ತ್ರಾಧಾರಿತ ಕೌತ್ವ-ಶಬ್ದ-ಶ್ಲೋಕಗಳು ಇವುಗಳ ಪೈಕಿ ಪ್ರಮುಖವೆನಿಸಿವೆ. ಈ ವಿಶೇಷ ನೃತ್ಯಬಂಧಗಳ ಸಂಶೋಧನೆ, ಪುನರ್ ನವೀಕರಣಕ್ಕೆ ಪೂರಕವಾಗಿ ಇದೇ ಮೇ 25, 26, 2015ರಂದು ಪುತ್ತೂರಿನಲ್ಲಿ ಎರಡು ದಿನಗಳ ರಾಜ್ಯಮಟ್ಟದ ಶಾಸ್ತ್ರ ಪ್ರಯೋಗ ನೃತ್ಯಚಿಂತನ ಎಂಬ ಕಾರ್ಯಾಗಾರ ನಡೆಯಲಿದೆ. ಶಾಸ್ತ್ರ ಮತ್ತು ಪ್ರಯೋಗ ತರಗತಿಗಳೆರಡನ್ನೂ ಇದಕ್ಕಾಗಿ ವಿನ್ಯಾಸ ಮಾಡಲಾಗಿದ್ದು; ಅಭ್ಯರ್ಥಿಗಳ ವಯಸ್ಸು ಮತ್ತು ಅರ್ಹತೆಗಳನ್ನಾಧರಿಸಿ ತಂಡಗಳ ವಿಭಾಗದಲ್ಲಿ ಕಲಿಕೆಯನ್ನು ನಡೆಸಲಾಗುವುದು. ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.

ಸ್ಥಳ : ಕಲಾಶ್ರಯ, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ,ದರ್ಬೆ, ಪುತ್ತೂರು
ಶುಲ್ಕ : 1400 ರೂಗಳು
ಆಸಕ್ತರು ಸಂಪರ್ಕಿಸಿ : 9964140927 ಅಥವಾ www.noopurabhramari.com
ಭರತನಾಟ್ಯದ ಅಲರಿಪ್ಪುವಿನಿಂದ ಮೊದಲ್ಗೊಂಡು ತಿಲ್ಲಾನದ ವರೆಗೆ ಸಾಗುವ ಎಂದಿನ ಮಾರ್ಗಪದ್ಧತಿಯ ನಡುವೆಯೇ ಈ ಮಾದರಿಯ ಹಳೆಯ ಸಂಪ್ರದಾಯದ ಪುನರ್ ಶೋಧನೆ ಮತ್ತು ಅವುಗಳ ಸೃಷ್ಟಿಶೀಲ ಪ್ರಯೋಗ ಇದಾಗಿದೆ. ಕಳೆದ ವರುಷ ನಾಟ್ಯಶಾಸ್ತ್ರದ ಆಧಾರದಲ್ಲಿ ನಾಟ್ಯಚಿಂತನ ಎಂಬ ಕಾರ್ಯಕ್ರಮವೂ ಈ ಎರಡು ಸಂಸ್ಥೆಗಳ ಸಹಯೋಗದಲ್ಲಿ ಕರಾವಳೀಯಲ್ಲೇ ಮೊದಲ ಬಾರಿಗೆ ಆಯೋಝನೆಗೊಂಡು ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು.

ಭರತನ ನಾಟ್ಯಶಾಸ್ತ್ರ-ನಟುವಾಂಗದ ಕಲಿಕೆಗೂ ಅವಕಾಶ
ಕರ್ನಾಟಕದಲ್ಲಿ ಭರತನ ನಾಟ್ಯಶಾಸ್ತ್ರದ ಕುರಿತ ತರಬೇತಿಗಳು ಇಂದಿಗೆ ವಿಶ್ವವಿದ್ಯಾನಿಲಯದ ತರಗತಿಗಳಲ್ಲೂ ನಡೆಯುವುದಿಲ್ಲ. ಜೊತೆಗೆ ಭಾರತೀಯ ಕಲೆಗಳೆಲ್ಲದಕ್ಕೂ ತಾಯಿಬೇರಾಗಿರುವ ಭರತನ ನಾಟ್ಯಶಾಸ್ತ್ರದ ಕಬ್ಬಿಣದ ಕಡಲೆಯಂತಿರುವ ಬೃಹತ್ ಸಂಪುಟಗಳನ್ನು ಓದಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದೆಂದರೆ ಅಷ್ಟು ಸುಲಭವೂ ಅಲ್ಲ. ಇದರಿಂದಾಗಿ ನೃತ್ಯಾಸಕ್ತರಿಗೆ, ಅಧ್ಯಯನದ ಅಪೇಕ್ಷೆ ಉಳ್ಳವರಿಗೆ ಸಾಕಷ್ಟು ಹಿನ್ನಡೆಯೂ ಆಗುತ್ತಲಿದೆ. ಜೊತೆಗೆ ನಾಟ್ಯಶಾಸ್ತ್ರದ ಬಗ್ಗೆ ಅಲ್ಲಲ್ಲಿ ಮಿಂಚಿ ಮರೆಯಾಗುವ ಉಪನ್ಯಾಸಗಳು ಸರ್ವರಿಗೂ ಸಕಾಲಕ್ಕೆ ದೊರೆಯುವುದೂ ಇಲ್ಲ.

ಇದನ್ನು ಗಮನಿಸಿದ ನೃತ್ಯ ಸಂಶೋಧನೆ, ಅಧ್ಯಯನ, ದಾಖಲೀಕರಣಕ್ಕೆ ಸಂಬಂಧಿಸಿದಂತೆ ದುಡಿಯುತ್ತಿರುವ ಹಲವು ಪ್ರಥಮಗಳ ರೂವಾರಿ ನೂಪುರ ಭ್ರಮರಿ ಸಂಸ್ಥೆಯು ಭರತನ ನಾಟ್ಯಶಾಸ್ತ್ರದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ (ಥಿಯರಿ+ ಪ್ರಾಕ್ಟಿಕಲ್) ಸರ್ಟಿಫಿಕೇಟ್ ಕೋರ್ಸ್ ತರಗತಿಗಳನ್ನು ಆರು ತಿಂಗಳಿನ ಹಿಂದೆ ಆರಂಭಿಸಿದೆ. ಇದು ಶಾಸ್ತ್ರೀಯ-ಜಾನಪದವೆಂಬ ಬೇಧವಿಲ್ಲದೆ ವಿವಿಧ ಕಲಾವಿಭಾಗದ ಅಭ್ಯರ್ಥಿಗಳಿಗೆ ಅಂದರೆ ಸಬ್ ಜೂನಿಯರ್ ಹಂತದಿಂದ ಜೂನಿಯರ್, ಸೀನಿಯರ್, ವಿದ್ವತ್, ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕಲಾವಿದರಿಗಾಗಿ ಇದು ಹಲವು ಹಂತಗಳಲ್ಲಿ ವಿಭಾಗೀಕರಿಸಲ್ಪಟ್ಟಿದ್ದು ನಾಟ್ಯಶಾಸ್ತ್ರದ ಸಂಪೂರ್ಣ ಅಧ್ಯಯನ, ಕರಣ/ಚಾರಿಗಳ ಕಲಿಕೆಯನ್ನು ಒಳಗೊಂಡಿದೆ. ಭರತನಾಟ್ಯವಷ್ಟೇ ಅಲ್ಲದೆ, ಯಕ್ಷಗಾನ, ಜಾನಪದ ಕ್ಷೇತ್ರಗಳ ಸಹಿತ ವಿವಿಧ ಬಗೆಯ ನೃತ್ಯ, ನಾಟ್ಯ, ಸಂಗೀತ, ವಾದ್ಯಸಂಗೀತದ ಆಸಕ್ತರು ಪರಿಶೀಲಿಸಿ ಪಡೆಯಬಹುದಾದ ಪ್ರಬುದ್ಧಮಟ್ಟದ ತರಗತಿಗಳು ಇದಾಗಿವೆ ಎಂಬುದು ಇಲ್ಲಿನ ಹೆಚ್ಚುಗಾರಿಕೆ.

ಅಂತೆಯೇ ಭರತನಾಟ್ಯದ ನಟ್ಟುವಾಂಗ (ತಾಳ ನುಡಿಸಾಣಿಕೆ) 6ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನೂ ತೆರೆಯಲಾಗಿದ್ದು; ಇದೂ ಕೂಡಾ ನೃತ್ಯಪರಂಪರೆಯ ಆಳ ಕಲಿಕೆಗೆ ವಿನೂತನವಾದ ಪ್ರಂತ್ನ. ಬಹುತೇಕ ನೃತ್ಯಶಾಲಾ-ಕಾಲೇಜುಗಳ ಸಂದರ್ಭಗಳಲ್ಲಿ, ನಟುವಾಂಗ ಕಲಿಯಲು ಸೂಕ್ತ ಕ್ರಮಗಳಾಗಲೀ, ಪಠ್ಯವಿಧಾನಗಳಾಗಲೀ ಇಲ್ಲದೆ ತಾಳ, ಲಯದ ಪರಿಚಯವೇ ಕಳೆಗುಂದುತ್ತಿರುವ ಹೊತ್ತಿಗೆ ಇದೊಂದು ಅಪೂರ್ವ ಅವಕಾಶವಾಗಿದೆ. ಇದರೊಂದಿಗೆ ಪ್ರದರ್ಶನ ಕಲೆಗಳ ಸಂಶೋಧನಾಸಕ್ತರಿಗಾಗಿ ಸಂಶೋಧನಾ ತರಗತಿಗಳನ್ನೂ, ಸಂಗೀತ ರ್ತನಾಕರ-ನರ್ತನ ನಿರ್ಣಯ-ಅಭಿನಯದರ್ಪಣ ಮುಂತಾದ ವಿವಿಧ ಶಾಸ್ತ್ರಗ್ರಂಥಗಳ ಅಧ್ಯಯನ ತರಗತಿ, ಸಾಂಸ್ಕೃತಿಕ ಪತ್ರಿಕೋದ್ಯಮದೆಡೆಗೆ ತೆರಳುವವರಿಗೆ ಕಲಿಕಾ ತರಗತಿಗಳು, ಪುರಾಣಕಥಾಮಾಲಿಕೆಗಳ ಪರಿಚಯ ತರಗತಿಗಳನ್ನೂ ನಡೆಸಲಾಗುತ್ತಿದೆ. ನೃತ್ಯದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಹಂತದ ತರಬೇತಿಯಲ್ಲಿ ಮಸುಕಾಗುತ್ತಿರುವ ಶಾಸ್ತ್ರವಿಭಾಗಕ್ಕೆಂದೇ ಪ್ರತ್ಯೇಕ ಕಲಿಕಾ ತರಗತಿಯೂ ನಡೆಯುತ್ತಲಿದೆ. ಈ ತರಗತಿಗಳೆಲ್ಲವೂ ಅಭ್ಯರ್ಥಿಗಳ ಆಯ್ಕೆಯ ಮೇರೆಗೆ ಒಂದೋ ಮುಖಾಮುಖಿ ಅಥವಾ ಆನ್‌ಲೈನ್‌ನಲ್ಲಿ ಅಭ್ಯರ್ಥಿಯ ಅನುಕೂಲಕ್ಕನುಸಾರವಾಗಿ ಹಮ್ಮಿಕೊಳ್ಳುವಂತದ್ದಾಗಿದ್ದು ; ಈಗಾಗಲೇ ಕರ್ನಾಟಕ, ಹೊರರಾಜ್ಯ ಮತ್ತು ವಿದೇಶಗಳಿಂದಲೂ ಆಸಕ್ತರು ಈ ವಿಶೇಷ ಕೋರ್ಸ್‌ಗಳನ್ನು ಕಲಿಯಲು ಬರುತ್ತಿದ್ದಾರೆ. ಅಂತೆಯೇ ಕಾರ್ಯಾಗಾರಗಳನ್ನೂ ನಡೆಸುವಂತೆ ಈ ತರಗತಿಗಳನ್ನು ವಿನ್ಯಾಸ ಮಾಡಲಾಗಿರುವುದು ವಿಶೇಷ.

ಸದ್ಯ ಪುತ್ತೂರು, ಬೆಂಗಳೂರಿನಲ್ಲಿ ಮುಖಾಮುಖಿ ತರಗತಿಗಳನ್ನು ನಡೆಸಲಾಗುತ್ತಿದ್ದು; ರಾಜ್ಯದ ಬೇರೆ ಭಾಗಗಳಿಂದಲೂ ಆಸಕ್ತರ ದಂಡೇ ಹರಿಯುತ್ತಿದೆ. ಕೇವಲ ನೃತ್ಯವಿದ್ಯಾರ್ಥಿಗಳಷ್ಟೇ ಅಲ್ಲದೆ, ಯಾವುದೇ ಕಲೆಯ ಯಾವುದೇ ವಿಭಾಗದ ಆಸಕ್ತರೂ ಅಥವಾ ಸಾರ್ವಜನಿಕ ಪ್ರೇಕ್ಷಕರೂ, ಪೋಷಕರೂ ಈ ತರಗತಿಗಳನ್ನು ತೆಗೆದುಕೊಳ್ಳುವಂತೆ ವಿನ್ಯಾಸ ಮಾಡಲಾಗಿರುವುದು ಇದರ ವಿಶೇಷ. ಹಾಗಾಗಿ ಸಂಶೋಧನಾ ವಿದ್ಯಾರ್ಥಿಗಳಿಂದ ಮೊದಲ್ಗೊಂಡು ಸಬ್‌ಜೂನಿಂರ್ ಹಂತದ ವರೆಗೂ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಅಭ್ಯರ್ಥಿಗಳ ವಯೋಮಾನ, ಬೌದ್ಧಿಕಮಟ್ಟ, ಮಾನಸಿಕ ಪ್ರಬುದ್ಧತೆ, ತಿಳಿವಳಿಕೆಗಳಿಗನುಗುಣವಾಗಿ ಸ್ವತಃ ಅಭ್ಯರ್ಥಿಗಳೇ ಸ್ವಯಂ ಆಸಕ್ತಿಯಿಂದ ತೊಡಗಿಸಿಕೊಳ್ಳುವಂತೆ ಪಾಠ-ಪ್ರಯೋಗಗಳು ನಡೆಯುವುದು ಇಲ್ಲಿನ ಮುಖ್ಯ ಲಕ್ಷಣ. ಅದರಲ್ಲೂ ಮಕ್ಕಳ ಪ್ರಪಂಚದಲ್ಲಿ ಅಪರೂಪವಾಗುತ್ತಿರುವ ಭಾರತೀಯ ಪರಂಪರೆಯ ಸೂಕ್ಷ್ಮಗಳನ್ನೂ, ಕಥೆಗಳನ್ನೂ ಗುರುಕುಲಸಂಪ್ರದಾಯದಂತೆ ಜೊತೆಜೊತೆಗೆ ತಿಳಿಸುತ್ತಾ ಸಂಸ್ಕಾರ ಉದ್ದೀಪನಗೊಳಿಸುವತ್ತ ಕೆಲಸ ಪ್ರಧಾನವಾಗಿ ಸಾಗುತ್ತಲಿದೆ. ಚಿಕ್ಕಮಕ್ಕಳಿಗೂ ಸ್ವಯಂ ಕೊರಿಯೋಗ್ರಫಿ ಮಾಡಿಕೊಳ್ಳುವಂತೆ ಮನೋಧರ್ಮದ ನಾಟ್ಯಶಾಸ್ತ್ರದ ಇನ್ನು ಕೆಲವೇ ಪ್ರವೇಶ ದಾಖಲಾತಿಗಳಿಗೆ ಅನುಕೂಲ ಇದರಲ್ಲಿದೆ. ಇದರಿಂದ ಎಷ್ಟೋ ಮಕ್ಕಳು ತರಗತಿಯ ಬಳಿಕವೂ ಎಷ್ಟು ಉತ್ಸಾಹಿತರಾಗಿರುತ್ತಾರೆಂದರೆ ಮತ್ತದೇ ತರಗತಿಯ ಗುಂಗಿನಲ್ಲಿ ಕುಳಿತು ಮಾರ್ಗದರ್ಶಕರಲ್ಲಿ ಸಂವಾದ ನಡೆಸುತ್ತಾರೆ. ಮುಂದೆ ನಾಟ್ಯಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ತೋರಿದರೆಂದಾದರೆ 108 ಕರಣಾಭ್ಯಾಸದ ಪ್ರಾಯೋಗಿಕ ತರಗತಿಗಳನ್ನು ಬೆಂಗಳೂರಿನ ಹೆಸರಾಂತ ಗುರುಗಳಲ್ಲಿ ಕಲಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅಂತಿಮವಾಗಿ ಕೆಲವು ಪರೀಕ್ಷೆಗಳನ್ನು ನಡೆಸಿ ಅವರ ಭವಿಷ್ಯಕ್ಕೆ ಉಪಯೋಗವಾಗುವಂತೆ ಅರ್ಹತಾ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಈಗಾಗಲೇ ಮೊದಲ ಮೂರು ತಿಂಗಳ ತರಬೇತಿ ಹಲವು ವಿದ್ಯಾರ್ಥಿಗಳಿಗೆ ಫುರ್ಣಗೊಂಡು ಎರಡನೇ ಹಂತದ ಕೋರ್ಸ್ ಪ್ರಾರಂಭವಾಗಿದೆ.

ಈ ಕೋರ್ಸ್‌ಗೆ ನಮ್ಮ ನಾಟ್ಯಸಂಸ್ಥೆಯಿಂದ ಸಬ್ ಜೂನಿಯರ್‌ನಿಂದ ವಿದ್ವತ್ ಹಂತದ ಹಲವು ವಿದ್ಯಾರ್ಥಿಗಳು ಪುತ್ತೂರಿನಲ್ಲಿ ವೈಯಕ್ತಿಕ ವಿಶೇಷ ಮತ್ತು ಸಮೂಹದ ತರಗತಿಗಳಿಗೆ ಸೇರ್ಪಡೆಯಾಗಿದ್ದಾರೆ. ಕೆಲವೇ ಕೆಲವು ತರಗತಿಗಳಲ್ಲಿ ವಿದ್ಯಾರ್ಥಿಗಳಲ್ಲಿ ಗಮನಾರ್ಹ ಬದಲಾವಣೆ ಗೋಚರಿಸುತ್ತಿದೆ. ಅವರ ನೃತ್ಯಕಲಿಕೆ, ಗ್ರಹಿಕೆ ಮತ್ತು ಪ್ರದರ್ಶನದಲ್ಲಿ ಮನೋಧರ್ಮದ ಬೆಳವಣಿಗೆಯಾಗಿದೆ. ನಾಟ್ಯಶಾಸ್ತ್ರದ ತರಗತಿಯ್ನು ಒಂದರೆಕ್ಷಣವೂ ತಪ್ಪಿಸಿಕೊಳ್ಳದಷ್ಟು ಉತ್ಸಾಹ ಕಂಡುಬರುತ್ತಿದೆ. ಸ್ವತಃ ತಮ್ಮ ನೃತ್ಯಗಳನ್ನು ತಾವೇ ವಿನ್ಯಾಸ ಮಾಡುವಷ್ಟು ಪ್ರಬುದ್ಧತೆ ತೋರಿದ್ದಾರೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಪೋಷಕರೂ ಕೂಡಾ ಮಕ್ಕಳ ವರ್ತನೆ ಮತ್ತು ವ್ಯಕ್ತಿತ್ವದಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಗ್ರಹಿಸಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಇದು ಶಾಲಾ-ಕಾಲೇಜಿನ ಕಲಿಕೆ ಹಾಗೂ ಸ್ಪರ್ಧಾದಿಗಳಿಗೂ ಉಪಯುಕ್ತವಾಗುತ್ತಿದೆ ಎಂಬ ಪ್ರತಿಕ್ರಿಯೆಗಳೂ ದೊರಕುತ್ತಿರುವುದು ಮತ್ತೊಂದು ಸಂತೋಷದ ವಿಷಯ ಎಂದು ಕೋರ್ಸ್‌ಗಳನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪುತ್ತೂರಿನ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್.

ನೂಪುರ ಭ್ರಮರಿ ಪ್ರಾರಂಭವಾದದ್ದು ನಾಡಿನ ಹೆಸರಾಂತ ಕಲಾನಿಯತಕಾಲಿಕೆಯಾಗಿ. ಈಗ ಪ್ರತಿಷ್ಠಾನ ಮತ್ತು ಪ್ರಕಾಶನಸಂಸ್ಥೆಯಾಗಿ ರೂಪ ಪಡೆದು ನೃತ್ಯ ಸಂಶೋಧನಾ ಮತ್ತು ಅಧ್ಯಯನ ವಿಭಾಗವನ್ನು ಆರಂಭಿಸಿದ್ದು ಹೆಸರಾಂತ ಕಲಾವಿದರು, ಸಂಪನ್ಮೂಲ ವ್ಯಕ್ತಿಗಳು ತಜ್ಞರಾಗಿ ಸಂಸ್ಥೆಯ ಮೂಲಕ ಆಸಕ್ತರಿಗೆ ಮಾರ್ಗದರ್ಶನ ನೀಡಲು ಕೈಜೋಡಿಸುತ್ತ್ತಿದ್ದಾರೆ. ಹೆಸರಾಂತ ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಡಾ. ಆರ್. ಗಣೇಶ್ ಅವರ ನೇತೃತ್ವದ ಪ್ರಧಾನ ಸಲಹಾಸಮಿತಿಯ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಚಟುವಟಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸಂಸ್ಥೆಯ ಯೋಜನೆಗಳ ಪೈಕಿ ವಾರ್ಷಿಕ ಕಲಾ ಸಂಶೋಧನಾ ಸಮ್ಮೇಳನ, ನೃತ್ಯ ಸಂಶೋಧನಾ ಪುಸ್ತಕ ಪ್ರಕಟಣೆ, ವಿಶೇಷ ಸಂಶೋಧನಾ ನಿಯತಕಾಲಿಕೆ, ಗೋಷ್ಠಿ ಮತ್ತು ಅಧ್ಯಯನ ಸ್ವರೂಪದ ಕಮ್ಮಟ-ಕಾರ್ಯಾಗಾರ-ಉಪನ್ಯಾಸ-ಪ್ರಾಯೋಗಿಕ ಪರಿಷ್ಕರಣಗಳು- ತರಗತಿ-ಕೋರ್ಸ್‌ಗಳು ಪ್ರಧಾನವಾದವುಗಳಾಗಿವೆ.

Write A Comment