ಕುಂದಾಪುರ: ಕೇಂದ್ರ ಸರಕಾರದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ-2015ನ್ನು ವಿರೊಧಿಸಿ ವಿವಿಧ ಸಾರಿಗೆ ಸಂಘಟನೆಗಳು ಹಾಗೂ ಹಲವು ಕಾರ್ಮಿಕ ಸಂಘಟನೆಗಳು ರಾಜ್ಯವ್ಯಾಪಿ ಕರೆನೀಡಿದ್ದ ಸಾರಿಗೆ ಬಂದ್ಗೆ ಉಡುಪಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಕುಂದಾಪುರದಲ್ಲಿ ನೀರಸ ಪ್ರತಿಕ್ರಿಯೆ ಸಿಕ್ಕಿದೆ.
ಉಡುಪಿ ವರದಿ; ಮಸೂದೆಯನ್ನು ವಿರೋಧಿಸಿ ಸಾರಿಗೆ ಬಂದ್ ನಡೆಸಲು ಕರೆಕೊಟ್ಟಿದ್ದು, ಸಿಟಿ ಬಸ್ಸುಗಳು, ಖಾಸಗಿ ಬಸ್ಸುಗಳು ಸೇರಿದಂತೆ ಸರಕಾರಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿದೆ. ಬಸ್ಸು ಸಂಚಾರವಿಲ್ಲದ ಕಾರಣ ಉಡುಪಿ ಸಿಟಿ ಬಸ್ಸು ನಿಲ್ದಾಣ, ಸರ್ವಿಸ್ ಬಸ್ಸು ನಿಲ್ದಾಣ ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಬಿಕೋ ಎನ್ನುತ್ತಿತ್ತು. ಅಲ್ಲದೇ ಬಂದ್ ಮಾಹಿತಿಯಿರದ ಅದೆಷ್ಜೋ ಪ್ರಯಾಣಿಕರು ಸಂಚಾರ ತಾಪತ್ರಯ ಅನುಭವಿಸಬೆಕಾಗಿತ್ತು. ಇನ್ನು ಆಟೋ ರಿಕ್ಷಾ ಸಂಚಾರ ಮಾಮುಲಿನಂತಿರದಿದ್ದರೂ ಪ್ರಯಾಣಿಕರಿಗೆ ಸೇವೆ ಲಭ್ಯವಿತ್ತು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಶಾಂತಿಯುತವಾಗಿ ಬಂದ್ ನಡೆಯುತ್ತಿದೆ.
ಕುಂದಾಪುರ ವರದಿ: ಸಾರಿಗೆ ಬಂದಿಗೆ ಗುರುವಾರ ಬೆಳಿಗ್ಗೆನಿಂದಲೇ ಕುಮ್ದಾಪುರದಲ್ಲಿ ಆಟೋ ಸಂಚಾರ ಬಹುತೆಕ ಸ್ಥಗಿತಗೊಂಡಿತ್ತು. ಸರಕಾರಿ ಬಸ್ಸುಗಳು ರೋಡಿಗಿಳಿಯದ ಕಾರಣ ಸರಕಾರಿ ಬಸ್ಸು ನಿಲ್ದಾಣದಲ್ಲಿ ಪ್ರಯಾನಿಕರಿಲ್ಲದೆ ನಿಲ್ದಾಣ ಬಿಕೋ ಎನ್ನುತ್ತಿತ್ತು. ಬಹುತೇಕ ಖಾಸಗಿ ಬಸ್ಸುಗಳು ಓಡಾಟ ಸ್ಥಗಿತಗೊಳಿಸಿದ್ದು, ಗ್ರಾಮೀಣ ಭಾಗದ ಬಸ್ಸುಗಳು ಮಾತ್ರ ಕೆಲವೆಡೆ ಸಂಚರಿಸುತ್ತಿತ್ತು. ಕುಂದಾಪುರ-ಉಡುಪಿ-ಮಂಗಳೂರು ಸಂಚಾರದ ಖಾಸಗಿ ವೇಗದೂತ ಬಸ್ಸುಗಳು ಸಂಪೂರ್ಣ ಸಂಚಾರ ನಿಂತಿತ್ತು. ಆಟೋ ರಿಕ್ಷಾಗಳ ಸಂಚಾರವಿಲ್ಲದ ಕಾರಣ ದೂರದುರುಗಳೀಂದ ಬಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು. ಕುಂದಾಪುರದಲ್ಲಿ ಸದಾ ಗಿಜುಗುಡುತ್ತಿದ್ದ ಶಾಸ್ತ್ರೀ ವೃತ್ತ ಹಾಗೂ ಹೊಸ ಬಸ್ಸು ನಿಲ್ದಾಣ ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ರಿಕ್ಷಾ ಚಾಲಕರ ಪ್ರತಿಭಟನೆ: ಕುಂದಾಪುರ ತಾಲೂಕು ರಿಕ್ಷಾ ಚಾಲಕರ ಸಂಘಟನೆಗಳ ಸಮನ್ವಯ ಸಮಿತಿ ಕುಂದಾಪುರ ಇವರ ವತಿಯಿಂದ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ-2015’ ವಾಪಾಸಾತಿಗಾಗಿ ಮುಷ್ಕರದ ಸಂದರ್ಭ ಕುಂದಾಪುರದ ಶಾಸ್ತ್ರಿ ವೃತ್ತದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿದರು.
8 ಲಕ್ಷಕ್ಕೂ ಅಧಿಕ ರಾಜ್ಯದ ಆಟೋ ಚಾಲಕರು 65 ವರ್ಷಗಳೀಂದ ಸಾರ್ವಜನಿಕ ಸೇವೆಯಲ್ಲಿ ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದು, ನಿತ್ಯದ ಪೆಟ್ರೋಲ್, ಡಿಸೇಲ್, ಗ್ಯಾಸುಗಳಿಂದ ಕೋಟ್ಯಾಂತರ ರು. ತೇರಿಗೆ ರೂಪದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಹೊಗುತ್ತಿದೆ. ಆದರೇ ಸರಕಾರ ಯಾವುದೇ ರೀತಿಯ ಕಲ್ಯಾಣ ಯೊಜನೆಗಳನ್ನು ಚಾಲಕರಿಗಾಗಿ ಜಾರಿ ಮಾಡದೇ ನಮ್ಮನ್ನು ವಂಚಿತರನ್ನಾಗಿಸಿದೆ. ಇದರ ಜೊತೆಗೆ ಹಲವು ಕಾನೂನುಗಳನ್ನು ಜಾರಿಗೆ ತಂದು ಚಾಲಕರ ಉದ್ಯೋಗವನ್ನು ಕಿತ್ತುಕೊಳ್ಳುವ ತಂತ್ರವನ್ನು ಕೈಬಿಡಬೇಕೆಂದು ಈ ಸಂದರ್ಭ ಆಗ್ರಹ ಕೇಳಿಬಂತು.