ಕುಂದಾಪುರ: ತ್ಯಾಗ, ಪ್ರೀತಿ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರೂ ದೇವರ ಪ್ರೀತಿ ಹಾಗೂ ಕೃಪೆಗೆ ಪಾತ್ರರಾಗಬಹುದು, ಈ ನಿಟ್ಟಿನಲ್ಲಿ ಸಂತ ಅಂತೋಣಿಯವರ ಸಮರ್ಪಣಾ ಮನೋಭಾವನೆಯ ಜೀವನ ಕ್ರಮ ಹಾಗೂ ತತ್ವಗಳು ಎಲ್ಲರಿಗೂ ಆದರ್ಶವಾಗಬೇಕಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ಅವರು ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋಣಿಯವರ ಸಂಭ್ರಮದ ಸ್ಮರಣಿಕೆ ಹಬ್ಬದಲ್ಲಿ ಬಲಿಪೂಜೆ ನೆರೆವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಅತೀ ಕಿರಿಯ ವಯಸ್ಸಿನಲ್ಲಿಯೇ ಧರ್ಮ ಪ್ರಚಾರದ ಕೆಲಸಕ್ಕಾಗಿ ತಮ್ಮನ್ನು ಅರ್ಪಿಸಿಕ್ಕೊಳ್ಳುವ ಮೂಲಕವಾಗಿ ಸಂತ ಅಂತೋಣಿಯವರು ಜೀವನ ಬದಲಾವಣೆಯ ಕ್ರಮದ ಅನುಸರಣೆಗೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಮಾತೆ ಮರಿಯಮ್ಮರಲ್ಲಿ ವಿಶೇಷ ಭಕ್ತಿ ಹೊಂದಿದ್ದರು. ಅಲ್ಲದೇ ಪವಾಡ ಸಂತರೆಂದು ಪ್ರಖ್ಯಾತರಾಗಿದ್ದ ಇವರು ಒಂದು ವರ್ಷದ ಅವಧಿಯಲ್ಲಿ ಸಂತ ಪದವಿ ಪಡೆಯುವ ಮೂಲಕ ಎಲ್ಲಾ ಭಕ್ತರಿಗೂ ಪ್ರೇರಣೆಯಾಗಿದ್ದವರು ಎಂದು ಕೂಡ ಬಿಷಪ್ ಅವರು ಪ್ರವಚನದಲ್ಲಿ ತಿಳಿಸಿದರು.
ಫಾ. ಅನಿಲ್ ಡಿಸೋಜಾ ವಿಗಾರ್ವಾರ್ (ವಲಯ) ಕುಂದಾಪುರ, ಕೆರೆಕಟ್ಟೆ ಕ್ಷೇತ್ರದ ನಿರ್ದೇಶಕರು, ಧರ್ಮಗುರುಗಳಾದ ಫಾ. ಜೇವಿಯರ್ ಫಿಂಟೋ ಹಾಗೂ ಕುಂದಾಪುರ ಮತ್ತು ಉಡುಪಿ ಪ್ರಾಂತ್ಯದ ಧರ್ಮಗುರುಗಳು ಬಲಿಪೂಜೆಗೆ ಸಹಕರಿಸಿದರು.
ಈ ಸಂದರ್ಭದಲ್ಲಿ ಕೆರೆಕಟ್ಟೆ ಸ್ಮರಣಿಕೆಯ ಹಬ್ಬದ ಪ್ರಧಾನ ಪೋಷಕರಾಗಿ ಪ್ರಥಮ ವರ್ಷದ ಹುಟ್ಟುಹಬ್ಬದ ಪುಟಾಣಿ ಗ್ರೇಶನ್ ಅಂತೋಣಿ ಡಿಕೋಸ್ತಾ ಮತ್ತು ಇವರ ಹೆತ್ತವರಾದ ರವಿಕಿರಣ್-ಗ್ರೆಟ್ಟಾ ಡಿಕೋಸ್ತಾ ಅವರನ್ನು ಬಿಷಪ್ ಅವರು ಸನ್ಮಾನಿಸಿದರು.
ಕೆರೆಕ್ಕಟ್ಟೆ ಧರ್ಮಗುರು ಫಾ. ಜೇವಿಯರ್ ಫಿಂಟೋ ಸ್ವಾಗತಿಸಿ ವಂದಿಸಿದರು. ಜೋಯ್ಸ್ಟನ್ ಡಿಸೋಜಾ ಕಾರ್ಯಕ್ರಮಾ ನಿರೂಪಿಸಿದರು. ಸಾವಿರಾರು ಭಕ್ತಾಧಿಗಳು ಮೊಬತ್ತಿ ಹಚ್ಚಿ, ಹೂ ಸಮರ್ಪಣೆ ಮಾಡುವ ಮೂಲಕ ಅಂತೋಣಿಯವರಿಗೆ ಪೂಜೆ ಸಲ್ಲಿಸಿದರು.