ಕುಂದಾಪುರ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋ ಚರ್ಮ ಸಹಿತ ಓಮ್ನಿ ಕಾರು ಹಾಗೂ ಓರ್ವ ಆರೋಪಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಯನ್ನು ಕುಂದಾಪುರ ಎಮ್. ಕೋಡಿ ನಿವಾಸಿ ಜಬ್ಬಾರ್ ಸಾಹೇಬ್(48) ಎಂದು ಗುರುತಿಸಲಾಗಿದೆ. ಬಂಧಿತನಿಂದ ಓಮ್ನಿ ಕಾರು, 6 ದನದ ಚರ್ಮಗಳನ್ನು ವಶಪಡಿಸಿಕೊಳ್ಳಾಗಿದೆ.
ಘಟನೆ ವಿವರ: ಹಲವು ಸಮಯಗಳಿಂದ ದನ ಚರ್ಮ ವ್ಯಾಪಾರದ ಕಸುಬು ಮಾಡಿಕೊಂಡಿದ್ದ ಜಬ್ಬಾರ್ ಎಂಬಾತ ಎಂ. ಕೋಡಿ ನಿವಾಸಿಯಾಗಿದ್ದು ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಭಟ್ಕಳದಿಂದ ಕುಂದಾಪುರದ ಕೋಡಿಯ ತನ್ನ ನಿವಾಸಕ್ಕೆ ಓಮ್ನಿಯಲ್ಲಿ ಬರುತ್ತಿದ್ದ ವೇಳೆ ಕೋಡಿಯ ಎಂ ಕೋಡಿ ಭಾಗದಲ್ಲಿನ ಚೆಕ್ಪೋಸ್ಟ್ ಸಮೀಪ ಕುಂದಾಪುರ ಪೊಲೀಸರು ಓಮ್ನಿಯನ್ನು ತಡೆದಿದ್ದಾರೆ. ಈ ವೇಳೆ ವಾಹನದಲ್ಲಿ ತುಂಬಿಸಿಕೊಂಡು ತರುತ್ತಿದ್ದ 6 ದನಗಳ ಚರ್ಮಗಳು, ದನದ ಕಾಲುಗಳು ಪೊಲೀಸರ ಗಮನಕ್ಕೆ ಬಂದಿದ್ದು, ಜಬ್ಬಾರ್ನನ್ನು ಈ ವೇಳೆ ಪೊಲೀಸರು ತೀವೃ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನೂ ಇದೇ ವೃತ್ತಿ ಮಾಡಿಕೊಂಡಿದ್ದು ದನದ ಚರ್ಮಗಳನ್ನು ಅದನ್ನು ಒಣಗಿಸಿ ವ್ಯಾಪಾರ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಖಚಿತ ವರ್ತಮಾನದ ಮೇರೆಗೆ ಕುಂದಾಪುರ ವೃತ್ತನಿರೀಕ್ಷಕ ದಿವಾಕರ ಪಿ.ಎಂ ಮಾರ್ಗದರ್ಶನದಲ್ಲಿ ಕುಂದಾಪುರ ಉಪನಿರೀಕ್ಷಕ ನಾಸೀರ್ ಹುಸೇನ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಕುಂದಾಪುರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.