ಮನುಷ್ಯನಿಗೆ ಗುರಿ ಅತ್ಯಗತ್ಯ. ಗುರಿ ಇಲ್ಲದೇ ಸಾಧನೆ ಅಸಾಧ್ಯ. ಗುರಿಗಾಗಿ ತುಡಿಯುವ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರ ಮೂಲಕ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವಾಡಬೇಕು. ಕ್ರೀಡಾಂಗಣದಲ್ಲಿ ಕ್ರೀಡಾಪುಟವಿನ ನಿಜವಾದ ಪ್ರತಿಭೆ ಅರಳಬೇಕು ಎಂದು ಕೋಟದ ಜನತಾ ಫಿಶ್ಮಿಲ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಆನಂದ ಸಿ.ಕುಂದರ್ ಹೇಳಿದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಆಡಳಿತಕ್ಕೆ ಒಳಪಟ್ಟ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಮತ್ತು ಮಂಗಳೂರು ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಜ.30ಮತ್ತು 31ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಬಿ.ಹೆಗ್ಡೆ ಕಾಲೇಜು ಇಂದು ಕ್ಷಿಪ್ರ ಅವಧಿಯಲ್ಲಿ ಒಳ್ಳೆಯ ಸಾಧನೆ ಮಾಡುತ್ತಿದೆ. ವಿ.ವಿ ಮಟ್ಟದ ಪಂದ್ಯಾಟಗಳನ್ನು ಆಯೋಜಿಸುವ ಮೂಲಕ ಕ್ರೀಡಾಪ್ರತಿಭೆಗಳ ಹುರಿದುಂಬಿಸುವ ಕೆಲಸ ಮಾಡುತ್ತಿದೆ. ಸಂಸ್ಥೆಯ ಸಮಾಜಮುಖಿ ಯೋಚನೆಗಳು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ಡಾ.ಬಿ.ಬಿ.ಹೆಗ್ಡೆ ಕಾಲೇಜು 5ನೇ ವರ್ಷದಲ್ಲಿ ಮುನ್ನೆಡೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದಲೂ ಒಂದಲ್ಲೊಂದು ವಿ.ವಿ.ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬಂದಿದೆ. ಪಾಠದ ಜೊತೆ ಪಾಠೇತರ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯ 12 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದಾರೆ ಎಂದರು.
ಕುಂದಾಪುರ ಎಜ್ಯುಕೇಶನ್ ಸೊಸೈಟಿ ಉಪಾಧ್ಯಕ್ಷ ಸೊಲೊಮನ್ ಸೋನ್ಸ್, ಮಂಗಳೂರು ವಿ.ವಿ ಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್., ಪಟೇಲ್ ಸೌಕೂರು ಅಂತಯ್ಯ ಶೆಟ್ಟಿ ಮೆಮೊರಿಯಲ್ ಟ್ರೋಫಿಯ ಪ್ರಾಯೋಜಕರಾದ ನರೇಶ್ ಶೆಟ್ಟಿ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಸೀತಾರಾಮ ನಕ್ಕತ್ತಾಯ, ಕಾಲೇಜು ಆಡಳಿತ ಮಂಡಳಿಯ ಸುಧಾಕರ ಶೆಟ್ಟಿ ಬಾಂಡ್ಯ, ವೈ. ಎಸ್.ಹೆಗ್ಡೆ, ರಾಜೇಶ ಕೆ.ಸಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ.ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮೊದಲ ಪಂದ್ಯಾಟ ಭಂಡಾರ್ಕಾಸ್ ಕಾಲೇಜು ಮತ್ತು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜು ನಡುವೆ ನಡೆಯಿತು.