ಕುಂದಾಪುರ: ಕ್ರೀಡಾಕೂಟ ಹಾಗೂ ಪ್ರತಿಭಾ ಪುರಸ್ಕಾರದ ಖರ್ಚುವೆಚ್ಚಗಳ ಸಭೆಯನ್ನು ಕರೆದಿದ್ದ ವೇಳೆ ಕ್ಷುಲ್ಲಕ ಕಾರಣವೊಂದಕ್ಕೆ ಮೂಡುಗಿಳಿಯಾರುವಿನ ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರೋರ್ವರಿಗೆ ಸರಕಾರಿ ಸಂಯುಕ್ತ ಪ್ರೌಢಶಾಲೆಯ ದೈಹಿಕ ಶಿಕ್ಷಕರೋರ್ವರು ಹಲ್ಲೆ ನಡೆಸಿ ಅವ್ಯಾಚವಾಗಿ ನಿಂಧಿಸಿದ ಘಟನೆ ಮಂಗಳವಾರ ಸಂಜೆ ನಡೆದಿದ್ದು, ಇದರಿಂದ ಆಕ್ರೋಷಗೊಂಡ ಸ್ಥಳೀಯರು ಹಾಗೂ ಪೋಷಕರು ದೈಹಿಕ ಶಿಕ್ಷಕನ ಮೇಲೆ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಒಂದೇ ಆವರಣದಲ್ಲಿರುವ ಎರಡು ಶಾಲೆಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಮೂಡುಗಿಳಿಯಾರು ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರಮೇಶ ಎನ್ನುವವರು ಹಲ್ಲೆಗೊಳಗಾದವರಾಗಿದ್ದು, ಸರಕಾರಿ ಸಂಯುಕ್ತ ಪ್ರೌಢಶಾಲೆಯ ದೈಹಿಕಶಿಕ್ಷಕ ಉದಯ ಮಡಿವಾಳ ಹಲ್ಲೆ ಮಾಡಿದ ಆರೋಪ ಹೊತ್ತಿದ್ದಾರೆ.
ಘಟನೆ ಹಿನ್ನೆಲೆ: ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆ ಹಾಗೂ ಪ್ರಾಥಮಿಕ ವಿಭಾಗವು ಒಂದೇ ಕಾಂಪೌಂಡಿನಲ್ಲಿದೆ. ಈ ಸರಕಾರಿ ಪ್ರಾಥಮಿಕ ಶಾಲೆಗೆ ಇತ್ತೀಚೆಗೆ ಯುವಜನ ಕ್ರೀಡಾ ಇಲಾಖೆಯಿಂದ ಕ್ರೀಡೋಪಕರಣಗಳ ಖರೀದಿಗಾಗಿ ೧೦ ಸಾವಿರ ರೂ. ಅನುದಾನ ದೊರಕಿದ್ದು ಅದಕ್ಕೆ ಸಂಬಂಧಿಸಿದ ಹಾಗೆ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕಿ ಭಬಿತಾ ಎನ್ನುವವರು ಈ ಬಗ್ಗೆ ಇಲಾಖೆಗೆ ತೆರಳಿ ಮುಂದಿನ ಪ್ರಕ್ರಿಯೆಗೆ ಹಸ್ತಾಕ್ಷರವನ್ನು ಹಾಕಿದ್ದಾರೆ ಎನ್ನಲಾಗಿದೆ. ಅದರೇ ಪ್ರಾಥಮಿಕ ಶಾಲೆಗೆ ಬಂದ ಮಾಹಿತಿಯ ಪ್ರಕಾರ ಮೂಡುಗಿಳಿಯಾರು ಸರಕಾರಿ ಸಂಯುಕ್ತ ಪ್ರೌಢಶಾಲೆಯ ದೈಹಿಕಶಿಕ್ಷಣ ಶಿಕ್ಷಕ ಉದಯ ಮಡಿವಾಳ ಎನ್ನುವವವರು ಆ ಹಣವನ್ನು ತಮ್ಮ ಶಾಲೆಗೆ ಬೇಕೆನ್ನುವ ರೀತಿಯಲ್ಲಿ ಕೆಲಸ ಮಾಡಿದ್ದರು ಅದಕ್ಕಾಗಿ ಹಲವು ರೀತಿಯಾಗಿ ಲಾಬಿ ಮಾಡಿದ್ದರು ಎನ್ನಲಾಗಿದ್ದು ಈ ಬಗ್ಗೆ ಪ್ರೌಢಶಾಲೆಯ ಮುಖ್ಯೋಪಧ್ಯಾಯರ ಗಮನಕ್ಕೂ ಪ್ರಾಥಮಿಕ ಶಾಲೆ ಮುಖ್ಯಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಶಾಸಕರು ಸೇರಿದಂತೆ ಜಿ.ಪಂ. ಸದಸ್ಯರಿಗೂ ಪ್ರಾಥಮಿಕ ಶಾಲೆಯವರು ಮಾಹಿತಿ ನೀಡಿದ್ದರು. ಆದರೇ ಸರಕಾರಿ ಅನುದಾನ ತಾನು ಕೆಲಸ ಮಾಡುವ ಪ್ರೌಢಶಾಲೆಗೆ ಸಿಗಬೇಕೆನ್ನುವ ಪಟ್ಟು ಉದಯಕುಮಾರ್ ಅವರದ್ದಾಗಿತ್ತು ಎನ್ನುವುದು ಪ್ರಾಥಮಿಕ ಶಾಲೆಯವರು ಹಾಗೂ ಎಸ್.ಡಿ.ಎಂ.ಸಿ. ಆರೋಪವಾಗಿದೆ.
ಮಂಗಳವಾರ ಮೂಡುಗಿಳಿಯಾರುವಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ ಕಛೇರಿಯಲ್ಲಿ ಈ ಹಿಂದೆ ಶಾಲೆಯಲ್ಲಿ ನಡೆದ ಕ್ರೀಡಾಕೂಟ ಹಾಗೂ ಪ್ರತಿಭಾ ಪುರಸ್ಕಾರಗಳ ಖರ್ಚು ವೆಚ್ಚದ ಬಗ್ಗೆ ಎರಡು ಶಾಲೆಯ ಮುಖ್ಯೋಪಧ್ಯಾಯರ ನೇತೃತ್ವದಲ್ಲಿ ಇತರೇ ಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು. ಸಭೆಯ ಬಳಿಕ ಶಾಲೆಯ ಕ್ರೀಡಾ ಯೋಜನೆ ಅನುದಾನದ ಬಗ್ಗೆ ಮಾತುಕತೆಗಳು ನಡೆಯುತಿದ್ದಂತೆಯೇ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರಮೇಶ ಹಾಗೂ ಪ್ರೌಢಶಾಲೆಯ ದೈಹಿಕಶಿಕ್ಷಕ ಉದಯ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಏಕಾಏಕಿ ಉದ್ರಿಕ್ತರಾದ ಉದಯ ರಮೇಶ್ ಅವರನ್ನು ಅವ್ಯಾಚವಾಗಿ ನಿಂಧಿಸಿದ್ದಲ್ಲದೇ ಅಂಗಿಯನ್ನು ಹರಿದು ಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆ ಆರೋಪಿ ದೈಹಿಕ ಶಿಕ್ಷಕನ್ನು ಶಾಲೆಯಿಂದ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸರಕಾರಿ ಪ್ರಾಥಮಿಕ ಶಾಲೆ ಮೂಡುಗಿಳಿಯಾರು ಹಾಗೂ ಸರಕಾರಿ ಸಂಯುಕ್ತ ಪ್ರೌಢಶಾಲೆ ತರಗತಿ ಕೊಠಡಿಗಳನ್ನು ಮುಚ್ಚಿ ನಾಗರೀಕರು ಹಾಗೂ ಪೋಷಕರು ಶಾಲೆಯೆದುರು ಪ್ರತಿಭಟನೆ ನಡೆಸಿದರು. ಈ ವೇಳೆ ಅಮಾನತು ಮಾಡಬೇಕು ಆತನನ್ನು ಸ್ಥಳಕ್ಕೆ ಕರೆಸಿ ಘಟನೆ ಬಗ್ಗೆ ಕ್ಷಮೆ ಕೇಳಿಸಬೇಕೆಂಬ ಪಟ್ಟು ನಾಗರೀಕರಿಂದ ಕೇಳಿಬಂತು.
ಬಿ.ಇ.ಓ. ಭೇಟಿ: ಬುಧವಾರ ಬೆಳಿಗ್ಗೆ ಮೂಡುಗಿಳಿಯಾರುವಿನ ಶಾಲೆಗೆ ಬ್ರಹ್ಮಾವರ ವಲಯ ಕ್ಷೇತ್ರಶಿಕ್ಷಣಾಧಿಕಾರಿ ನಾಗೇಶ್ ಶ್ಯಾನುಭಾಗ್ ಭೇಟಿ ನೀಡಿ ಪೋಷಕರು, ಸ್ಥಳೀಯರು ಹಾಗೂ ಶಾಲೆಯ ಮುಖ್ಯೋಪಧ್ಯಾಯರು-ಶಿಕ್ಷಕರ ಮಾಹಿತಿ ಪಡೆದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ದೈಹಿಕ್ಷ ಶಿಕ್ಷಕರು ಸಹಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದು ಗಮನಕ್ಕೆ ಬಂದಿದೆ. ಈ ದೈಹಿಕ ಶಿಕ್ಷಕರನ್ನು ಜಾನುವಾರುಕಟ್ಟೆಯ ಸರಕಾರಿ ಪ್ರೌಢಶಾಲೆಗೆ ವರ್ಗಾವಣೆಯನ್ನು ಮಾಡಲಾಗಿದೆ.ಈ ಪ್ರಕ್ರಿಯೆ ತಕ್ಷಣವೇ ಜಾರಿಗೆ ಬರಲು ಆದೇಶ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಅಮಾನತು ಮಾಡುವ ಅಧಿಕಾರವಿಲ್ಲದಿರುವ ಕಾರಣ ಈ ಬಗ್ಗೆ ಉಪನಿರ್ದೇಶಕರಿಗೆ ವರದಿಯನ್ನು ಸಿದ್ದಪಡಿಸಿ ನೀಡುತ್ತೇನೆ. ಈ ಪ್ರಕರಣದ ಬಗ್ಗೆ ಇಲಾಖೆ ತನಿಖೆ ನಡೆಯಲಿದೆ ಎಂದರು.
ಈ ಪ್ರಕರಣದಿಂದ ಶಾಲೆಯಲ್ಲಿ ಶೈಕ್ಷಣಿಕ ವಾತಾವರಣ ಹಾಳಾಗಿದ್ದು, ಇವರ ಇಂತಹ ಪ್ರಕರಣಗಳಿಂದ ಬೇಸೆತ್ತ ಜನರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುವಂತಾಗಿದೆ ಎನ್ನುವುದು ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಜಯಕುಮಾರ್ ಹೇಳುವ ಮಾತುಗಳಾಗಿದೆ.
ಪೋಷಕರು ಹಾಗೂ ಸಾರ್ವಜನಿಕರು ಸೇರಿದಂತೆ ೩೦೦ಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.