ಕುಂದಾಪುರ: ಕ್ಷುಲ್ಲಕ ಕಾರಣವೇ ದೊಡ್ಡದಾಗಿ ಕೋಡಿಯ ಹಳವಳ್ಳಿಯಲ್ಲಿ ಮತ್ತೆ ಗಲಭೆ ಆರಂಭಗೊಂಡು ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಎರಡೂ ಕೋಮುಗಳ ನಡುವೆ ನಡೆದ ಗಲಭೆ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಕುಂದಾಪುರದ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಈ ಸಂದರ್ಭ ಎರಡೂ ಕಡೆಯಿಂದ ಕಲ್ಲೂ ತೂರಾಟ ನಡೆಸಿದಾಗ ಕುಂದಾಪುರದ ಎಸ್ಸೈ ನಾಸೀರ್ ಹುಸೇನ್ ಕಾಲಿಗೆ ಹಾಗೂ ಪೊಲೀಸ್ ಪೇದೆ ರಾಜು ಎಂಬುವರ ಮುಖಕ್ಕೆ ಕಲ್ಲೇಟಿನ ಗಾಯಗಳಾಗಿವೆ. ಘಟನೆಯ ಸಂದರ್ಭದಲ್ಲಿ ಪ್ರದೀಪ್ ಎಂಬ ಯುವಕ ಸೇರಿದಂತೆ ಕೆಲವು ಮಹಿಳೆಯರಿಗೂ ಗಾಯಗಳಾಗಿವೆ. ಘಟನೆಯ ನಂತರ ಎರಡೂ ಕಡೆಯ ಕೆಲವರು ಕುಂದಾಪುರದ ಖಾಸಗೀ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆಯ ವಿವರ: ಭಾನುವಾರ ಮಧ್ಯಾಹ್ನ ಹಳವಳ್ಳಿಯ ಕಿನಾರಾ ಬಾರ್ ಸಮೀಪದ ಗೂಡಂಗಡಿಯಲ್ಲಿ ಕೆಲವು ಹಿಂದೂ ಯುವಕರು ಕುಳಿತುಕೊಂಡಿದ್ದರು. ಈ ಸಂದರ್ಭ ವಾಹನದಲ್ಲಿ ಬಂದಿದ್ದ ಮುಸ್ಲಿಂ ಯುವಕರಲ್ಲಿ ಓರ್ವನಾದ ಅರ್ಷದ್ ಎಂಬಾತ ತನ್ನ ಮೊಬೈಲ್ನಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡು ಬೆರಳು ತೋರಿಸಿ ಮುಂದಕ್ಕೆ ಹೋಗಿದ್ದಾರೆ. ಇದೇ ಕಾರಣಕ್ಕೆ ಆಕ್ರೋಶಗೊಂಡ ಹಿಂದೂ ಯುವಕರು ಮುಸ್ಲಿಂ ಯುವಕರ ವಿರುದ್ಧ ಕಿಡಿಕಾರಿದ್ದಾರೆ. ಘಟನೆಯ ಮಾಹಿತಿ ಪಡೆದ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಾಸೀರ್ ಹುಸೇನ್ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲೆತ್ನಿಸಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ಪಕ್ಕದ ಮುಸ್ಲಿಂ ಮನೆಯೊಂದರಲ್ಲಿ ನಡೆಯುತ್ತಿದ್ದ ಮದುವೆ ಮನೆಗೆ ನುಗ್ಗಿದ ಅಪರಿಚಿತ ಕಿಡಿಗೇಡಿಗಳು ಮನೆಯ ಗಾಜುಗಳನ್ನು ಕಲ್ಲು ತೂರಾಟ ನಡೆಸಿ ಒಡೆದು ಹಾಕಿದ್ದಾರೆ. ಘಟನೆ ಉದ್ರಿಕ್ತ ಸ್ಥಿತಿ ತಲುಪುತ್ತಿದ್ದಂತೆಯೇ ಎರಡೂ ಕಡೆಯವರು ಮನೆಯೊಳಗೆ ಕಲ್ಲು, ತಂಪು ಪಾನೀಯಗಳ ಬಾಟಲಿ ಶೇಖರಿಸಿ ತೂರಾಟ ನಡೆಸಿದ್ದಾರೆ.
ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಲಾಠೀಚಾರ್ಜ್ ನಡೆಸಿ ನಿಯಂತ್ರಣಕ್ಕೆ ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗದ ಪರಿಣಾಮ ಮೂರು ಬಾರಿ ಅಶ್ರುವಾಯು ಪ್ರಯೋಗ ನಡೆಸಿದರು. ತಕ್ಷಣ ಶಂಕರನಾರಾಯಣ, ಅಮಾಸೆಬೈಲು ಸೇರಿದಂತೆ ವಿವಿಧೆಡೆಗಳಿಂದ ಪೊಲೀಸರನ್ನು ಕರೆಸಲಾಯಿತು. ಎರಡು ಕೆಎಸ್ಆರ್ಪಿ ತುಕುಡಿ, ಎರಡು ಡಿಎಆರ್ ಸೇರಿದಂತೆ ಪೊಲೀಸರನ್ನು ನಿಯುಕ್ತಿಗೊಳಿಸಲಾಗಿದೆ.
ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ. ದಿವಾಕರ, ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಶಂಕರನಾರಾಯಣ ಠಾಣೆಯ ಉಪನಿರೀಕ್ಷಕ ದೇಜಪ್ಪ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯಕ್ ಭೇಟಿ ನೀಡಿದ್ದಾರೆ. ಈಲ್ಲಾ ಪಂಚಾಯಿತಿ ಸದಸ್ಯ ಗಣಪತಿ ಟಿ. ಶ್ರೀಯಾನ್, ಕುಂದಾಪುರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ತಾಲೂಕು ಪಂಚಾಯಿತಿ ಸದಸ್ಯ ಮಂಜು ಬಿಲ್ಲವ, ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಧನಂಜಯ ಕುಂದಾಪುರ, ಕೋಟೇಶ್ವರ ಘಟಕದ ಅರವಿಂದ, ಜಾನಕಿ ಬಿಲ್ಲವ ಮೊದಲಾದವರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.