ಕೊಣಾಜೆ, ಡಿ.19: ಲಾರಿಯನ್ನು ತಡೆದು ಅದರ ಚಾಲಕನ ನಗದು ದರೋಡೆಗೈದ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಮೂವರನ್ನು ಕೊಣಾಜೆ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೋಂಟುಗೋಳಿಯ ನಿವಾಸಿ ಎಂ.ಶರೀಫ್(29), ಕೈರಂಗಳ ಗುಂಡಳಿಕೆ ನಿವಾಸಿಗಳಾದ ಮುಹಮ್ಮದ್ ಇಮ್ರಾನ್ ಯಾನೆ ಅಬ್ಬು(20), ನವಾಝ್ (25) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ. ಡಿ.10ರಂದು ರಾತ್ರಿ 2:30ರ ವೇಳೆಗೆ ಮೋಂಟುಗೋಳಿ ಮಾರ್ಗವಾಗಿ ಕೆದುಂಬಾಡಿ ಕಡೆಗೆ ಲಾರಿಯ ಮೂಲಕ ಮರ ಸಾಗಾಟ ಮಾಡುತ್ತಿದ್ದ ವೇಳೆ ದರೋಡೆಕೋರರು ಲಾರಿಯನ್ನು ಮೋಂಟುಗೋಳಿಯಲ್ಲಿ ತಡೆದು ಲಾರಿ ಚಾಲಕನನ್ನು ಮಾರಕಾಯುಧದಿಂದ ಬೆದರಿಸಿ 8,200ರೂ. ದರೋಡೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಮಾಲಕ ಹುಸೈನ್ ಎಂಬವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಡಿಸಿಪಿ ವಿಷ್ಣುವರ್ಧನ್ ಅವರ ಮಾರ್ಗದರ್ಶನದ ಮೇರೆಗೆ ಕೊಣಾಜೆ ಇನ್ಸ್ಪೆಕ್ಟರ್ ರಾಘವ ಪಡೀಲ್, ಎಸ್ಸೈ ಸುಧಾಕರ್, ಹೆಡ್ಕಾನ್ಸ್ಟೇಬಲ್ ಜಗನ್ನಾಥ್, ಗಿಲ್ಬರ್ಟ್ ಡಿಸೋಜ, ಸಂಜೀವ, ಸಂತೋಷ್ ಕುಮಾರ್ ನೇತೃತ್ವದ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳ ಪೈಕಿ ನವಾಝ್ ಎಂಬಾತ ಉಳ್ಳಾಲ ವ್ಯಾಪ್ತಿಯ ಕೋಟೆಕಾರ್ ಬಳಿ ಬುಧವಾರ ಚಾಲಕನನ್ನು ದರೋಡೆಗೈಯ್ಯಲು ವಿಫಲ ಯತ್ನ ನಡೆಸಿದ್ದ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೂಡಾ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳು ತಡರಾತ್ರಿಯ ವೇಳೆ ಲಾರಿಗಳನ್ನು ತಡೆದು ದರೋಡೆಗೈಯ್ಯುವಲ್ಲಿ ಬಹಳಷ್ಟು ತಂತ್ರಗಾರಿ ಕೆಯನ್ನು ಬೆಳೆಸಿಕೊಂಡಿದ್ದರು ಎನ್ನಲಾಗಿದೆ. ಲಾರಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಗುರುವಾರ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.