ಉಡುಪಿ: ಸಂತೋಷ ಗುರೂಜಿ ನೇತೃತ್ವದ ಬಂಟರ ಮಹಾ ಸಂಸ್ಥಾನಕ್ಕೆ ಚಾಲನೆ ದೊರೆತಿದೆ. ಬಂಟ ಸಮುದಾಯದ ಈ ಗುರುಪೀಠಕ್ಕೆ ಸಮುದಾಯದೊಳಗೆ ವಿರೋಧವಿದ್ದರೂ ಇಂದು ದೊಡ್ಡ ಪ್ರಮಾಣದಲ್ಲಿ ನಾಯಕರು ಸೇರಿ ಮಹಾ ಸಂಕಲ್ಪದ ಭೂಮಿ ಪೂಜೆ ನೆರವೇರಿಸಿದ್ದಾರೆ.
ಕರಾವಳಿ ಭಾಗದಲ್ಲಿ ಪ್ರಭಾವಿ ಎನಿಸಿರುವ ಬಂಟ ಸಮುದಾಯಕ್ಕೆ ಈವರೆಗೆ ಯಾವುದೇ ಗುರುಪೀಠ ಇರಲಿಲ್ಲ. ಇದೀಗ ಸಂತೋಷ ಗುರೂಜಿ ಅವರ ನೇತೃತ್ವದಲ್ಲಿ ಬಾರ್ಕೂರು ಕ್ಷೇತ್ರದಲ್ಲಿ ಮಹಾಸಂಸ್ಥಾನ ಆರಂಭಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ದೈವಾರಾಧನೆ ಮಾಡುವ ಬಂಟರಿಗೆ ಗುರುಪೀಠದ ಅಗತ್ಯವಿಲ್ಲ ಎಂಬ ಪ್ರತಿಭಟನೆಯ ಧ್ವನಿಯ ನಡುವೆಯೂ ಯಶಸ್ವಿಯಾಗಿ ಸಂಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಲಾಯ್ತು. ಮುಂಬೈ ಪೂನಾ, ಅರಬ್ ದೇಶಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಬಂದ ಸಮುದಾಯ ಮುಖಂಡರು ಸಂತೋಷಗುರೂಜಿಯವರ ಬೆಂಬಲಕ್ಕೆ ನಿಂತಿದ್ದಾರೆ.
1200 ವರ್ಷ ಇತಿಹಾಸ ಇರುವ ಅಳಿಯಕಟ್ಟು ಜೀವನ ಪದ್ಧತಿಯ ಮೂಲ ಸ್ಥಾನ ಮತ್ತು ಕುಂಡೋಧರ ದೈವದ ಆಲಯವಿರುವ ಸ್ಥಳ ಬಾರ್ಕೂರು, ಈ ಕ್ಷೇತ್ರದಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ಸಂಸ್ಥಾನ ತೆಲೆ ಎತ್ತಲಿದೆ. ಉಳ್ಳವರಿಂದ ಪಡೆದು ಬಡವರಿಗೆ ನೀಡುವ ಉದ್ದೇಶ ನಮ್ಮದು ಅಂತಾರೆ ಸಂತೋಷ ಗುರೂಜಿ. ಆದರೆ ಸಮುದಾಯದ ಒಂದು ಪ್ರಭಲ ವರ್ಗ ಸಂಸ್ಥಾನದ ಉದ್ದೇಶಗಳ ಬಗ್ಗೆ ಸಂಶಯ ವ್ಯಕ್ತಪಡಿಸಿ ಹೊರಗುಳಿದಿದ್ದಾರೆ. ಸಮುದಾಯ ಮುಖಂಡರನ್ನು ಮೆರವಣಿಗೆಯಲ್ಲಿ ಕರೆತಂದು ಗೌರವಿಸಿ ಕುಂಡೋಧರ ದೈವಕ್ಕೆ ಪೂಜೆ ಸಲ್ಲಿಸಿ ಸಂಸ್ಥಾನ ಸ್ಥಾಪನೆಯ ಉದ್ದೇಶವನ್ನು ಮನವರಿಕೆ ಮಾಡುವ ಪ್ರಯತ್ನ ಇಂದು ನಡೆಯಿತು.
ದೇವಾಲಯಗಳ ಊರು ಬಾರ್ಕೂರು, 365 ಕ್ಕೂ ಹೆಚ್ಚಿನ ದೇವಾಲಯಗಳು ಇಲ್ಲಿದ್ದು, ಇದೀಗ ಬಂಟ ಸಮುದಾಯಕ್ಕೂ ಬಾರ್ಕೂರಿನಲ್ಲಿ ಗುರುಪೀಠ ಆರಂಭವಾಗಿರೋದು ಗಮನಸೆಳೆದಿದೆ. ವಿರೋಧದ ನಡುವೆ ಈ ಸಂಸ್ಥಾನ ಯಾವರೀತಿ ತಲೆ ಎತ್ತಿ ನಿಲ್ಲುತ್ತೆ ಕಾದುನೋಡಬೇಕು.