ಮಂಗಳೂರು,ನ.12 : ‘ಕೇಬಲ್ ಸಂಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ನಾನು, ಪ್ರಕರಣವೊಂದನ್ನು ದಾಖಲಿಸಲು ನಗರದ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿದಾಗ ನನ್ನ ಮೇಲೆ ಪೊಲೀಸರು ದೈಹಿಕ ಹಲ್ಲೆ ನಡೆಸಿ, ದೌರ್ಜನ್ಯ ಪ್ರದರ್ಶಿಸಿದ್ದು, ಇದರ ವಿರುದ್ದ ಮುಖ್ಯಮಂತ್ರಿ, ಗೃಹ ಸಚಿವರು, ದ.ಕ. ಉಸ್ತುವಾರಿ ಸಚಿವರು ಹಾಗೂ ಇಲಾಖಾ ಮುಖ್ಯಸ್ಥರಿಗೆ ದೂರು ನೀಡಲಾಗಿದೆ’ ಎಂದು ವಿ4 ಕೇಬಲ್ ಸಂಸ್ಥೆಯ ಪಾಲುದಾರ, ಮಾಧ್ಯಮ ಪ್ರಮುಖ ಹಾಗೂ ವೆಸ್ಟರ್ನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಾಲ್ಟರ್ ಸ್ಟೀಫನ್ ಮೆಂಡಿಸ್ ತಿಳಿಸಿದ್ದಾರೆ.
ಮಂಗಳೂರಿನ ಸರ್ಕಿಟ್ಹೌಸ್ನಲ್ಲಿ ಮಂಗಳವಾರ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಗೆ ಈ ಸಂಬಂಧ ಮನವಿ ಸಲ್ಲಿಸಿದ ಅವರು, ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು. ವೆಸ್ಟರ್ನ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಫ್ಲೋರೆನ್ಸಾ ಮೆಂಡಿಸ್, ಕೇಬಲ್ ವಾಹಿನಿಯ ಪ್ರಮುಖರು ಹಾಗೂ ಹಲವಾರು ಕೇಬಲ್ ಸಂಸ್ಥೆಯ ಸಿಬಂದಿ ಉಪಸ್ಥಿತರಿದ್ದರು.
‘ವಿ4 ಕೇಬಲ್ ಸಂಸ್ಥೆಯು ಅತ್ತಾವರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಯಾಟ್ಕೊಂ ಕೇಬಲ್ಗೆ ಬೀಗ ಹಾಕಿ ನ.9ರಂದು ರಾತ್ರಿ ಊಟಕ್ಕೆ ಹೋಗಿದ್ದ ಸಮಯದಲ್ಲಿ ಪ್ರಶಾಂತ್ ಹಾಗೂ ಇತರ ಮೂವರು ಸೇರಿ ಬಲತ್ಕಾರದಿಂದ ಬೀಗವನ್ನು ತೆಗೆದು ಅದರ ಒಳಪ್ರವೇಶಿಸಿ 2 ಟ್ರಾನ್ಸ್ಮೀಟರ್, ಬ್ಯಾಟರಿ ಮತ್ತು ಅದರ ಸಂಬಂಧ ವಸ್ತುಗಳಿಗೆ ಹಾಗೂ ವಿ4 ಮೀಡಿಯಾದ ಸಿಗ್ನಲ್ಗೆ ಹಾನಿ ಮಾಡಿರುವುದಲ್ಲದೆ, ಕೆಲವು ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇದರಿಂದಾಗಿ ಸುಮಾರು 1,200 ಗ್ರಾಹಕರಿಗೆ ತೊಂದರೆ ಉಂಟುಮಾಡಿದ್ದಾರೆ’ ಎಂದು ಸ್ಟೀಫನ್ ಮೆಂಡಿಸ್ ತಿಳಿಸಿದ್ದಾರೆ.
ಫ್ಲೋರೆನ್ಸಾ ಮೆಂಡಿಸ್ ಅವರು ಮಾತನಾಡಿ, ‘ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಲು ಹೋದ ಸಂದರ್ಭದಲ್ಲಿ ಪೊಲೀಸರು ನಮ್ಮ ಜತೆಯಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಸ್ಟೀಫನ್ ಅವರನ್ನು ಕಾರಿನಿಂದ ಎಳೆದು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ’ ಎಂದು ದೂರಿದರು.
ಸ್ಟೀಫನ್ ಮೆಂಡಿಸ್ ಮಾತನಾಡಿ, ‘ಕೇಬಲ್ ವ್ಯವಸ್ಥೆಯಲ್ಲಿ ಕಳೆದ 20 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತ ಬಂದ ನನ್ನ ಮೇಲೆ ಪೊಲೀಸ್ ದೌರ್ಜನ್ಯ ಪ್ರದರ್ಶಿಸಲಾಗಿದೆ. ನಾವು ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಈ ಪರಿಸ್ಥಿತಿ ಸೃಷ್ಟಿಯಾದರೆ, ಇತರರ ಪರಿಸ್ಥಿತಿ ಹೇಗಿರಬಹುದು’ ಎಂದವರು ಪ್ರಶ್ನಿಸಿದರು.