ವರದಿ : ಈಶ್ವರ ಎಂ. ಐಲ್
ಮುಂಬಯಿ : ಮುಂಬಯಿಯ ಜನಪ್ರಿಯ ಪತ್ರಕರ್ತ ಬೊಕ್ಕಪಟ್ನ ದಿನೇಶ್ ಕುಲಾಲ್ ಇವರ ನೇತೃತ್ವದಲ್ಲಿ ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಸಮಾಜಿಕ ಚಟುವಟಿಕೆಯ ನಿಮಿತ್ತ ನ. 9 ರಂದು ಸಂಜೆ ಕರ್ನಾಟಕ ಸಂಘ ಮಾಟುಂಗಾದ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ನಾಟಕ ಪ್ರದರ್ಶನ ಹಾಗೂ ಸಾಧಕರಿಗೆ ಸಮ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಹಾನಗರದಲ್ಲಿ ಸುಮಾರು ಮೂರು ದಶಕಗಳಿಂದ ಸದ್ದು ಗದ್ದಲವಿಲ್ಲದೆ ಯಾವುದೇ ಪ್ರಚಾರವನ್ನು ಬಯಸದೇ ಕನ್ನಡ ಪತ್ರಿಕೆಯ ಬೆಳವಣಿಗೆಗಾಗಿ ಶ್ರಮಿಸಿದ ಪತ್ರಕರ್ತ, ಕಳೆದ 10 ವರ್ಷಗಳಿಂದ ಮುಂಬಯಿ ನ್ಯೂಸ್ ದೃಶ್ಯವಾಹಿನಿಯಲ್ಲಿ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿರುವ ಹೇಮರಾಜ್ ಕರ್ಕೇರ ಅವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು.
ನಗರದ ಹಲವಾರು ಕನ್ನಡ, ತುಳು ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿರುವ, ಸಮಾಜ ಸೇವಕ ಅಶೋಕ್ ಕೆ. ಸಸಿಹಿತ್ಲು, ಮುಂಬಯಿಯ ಉದ್ಯಮಿ, ಸಮಾಜ ಸೇವಕ, ರಘು ಮೂಲ್ಯ ಪಾದೆ ಬೆಟ್ಟು, ಸ್ಯಾಕ್ಸೋಫೋನ್ ನುಡಿಸುದರಲ್ಲಿ ಖ್ಯಾತರಾಗಿರುವ, ದಿನೇಶ್ ವಿನೋದ್ ಕೋಟ್ಯಾನ್, ಬೋರಿವಲಿ ಪರಿಸರದ ಜನಪ್ರಿಯ ನಗರ ಸೇವಕ ಶಿವ ಶೆಟ್ಟಿ ಇವರನ್ನು ಶಾಲು ಹೊದಿಸಿ, ಫಲಪುಷ್ಪ, ಸನ್ಮಾನ ಪತ್ರ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶ್ರೀ ರಮಾನಂದ ಗುರುಜಿಯವರು ಆಶೀರ್ವದಿಸುತ್ತಾ ಸ್ವಾರ್ಥರಹಿತ ಕಾರ್ಯಕ್ಕೆ ಭಗವಂತನ ಆಶೀರ್ವಾದವಿರುತ್ತದೆ. ಅರ್ಥಗರ್ಬಿತ ನಾಟಕ ಹಾಗೂ ಸಾಧಕರಿಗೆ ಸನ್ಮಾನ ಅಭಿನಂದನೀಯ ಎಂದರು.
ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರು ಗೌರವ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡುತ್ತಾ ಸದ್ದಿಲ್ಲದೆ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವ ಕುಲಾಲ ಪ್ರತಿಷ್ಠಾನದ ಕಾರ್ಯಕ್ಕೆ ಸಂತೋಷ ವ್ಯಕ್ತ ಪಡಿಸಿದರು.
ಗೌರವ ಅತಿಥಿಯಾಗಿ ಆಗಮಿಸಿದ ಎಂ. ಜೆ. ಪ್ರವೀಣ್ ಭಟ್, ಅಪ್ಪಾಜಿ ಬೀಡು ಪೌಡೇಶನ್ ನ ರಮೇಶ್ ಗುರುಸ್ವಾಮಿ, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಅವರೂ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಬಿ. ಸುರೇಶ್ ಕುಲಾಲ್ ಮಾತನಾಡುತ್ತಾ ಪ್ರತಿಷ್ಠಾನದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣಕ್ಕಗಿ ಆರ್ಥಿಕ ನೆರವು ನೀಡುವುದನ್ನು ನಾವು ಮುಂದುವರಿತ್ತಿರುದಾಗಿ ಹೇಳುತ್ತಾ ಮಂಗಳೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಲಾಲ ಭವನಕ್ಕೆ ಕುಲಾಲ ಪ್ರತಿಷ್ಠಾನ ನ ವತಿಯಿಂದ ಒಂದು ಲಕ್ಷ ರೂಪಾಯಿಯನ್ನು ಹಸ್ತಾಂತರಿಸಿದರು.
ಲಕುಮಿ ತಂಡದ ಕಲಾವಿದ ಎಚ್. ಕೆ. ನಯನಾಡ್, ದ.ಕ್. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕೀರ್ತಿ ಬಿ. ಮೂಲ್ಯ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶಿವ ಮೂಡಿಗೆರೆ, ಐತು ಮೂಲ್ಯ, ಗಿರೀಶ್ ಶೆಟ್ಟಿ ತೆಲ್ಲರ್, ಅಶೋಕ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಪ್ರೇಮಾನಂದ ಕುಲಾಲ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಪತ್ರಕರ್ತ ಬಿ. ದಿನೇಶ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಆನಂದ ಬಿ. ಮೂಲ್ಯ, ಆನಂದ ಕುಲಾಲ್, ಕೃಷ್ಣ ಮೂಲ್ಯ, ಹರೀಶ್ ಮೂಲ್ಯ, ಜಗದೀಶ್ ಮೂಲ್ಯ, ಸಂತೋಷ್ ಗುಜರನ್, ರತ್ನಾ ಡಿ. ಕುಲಾಲ್, ವನಿತಾ ಆರ್. ಮೂಲ್ಯ ಮಮತಾ ಎಸ್. ಗುಜರನ್ ಮೊದಲಾದವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.