ಕುಂದಾಪುರ: ದಾಸಶ್ರೇಷ್ಠರಾದ ಕನಕದಾಸರ ಜಯಂತಿಯನ್ನು ಶನಿವಾರ ಬೆಳಿಗ್ಗೆ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಚರಿಸಲಾಯಿತು.
ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಭಕ್ತಿಪಂಥದಲ್ಲಿ ಕನಕರು ಶ್ರೇಷ್ಠರಾಗಿದ್ದು ಪುರಂದರ ದಾಸರ ಸಮಕಾಲೀನರಾಗಿದ್ದರು. ಭಕ್ತಿ ಪಂಥದ ಮೂಲಕ ಅಂದಿನ ಕಾಲದಲ್ಲಿಯೇ ಜಾತಿ ಪದ್ಧತಿ ನಿವಾರಣೆಯಲ್ಲಿ ತಮ್ಮದೇ ಕೊಡುಗೆ ನೀಡಿದ್ದರು ಅಲ್ಲದೇ ಮೇಲು-ಕೀಳು ಭಾವನೆಯನ್ನು ವಿರೋಧಿಸಿ ಖಂಡಿಸಿದವರು. ಉಡುಪಿ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ದರ್ಶನವಾಗದಿದ್ದಾಗ ಹಿಂಬದಿಯಲ್ಲಿ ಭಕ್ತಿ ಮಾಡಿದಾಗ ಶ್ರೀ ಕೃಷ್ಣನೇ ಇವರಿಗೆ ದರ್ಶನ ನೀಡಿದ್ದು ಅವರ ಭಕ್ತಿಗೆ ಸಾಕ್ಷಿಯಾಗಿದೆ. ಕನಕದಾಸರ ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕು ಹಾಗಾದಾಗ ಮಾತ್ರವೇ ಆಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು.
ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಮಾತನಾಡಿ, ಭಕ್ತಿ ಪಂಥದ ಹರಿದಾಸರಲ್ಲಿ ಕನಕದಾಸರು ಶ್ರೇಷ್ಟ ಕೀರ್ತನೆಕಾರರು ಹಾಗೂ ದಾಸಶ್ರೇಷ್ಟರಾಗಿದ್ದಾರೆ. ಸಮಾಜದಲ್ಲಿ ಅಸಮಾನತೆ ವಿರೋಧಿಸಿ, ತಮ್ಮ ಕೀರ್ತನೆಗಳ ಮೂಲಕ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಕುರಿತು ಸರಳವಾಗಿ ತಿಳಿಸಿದವರು. ಕಾಗಿನೆಲೆ ಆದಿಕೇಶವ ಅಂಕಿತನಾಮದಲ್ಲಿ ಕೀರ್ತನೆ ರಚಿಸಿದ್ದು ಇವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದಾಗಿದೆ. ಕನಕ ದಾಸರ ಆಶಯದಂತೆ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಕರೆನೀಡಿದರು.
ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್. ಮಾತನಾಡಿ, ಕನಕದಾಸರು ತಮ್ಮ ಕೃತಿಗಳ ಮೂಲಕ ಜಾತಿಪದ್ಧತಿ ಹಾಗೂ ಮೇಲುಕೀಳು ಭಾವನೆಯ ವಿರುದ್ಧ ಪ್ರತಿಭಟಿಸಿದ್ದರು. ಆದರೇ ಇಂದಿಗೂ ಜಾತಿಪದ್ಧತಿ ನಿರ್ಮೂಲನೆಯಾಗದಿರುವುದು ವಿಷಾದನೀಯ ಸಂಗತಿಯಾಗಿದ್ದು, ಜಾತಿಪದ್ಧತಿ ತೊಡೆದು ಹಾಕುವಲ್ಲಿ ಎಲ್ಲರೂ ಕಟಿಬದ್ಧರಾಗಬೇಕೆಂದರು.
ಸಾಹಿತಿ ಡಾ| ಕನರಾಡಿ ವಾದಿರಾಜ ಭಟ್ ಕನಕದಾಸರ ಕುರಿತು ನೆರೆದವರಿಗೆ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರ
ತಹಶಿಲ್ದಾರ್ ಗಾಯತ್ರಿ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ತಾಲೂಕು ದಾಸೋಹ ಅಧಿಕಾರಿ ಕೆದೂರು ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.