ಕರಾವಳಿ

ವಿದ್ಯೆ, ಉದ್ಯೋಗ, ಸಂಘಟನೆಯ ತತ್ವಗಳನ್ನು ಪಾಲಿಸಿದ ಅಪರೂಪದ ವ್ಯಕ್ತಿ ಜಯ ಸಿ ಸುವರ್ಣ : ಪೂಜಾರಿ ಶ್ಲಾಘನೆ

Pinterest LinkedIn Tumblr

Jaya_suvarna_sanman_1

ಮಂಗಳೂರು: ‘ಹೊರನಾಡ ಕನ್ನಡಿಗ’ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅವರ ಅಭಿನಂದನಾ ಸಮಾರಂಭ ರವಿವಾರ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ಸಭಾಂಗಣದಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರು, ಜಗತ್ತಿನಲ್ಲಿ ಬಡವರನ್ನು ಪ್ರಿತಿಸುವವರು ಬಹಳ ಕಡಿಮೆ. ಆದರೆ ಜಯ ಸುವರ್ಣ ಅವರು ಬಡವರನ್ನು ಪ್ರೀತಿಸುವವರು. ನಾರಾಯಣ ಗುರುಗಳು ಬೋಧಿಸಿದಂತೆ ವಿದ್ಯೆ, ಉದ್ಯೋಗ, ಸಂಘಟನೆಯ ತತ್ವಗಳನ್ನು ಪಾಲಿಸಿದವರು ಎಂದರು.

ಕುದ್ರೋಳಿ ದೇವಸ್ಥಾನ ನವೀಕರಣದ ಸಂದರ್ಭದಲ್ಲಿ ಸುವರ್ಣ ಅವರನ್ನು ತಮಗೆ ಪರಿಚಯಿಸಿದ ವ್ಯಕ್ತಿಯೊಬ್ಬರು ‘ಜಯ ಸುವರ್ಣರು ಬಹಳ ಒಳ್ಳೆಯ ವ್ಯಕ್ತಿ . ಬಡವರನ್ನು ಪ್ರೀತಿಸುವವರು’ ಎಂದು ಹೇಳಿದ್ದರು ಎಂದು ಜನಾರ್ದನ ಪೂಜಾರಿ ಅಭಿನಂದನಾ ಭಾಷಣದಲ್ಲಿ ಸ್ಮರಿಸಿಕೊಂಡರು.

Jaya_suvarna_sanman_2

ದೇಗುಲ ನವೀಕರಣದ ಸಂದರ್ಭದಲ್ಲಿ ಬೆಂಗಳೂರಿನ ವ್ಯಕ್ತಿಯೊಬ್ಬರು 25 ಲಕ್ಷ ರೂ. ಕೊಡುತ್ತೇನೆಂದು ಮಾತುಕೊಟ್ಟು ಶಂಕುಸ್ಥಾಪನೆ ವೇಳೆ ಕೈಕೊಟ್ಟಿದ್ದ ಸಂದರ್ಭದಲ್ಲಿ ನೆರವಿಗೆ ಬಂದವರು ಜಯ ಸುವರ್ಣ. ಮುಂಬೈನಲ್ಲಿ ಸುಮಾರು 40-45 ಲಕ್ಷ ರೂ.ಗಳನ್ನು ಸಂಗ್ರಹಿಸಿಕೊಟ್ಟು ಮಹತ್ವದ ಕೊಡುಗೆ ನೀಡಿದವರು ಅವರು. ಹೀಗಾಗಿ ಈ ಕ್ಷೇತ್ರದಲ್ಲಿ ಅವರಿಗೆ ಮೊದಲ ಸನ್ಮಾನ ಸಲ್ಲಬೇಕು ಎಂದು ಪೂಜಾರಿ ಹೇಳಿದರು. ಲಕ್ಷಾಂತರ ಮಂದಿ ಹೊರನಾಡ ಕನ್ನಡಿಗರಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡುವುದು ಸುಲಭದ ಮಾತಲ್ಲ ಎಂದು ಹೇಳಿದ ಪೂಜಾರಿ, ಜಯ ಸುವರ್ಣ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಯವರನ್ನು ಅಭಿನಂದಿಸಿದರು.

ಸೂತಕದ ಕಂದಾಚಾರ ನಿಷೇಧಕ್ಕೆ ಪೂಜಾರಿ ಆಗ್ರಹ

ಕುಣಿಗಲ್ ಸೇರಿದಂತೆ ರಾಜ್ಯದ ನಾನಾ ಕಡೆ ಬಾಣಂತಿಯರು ಹಾಗೂ ಋತುಮತಿಯಾದವರನ್ನು ಮನೆಯಿಂದ ಹೊರಗಡೆ ಕಳುಹಿಸುವ ಪದ್ಧತಿಯನ್ನು ನಿಷೇಧಿಸುವಂತೆ ಸಚಿವ ಜನಾರ್ದನ ಪೂಜಾರಿ ಅವರು ಮುಖ್ಯ ಮಂತ್ರಿಯವರನ್ನು ಆಗ್ರಹಿಸಿದ್ದಾರೆ.

ಸೂತಕದ ಹೆಸರಲ್ಲಿ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿ ಹೊರ ವಲಯದ, ಗಾಳಿ, ಬೆಳಕಿಲ್ಲದ ಕೋಣೆಯಲ್ಲಿ ಕೂಡಿಹಾಕುವ ಅನಿಷ್ಠ ಪದ್ಧತಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಈ ಪದ್ಧತಿಯನ್ನು ತೊಲಗಿಸಲು ಮಠ, ಮಂದಿರಗಳು, ಚರ್ಚ್‌ಗಳು ಮುಂದೆ ಬರಬೇಕು. ಸರಕಾರಿ ಶಾಲೆಗಳಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಇಂಥ ಪದ್ಧತಿಯನ್ನು ತೊಡೆದುಹಾಕುವ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

Jaya_suvarna_sanman_3

ಇಂಥ ಕಂದಾಚಾರಗಳನ್ನು ನೋಡಿಯೂ ನಾವು ಕಣ್ಣುಮುಚ್ಚಿ ಕುಳಿತಿದ್ದೇವೆ. ಮಾತೃದೇವೋಭವ ಎಂದು ಗೌರವಿಸಬೇಕಾದ ಮಹಿಳೆಯರ ಮೇಲೇಯೇ ದೌರ್ಜನ್ಯ ನಡೆಯುತ್ತಿದೆ. ಮುಗ್ಧ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಾವು ಅದೆಂಥ ಸಮಾಜದಲ್ಲಿದ್ದೇವೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುದ್ರೋಳಿ ದೇವಸ್ಥಾನದಲ್ಲಿ ಯಾವುದೇ ಸೂತಕದ ಕಟ್ಟುಪಾಡುಗಳಿಲ್ಲ. ವೇದ, ಮಂತ್ರಗಳ ಅಗತ್ಯವಿಲ್ಲ. ದೇವರನ್ನು ಆರಾಧಿಸಲು ಬೇಕಿರುವುದು ವೇದ, ಶಾಸ್ತ್ರ ಅಲ್ಲ . ಅಲ್ಲಿ ಬೇಕಿರುವುದು ಭಕ್ತಿ ಮಾತ್ರ. ಹಣಕ್ಕಾಗಿ ಪೂಜೆ ಮಾಡಿದರೆ ಅದು ದೇವರನ್ನು ತಲುಪುವುದಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ಸಮಾಜ ಪರಿವರ್ತನೆ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗುವುದು ಸಹಜ.ಕೆಲವು ಸಮಯದ ಬಳಿಕ ಅದರ ನಿಜವಾದ ಪ್ರಯೋಜನ ಸಮಾಜಕ್ಕೆ ಸಿಗುವಾಗ ಜನರು ಅದನ್ನು ಅನುಸರಿಸುತ್ತಾರೆ. ಕುದ್ರೋಳಿ ಕ್ಷೇತ್ರದಲ್ಲೂ ಇಂಥ ಸುಧಾರಣಾ ಕಾರ್ಯಗಳು ಇನ್ನು ಮುಂದೆಯೂ ನಡೆಯುತ್ತಿರಲಿ ಎಂದು ಹಾರೈಸಿದರು.

Jaya_suvarna_sanman_4

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯ ಸಿ. ಸುವರ್ಣ, ತನ್ನ ಸಮಾಜ ಸೇವಾ ಕಾರ್ಯಕ್ಕೆ ಮೂಲ ಪ್ರೇರಣೆ ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ. ದೇವಸ್ಥಾನದ ನವೀಕರಣದ ಸಂದರ್ಭ ಮುಂಬೈಯಲ್ಲಿ ನಿಧಿ ಸಂಗ್ರಹದಲ್ಲಿ ಮಾಡುವುದರ ಜತೆಗೆ ಇತರ ಸಂಸ್ಥೆಗಳಲ್ಲೂ ಸೇವೆ ಮಾಡಲು ಅನುಕೂಲ ವಾಯಿತು.ಇಂಥ ಸೇವೆಯಿಂದಾಗಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು. ಭಾರತ್ ಬ್ಯಾಂಕ್‌ಗೆ ದೇಶಾದ್ಯಂತ ಶಾಖೆಗಳನ್ನು ಸ್ಥಾಪಿಸಲು ಆರ್‌ಬಿಐ ಬ್ಯಾಂಕ್‌ನಿಂದ ಅನುಮತಿ ಪಡೆಯಲು ಜನಾರ್ದನ ಪೂಜಾರಿಯವರು ಶ್ರಮವಹಿಸಿರುವುದನ್ನು ಇಲ್ಲಿ ಸ್ಮರಿಸಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು,ಕೋಶಾಧಿಕಾರಿ ಪದ್ಮರಾಜ್, ಟ್ರಸ್ಟಿಗಳಾದ ಬಿ.ಕೆ. ತಾರಾನಾಥ್, ಮಹೇಶ್ಚಂದ್ರ, ಲೀಲಾ ಜಯ ಸುವರ್ಣ, ಉಪಮೇಯರ್ ಕವಿತ ವಾಸು, ಮುಂಬೈ ಬಿಲ್ಲವ ಸಂಘದ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ವಕ್ತಾರ ಹರಿಕೃಷ್ಣ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು. ದೇವೇಂದ್ರ ಪೂಜಾರಿ ಸ್ವಾಗತಿಸಿದರು.

ಇದಾದ ಬಳಿಕ ಸುವರ್ಣ ಅವರನ್ನು ವಿವಿಧ ಬಿಲ್ಲವ ಸಂಘಟನೆಗಳು ಹಾಗೂ ಭಾರತ್ ಬ್ಯಾಂಕ್ ಶಾಖೆಗಳ ಸಿಬ್ಬಂದಿಗಳು ಹೂಹಾರ ಹಾಕಿ ಗೌರವಿಸಿದರು.

ಪ್ರಸಾದ ರೂಪದಲ್ಲಿ 1500 ಮಹಿಳೆಯರಿಗೆ ಸೀರೆ ವಿತರಣೆ:

ಸನ್ಮಾನ ಸಮಾರಂಭದ ಬಳಿಕ ಶ್ರೀ ಕ್ಷೇತ್ರದ ವತಿಯಿಂದ ಪ್ರಸಾದ ರೂಪದಲ್ಲಿ 1500 ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಉಡುಪಿ, ಪುತ್ತೂರು, ಸುಳ್ಯ ಮುಂತಾದ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮ ಮುಗಿದ ಬಳಿಕವೂ ಮಹಿಳೆಯರು ಸೀರೆಗಾಗಿ ಸರತಿ ಸಾಲಲ್ಲಿ ನಿಂತಿದ್ದರು. ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಹೊರ ರಾಜ್ಯದ ಮಹಿಳೆಯರೂ ಕೂಡ ಸೀರೆಗಳನ್ನು ಸ್ವೀಕರಿಸಿದರು.

Write A Comment