ಮಂಗಳೂರು,ಅ.31 : ಮಂಗಳೂರು ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಪ್ರಸಕ್ತ ನಾಫ್ತಾ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತೊಂದರೆಗಳಾಗಿದೆ. ಕೆಲವೇ ದಿನದಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಎಂಸಿಎಫ್ ಅವಧಿ ಆರು ತಿಂಗಳು ವಿಸ್ತರಣೆಗೆ ಅವಕಾಶ ನೀಡುವ ಮನವಿಗೆ ಪೂರಕ ಸ್ಪಂದನೆ ದೊರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಎಂಸಿಎಫ್ಗೆ ಎಂಆರ್ಪಿಎಲ್ ಮೂಲಕವಾಗಿ ನಾಫ್ತಾ ಬಳಕೆ ಯೋಚನೆಯೂ ಇದೆ. ಹೀಗಾಗಿ ಕೆಲವೇ ದಿನದಲ್ಲಿ ಈ ಸಮಸ್ಯೆ ಬಗೆಹರಿಯಲಿದೆ ಎಂದು ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಅವರು ಹೇಳಿದರು.
ಜನಧನ್ ಸಾಧನೆ ಸಮಾವೇಶ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿಯ ಜನಧನ್ ಯೋಜನೆಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಶೇ.99.25ರ ಗಡಿಯನ್ನು ದಾಟಿದೆ. ನವೆಂಬರ್ ಮೊದಲ ವಾರದಲ್ಲಿ ಶೇ.100ರ ಪ್ರಗತಿ ದಾಖಲಿಸಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ನ.10ರಿಂದ 15ರ ಒಳಗಿನ ಯಾವುದಾದರು ಒಂದು ದಿನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್, ಡಿ.ವಿ.ಸದಾನಂದ ಗೌಡ, ಅನಂತಕುಮಾರ್ ಹಾಗೂ ಇತರ ಗಣ್ಯರ ಉಪಸ್ಥಿತಿಯಲ್ಲಿ ಮಂಗಳೂರಿನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗುವುದು ಎಂದು ನಳಿನ್ ಹೇಳಿದರು.
3 ವಿಶೇಷ ವಿಮಾನ: ಮಂಗಳೂರು-ಬೆಂಗಳೂರು ಹಾಗೂ ಹೊಸದಿಲ್ಲಿಯನ್ನು ಸಂಪರ್ಕಿಸುವ ಹೊಸ ಇಂಡಿಯನ್ ಏರ್ಲೈನ್ ವಿಮಾನ ಸೇವೆ ಹಾಗೂ ಮಂಗಳೂರು-ಬೆಂಗಳೂರು-ಪುಣೆ ಮಧ್ಯೆ ವಿಮಾನಸೇವೆ ಆರಂಭಿಸಬೇಕು ಎಂದು ಈಗಾಗಲೇ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಶೀಘ್ರದಲ್ಲಿ ಇದು ಆರಂಭಗೊಳ್ಳುವ ವಿಶ್ವಾಸವಿದೆ ಎಂದು ಸಂಸದರು ಹೇಳಿದರು.
ಮಂಗಳೂರು,ಬೆಂಗಳೂರು,ಹುಬ್ಬಳ್ಳಿ ಮಧ್ಯೆ ವಿಮಾನ ಸೇವೆ ಆರಂಭಿಸುವ ಕುರಿತಂತೆಯೂ ಪ್ರಸ್ತಾವನೆ ಕಳುಹಿಸಲಾಗಿದೆ. ಮಂಗಳೂರು ಹಾಗೂ ಬೆಂಗಳೂರು ನಿಲ್ದಾಣದಲ್ಲಿ ಟ್ರಾಫಿಕ್ ಸಮಸ್ಯೆ ಇಲ್ಲ ಹಾಗೂ ಖಾಸಗಿ ವಿಮಾನ ಸೇವೆಯವರ ಏಕಸ್ವಾಮ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಹೊಸ ವಿಮಾನ ಸೇವೆ ಆರಂಭಿಸುವಂತೆ ಆಗ್ರಹಿಸಲಾಗಿದೆ. ಇದರಿಂದಾಗಿ ಮಂಗಳೂರು- ಬೆಂಗಳೂರು ಮಧ್ಯೆ ಪ್ರಯಾಣಿಕರಿಗೆ ಜತೆಗೆ ಹೊಸದಿಲ್ಲಿ, ಪುಣೆ ಸಂಚಾರ ಸುಲಭವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಹೆದ್ದಾರಿ ಮೇಲ್ದರ್ಜೆಗೆ: ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸುವ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದರು ಹೇಳಿದರು.