ಉಡುಪಿ: ಕಲ್ಯಾಣಪುರ ಗೊರೆಟ್ಟಿ ಆಸ್ಪತ್ರೆಗೆ ಒಳಪಟ್ಟ ಎಸ್ಆರ್ಎ ಧರ್ಮಭಗಿನಿಯರಿಗೆ ಸೇರಿದ ನೂತನ ಗೊರೆಟ್ಟಿ ಕಾನ್ವೆಂಟಿನ ಉದ್ಘಾಟನೆ ಗುರುವಾರ ಜರುಗಿತು. ಎಸ್ಆರ್ಎ ಧರ್ಮಭಗಿನಿಯವರ ಸುಪಿರೀಯರ್ ಜನರಲ್ ನಂದಿತಾ ಪಿರೇರಾ ನೂತನ ಕಾನ್ವೆಂಟಿನ ಉದ್ಘಾಟನೆಯನ್ನು ನೆರವೇರಿಸಿದರು.
ಕಾನ್ವೆಂಟಿನ ಆಶೀರ್ವಚನ ನೆರವೇರಿಸಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ ಜೆರಾಲ್ಡ್ ಐಸಾಕ್ ಲೋಬೊ ಪವಿತ್ರ ಬಲಿಪೂಜೆ ನೆರವೇರಿಸಿ ನೂತನ ಕಾನ್ವೆಂಟನ್ನು ಆಶೀರ್ವದಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಂದೇಶ ನೀಡಿ ಮಾತನಾಡಿದ ಧರ್ಮಾಧ್ಯಕ್ಷರು ಎಸ್ ಆರ್ ಎ ಧರ್ಮಭಗಿನಿಯವರು ನಡೆಸುತ್ತಿರುವ ಧಾರ್ಮಿಕ ಸಂಸ್ಥೆಯಿಂದ ವಿಶ್ವದಾದ್ಯಂತ ನಡೆಯುತ್ತಿರುವ ಸಾಮಾಜಿಕ ಸೇವೆ ನಿಜಕ್ಕೂ ಅಭಿನಂದನಾರ್ಹ. ತಮ್ಮ ಮಿಶನರಿ ಸೇವೆಯಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೇವೆ ಇಂದು ವಿಶ್ವಕ್ಕೆ ವ್ಯಾಪಿಸಿದೆ. ಬಡವರಿಗೆ ಈ ಭಾಗದಲ್ಲಿ ಆರೋಗ್ಯ ಸೇವೆ ನೀಡುವುದರೊಂದಿಗೆ, ಅತಿ ಹಿಂದುಳಿದ ಬಡ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡಿ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಮಾಡುತ್ತಿರುವ ಅವರ ಸೇವೆ ಮುಂದುವರಿಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವಿನೋದ್ ಗಂಗೊಳ್ಳಿ ದೈವಿಕ್ ಅಮೃತ್ ಮೀಡಿಯಾ ನಿರ್ದೇಶನದ ಸಾಕ್ಷಚಿತ್ರ “ಗೊರೆಟ್ಟಿ ಸುವರ್ಣ ಹೆಜ್ಜೆ ಗುರುತುಗಳು” ಪ್ರದರ್ಶಿಸಲಾಯಿತು.
ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಂ ಸ್ಟ್ಯಾನಿ ಬಿ ಲೋಬೊ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ಫಿಲಿಪ್ ನೆರಿ ಆರಾನ್ಹಾ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರ್ರಿ ವಿನ್ಸೆಂಟ್ ಡಾಯಸ್, ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ನಾಯಕ್, ಎಸ್ ಆರ್ ಎ ಸಂಸ್ಥೆಯ ಸಲಹೆಗಾರರಾದ ಭಗಿನಿ ಸಿಂತಿಯಾ ರೇಸ್, ಪ್ರೊವಿನ್ಸಿಯಲ್ ಸುಪಿರೀಯರ್ ಭಗಿನಿ ಝೀನಾ ಡಿ’ಸೋಜಾ, ಗೊರೆಟ್ಟಿ ಆಸ್ಪತ್ರೆಯ ಆಡಳಿತಾಧಿಕಾರಿ ಭಗಿನಿ ಜೋಯ್ಸ್, ಕಾನ್ವೆಂಟಿನ ಮುಖ್ಯಸ್ಥೆ ಭಗಿನಿ ಲೋರಾ ರೊಡ್ರಿಗಸ್, ಡಾ ಆರ್ ಎನ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಗಿನಿ ಝೀನಾ ಡಿ’ಸೋಜಾ ಸ್ವಾಗತಿಸಿ, ವಿನೋದ್ ಗಂಗೊಳ್ಳಿ ದೈವಿಕ್ ಅಮೃತ್ ಮೀಡಿಯಾ ಹಾಗೂ ಭಗಿನಿ ಲಿನೆಟಾ ಕಾರ್ಯಕ್ರಮ ನಿರ್ವಹಿಸಿದರು. ಭಗಿನಿ ಪ್ರಿಯಾ ರೊಸಾರಿಯೊ ವಂದಿಸಿದರು.