ಮಂಗಳೂರು,ಅ,30: ಹಿರಿಯ ಐಎಎಸ್ ಅಧಿಕಾರಿ ರಶ್ಮಿ ಮಹೇಶ್ ಅವರ ಮೇಲೆ ಇತ್ತೀಚಿಗೆ ಮೈಸೂರಿನಲ್ಲಿ ನಡೆದ ಹಲ್ಲೆಯನ್ನು ಖಂಡಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಘಟಕವು ಪ್ರಕರಣದ ತನಿಖೆಯನ್ನು ಸಿಬಿಐ ಗೆ ಒಪ್ಪಿಸುವಂತೆ ಆಗ್ರಹಿಸಿ ಗುರುವಾರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ 17 ವರ್ಷಗಳ ಸೇವಾವಧಿಯಲ್ಲಿ 23 ವರ್ಗಾವಣೆಯನ್ನು ಪಡೆದಿರುವ ರಶ್ಮಿ ಮಹೇಶ್ ಅವರು ಭ್ರಷ್ಟಾಚಾರ ಮತ್ತು ಸೇವಾ ನ್ಯೂನತೆ ರಹಿತಾ ಓರ್ವ ದಕ್ಷ ಅಧಿಕಾರಿಯಾಗಿದ್ದರು. ಪ್ರಸ್ತುತ್ತ ಮೈಸೂರಿನ ಪ್ರಾದೇಶಿಕ ಅಧಿಕಾರಿಯಾಗಿದ್ದು ಕೊಂಡು, ರಾಜ್ಯ ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕರಾಗಿಯೂ ಹೆಚ್ಚುವರಿ ಸೇವೆಯಲ್ಲಿದ್ದರು.
ಆದರೆ ಈ ಹಿಂದೆ ನಡೆದಿದ್ದ ಭ್ರಷ್ಟಾಚಾರ ಪ್ರಕರಣವನ್ನು ಬಯಲಿಗೆಳೆಯಲು ಪ್ರಯತ್ನಿಸಿದ ರಶ್ಮಿ ಮಹೇಶ್ ಅವರಂತಹ ಓರ್ವ ಹಿರಿಯ ಐ.ಎ.ಎಸ್.ಅಧಿಕಾರಿ ಮೇಲೆ ಕ್ಯಾಂಟಿನ್ ಕೆಲಸಗಾರರು ಹಾಗೂ ಗೂಂಡಾಗಳು ಸೇರಿ ಸುಮಾರು ೪೦ ಮಂದಿಯ ಗುಂಪೊಂದು ಹಲ್ಲೆ ನಡೆಸಿರುವುದು ಖಂಡನೀಯ ಕೃತ್ಯವಾಗಿದೆ. ಈ ಪೂರ್ವ ಯೋಜಿತ ಕೃತ್ಯದ ಹಿಂದಿನ ಷಡ್ಯಂತ್ರವನ್ನು ಭೇದಿಸಲು ರಾಜ್ಯದ ಕಾಂಗ್ರೆಸ್ ಸರಕಾರ ವಿಫಲವಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.
ಮಹಿಳಾ ಐಎಸ್ಐ ಅಧಿಕಾರಿ ಮೇಲೆ ಹಲ್ಲೆನಡೆಡಾರೂ ಎಚ್ಚೆತ್ತುಕೊಳ್ಳದ ರಾಜ್ಯ ಸರಕಾರ ಸಾಮಾನ್ಯ ಮಹಿಳೆಯ ಮೇಲೆ ಪ್ರತಿ ದಿನಾ ನಡೆಯುವ ದೌರ್ಜನ್ಯಕ್ಕೆ ಯಾವ ಕ್ರಮ ಕೈಗೊಂಡಿತ್ತು ಎಂದು ಪ್ರಶ್ನಿಸಿದರು.
ಮಹಿಳಾ ಅಧಿಕಾರಿಯ ಮೇಲೆ ನಡೆದ ಈ ಹಲ್ಲೆ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸ ಬೇಕು. ಮಾತ್ರವಲ್ಲದೇ ರಶ್ಮಿ ಮಹೇಶ್ ಅವರು ಸರಕಾರಕ್ಕೆ ಕಳಿಸಿರುವ ಭ್ರಷ್ಟಾಚಾರದ ವರದಿಯನ್ನು ತಕ್ಷಣ ತನಿಖೆ ಮಾಡಿಸ ಬೇಕು ಎಂದು ಅಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮಹಿಳಾ ಸಂಘಟನೆಯ ನಿಯೋಗವು ಈ ಬಗ್ಗೆ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಸಲ್ಲಿಸಿದರು.