ಮಂಗಳೂರು,ಅ.29: ಸ್ಪಂದನ ಟಿ ವಿ ಮಾಧ್ಯಮದ ಉಡುಪಿ ವರದಿಗಾರ ಫ್ರಭಾಕರ್ ಕೋಟ್ಯಾನ್ ಅವರು ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಅಕ್ರಮ ಮರುಳು ವ್ಯವಹಾರದ ವಿಚಾರದಲ್ಲಿ ಸ್ವಿಂಗ್ ಆಫರೇಷನ್ ಮೂಲಕ ಕಳ್ಳ ವ್ಯವಹಾರ ಬಯಲಿಗೆಳೆಯಲು ಪ್ರಯತ್ನಿಸಿದಾಗ ಬ್ರಹ್ಮಾವರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅರುಣ್ ನಾಯಕ್ ರವರು ಪತ್ರಕರ್ತ ಪ್ರಭಾಕರ್ ರವರ ಮೇಲೆ ದೌರ್ಜನ್ಯ ನಡೆಸಿ, ಅವರ ಕ್ಯಾಮರ ಹಾಗೂ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿರುವ ಕ್ರಮವನ್ನು ಖಂಡಿಸಿರುವ ಕರ್ನಾಟಕ ಪತ್ರಕರ್ತರ ಸಂಘದ ದ.ಕ.ಜಿಲ್ಲಾ ಘಟಕವು ಈ ಬಗ್ಗೆ ಕೂಲಂಕುಶ ತನಿಖೆ ನಡೆಸಿ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪಶ್ಚಿಮ ವಲಯ ಐಜಿಪಿ ಶ್ರೀ ಅಮೃತ ಪಾಲ್ ಅವರಿಗೆ ಮನವಿ ಸಲ್ಲಿಸಿದೆ.
ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದ್ದು, ಸ್ವಂತಂತ್ರವಾಗಿ ನಿರ್ಭಯವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗುತ್ತಿಲ್ಲ. ಇದೀಗ ಈ ಪ್ರಕರಣದಲ್ಲಿ ವರದಿಗಾರನಿಗೆ ತೊಂದರೆ ಕೊಟ್ಟಿರುವ ವಿಚಾರಕ್ಕೆ ಸಂಭಂಧಿಸಿದಂತೆ, ಸರಿಯಾದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಹಾಗೂ ಪತ್ರಕರ್ತರಿಗೆ ಸ್ವಂತಂತ್ರವಾಗಿ ನಿರ್ಭಯವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿ ಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಕಾರ್ಯದರ್ಶಿ ಸತೀಶ್ ಕಾಪಿಕಾಡ್, ಸ್ಪಂದನ ಟಿ.ವಿಯ ದ.ಕ.ಜಿಲ್ಲಾ ಸುದ್ಧಿ ವಿಭಾಗದ ಮುಖ್ಯಸ್ಥ ರಾಮ್ದಾಸ್, ವರದಿಗಾರ ವಿನೋದ್, ಪತ್ರಕರ್ತ ಎಮ್.ಜೆ.ರಾವ್ ಹಾಗೂ ಮತ್ತಿತರ ವಾರ್ತಾ ವಾಹಿನಿಯ ವರದಿಗಾರರು ಮತ್ತು ಕ್ಯಾಮರಮೆನ್ಗಳು ಇದ್ದರು.

